Asianet Suvarna News Asianet Suvarna News

ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ತುಕಾರಾಂ, ಸೋತ ಶ್ರೀರಾಮುಲು: 20 ವರ್ಷಗಳ ಬಳಿಕ‌ ಕಾಂಗ್ರೆಸ್ ಗೆಲವು!

ಬಳ್ಳಾರಿ ಲೋಕಸಭೆ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಗ್ಯಾರಂಟಿ ಗೆದ್ರೇ ಬಿಜೆಪಿ ಅತಿಯಾದ ವಿಶ್ವಾಸ ಸೋತಿದೆ‌.  ಮೋದಿ ವರ್ಚಸ್ಸು ಮತ್ತು ಗ್ಯಾರಂಟಿಯನ್ನೇ ನಂಬಿದ ಶ್ರೀರಾಮುಲು ವಿಧಾನಸಭೆ ಸೋಲಿನ ಅನುಕಂಪ ವರ್ಕೌಟ್ ಅಗುತ್ತದೆ ಎನ್ನುವ ಅತಿಯಾದ ವಿಶ್ವಾಸದಲ್ಲಿದ್ರು. 

Lok Sabha Elections 2024 Congress Candidate E Tukaram won the Ballari Lok Sabha election B Sriramulu lost gvd
Author
First Published Jun 4, 2024, 9:17 PM IST | Last Updated Jun 4, 2024, 9:18 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಜೂ.04): ಬಳ್ಳಾರಿ ಲೋಕಸಭೆ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಗ್ಯಾರಂಟಿ ಗೆದ್ರೇ ಬಿಜೆಪಿ ಅತಿಯಾದ ವಿಶ್ವಾಸ ಸೋತಿದೆ‌.  ಮೋದಿ ವರ್ಚಸ್ಸು ಮತ್ತು ಗ್ಯಾರಂಟಿಯನ್ನೇ ನಂಬಿದ ಶ್ರೀರಾಮುಲು ವಿಧಾನಸಭೆ ಸೋಲಿನ ಅನುಕಂಪ ವರ್ಕೌಟ್ ಅಗುತ್ತದೆ ಎನ್ನುವ ಅತಿಯಾದ ವಿಶ್ವಾಸದಲ್ಲಿದ್ರು. ಆದರೆ ಕಾಂಗ್ರೆಸ್ಸಿನ ಒಗ್ಗಟ್ಟಿನ ಮಂತ್ರ ಮತ್ತು ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಸಂಡೂರು ಶಾಸಕ ತುಕಾರಾಂ ಅವರನ್ನು ಬಳ್ಳಾರಿ ಸಂಸದರನ್ನಾಗಿ ಮಾಡಿದೆ. ಇನ್ನೂ ಕಾಂಗ್ರೆಸ್ ಗೆಲುವಿನ ಸಂಪೂರ್ಣ ರೂವಾರಿ ಸಚಿವ ನಾಗೇಂದ್ರ ಎಂದ್ರು ತಪ್ಪಾಗಲಿಕ್ಕಿಲ್ಲ. 

ಯಾಕೆಂದರೆ ವಿಧಾನಸಭೆಯಲ್ಲಿ ಶ್ರೀರಾಮುಲು ಸೋಲಿಸಿದ್ದ ನಾಗೇಂದ್ರ ಅದೇ ತಂತ್ರಗಾರಿಕೆಯನ್ನು ಮುಂದುವರಿಸೋ ಮೂಲಕ ಮತ್ತೊಮ್ಮೆ ಶ್ರೀರಾಮುಲು ಸೋಲಿಸಿದ್ದಾರೆ. ಬಳ್ಳಾರಿ ವಿಜಯನಗರ ಎರಡು ಜಿಲ್ಲೆಯ ನಾಯಕರನ್ನು ಒಗ್ಗೂಡಿಸುವ ಮೂಲಕ ವಿಜಯನಗರ ಜಿಲ್ಲೆಯ ಉಸ್ತುವಾರಿ ಜಮೀರ್ ಅವರ ನೆರವಿನಿಂದ ಬಳ್ಳಾರಿ ಲೋಕಸಭೆ ವ್ಯಾಪ್ತಿಯ ಎಂಟು ಕ್ಷೇತ್ರದ ಪೈಕಿ ಏಳು  ವಿಧಾನಸಭೆ ಕ್ಷೇತ್ರದಲ್ಲಿಯೂ ಭರ್ಜರಿ ಲೀಡ್ ತೆಗೆದುಕೊಳ್ಳುವ ಮೂಲಕ ( ಹೊಸಪೇಟೆ ಕ್ಷೇತ್ರ‌ ಕೇವಲ165  ಬಿಜೆಪಿ ಲೀಡ್)  ಒಂದು ಲಕ್ಷ ಮತಗಳ ಅಂತರದಿಂದ ತುಕಾರಾಂ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ಸಿಯಾಗಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರ ಫಲಿತಾಂಶ: ಸತತ ಮೂರು ಸೋಲಿನ ಸೇಡು ತೀರಿಸಿಕೊಂಡ‌ ಕಾಂಗ್ರೆಸ್, ಫಲ ನೀಡದ ಬಿಜೆಪಿ ತಂತ್ರ!

ಆರಂಭದಿಂದಲೂ ತುಕಾರಾಂ ಮುನ್ನಡೆ: ಸಾರ್ವತ್ರಿಕ ಚುನಾವಣೆಯಲ್ಲಿ ಸಂಡೂರಿನ ಶಾಸಕ ತುಕಾರಾಂ ನಾಲ್ಕು ಬಾರಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರನಾಗಿದ್ರು. ಇದೀಗ ಇದೇ ಮೊದಲ ಬಾರಿಗೆ ಲೋಕಸಭೆ ಕಣಕ್ಕಿಳಿದ ತುಕಾರಾಂ ಮತ್ತೊಮ್ಮೆ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ  ಎನ್ನುವುದನ್ನು ಸಾಭಿತುಪಡಿಸಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಮತಗಳ ಎಣಿಕೆ 19 ಸುತ್ತುಗಳಲ್ಲಿ ಇಂದು ಬಳ್ಳಾರಿಯ ಆರ್ ವೈ ಎಂ.ಸಿ ಇಂಜಿನಿಯರಿಂಗ್ ಕಾಲೇಜಿನ 8 ಕೊಠಡಿಗಳಲ್ಲಿ ನಡೆಯಿತು. ಆರಂಭದ ಸುತ್ತಿನಿಂದಲೂ ಬಹುತೇಕ ಮುನ್ನಡೆಯನ್ನು ಕಾಯ್ದುಕೊಂಡು ಬಂದ ಕಾಂಗ್ರೆಸ್ ಅಭ್ಯರ್ಥಿ  ತುಕಾರಾಂ  ಒಂದು ಲಕ್ಷ ಮತಗಳ ಅಂತರದಿಂದ ಸುಲಭವಾಗಿ ಗೆದ್ದಿದ್ದಾರೆ. ತುಕಾರಾಂ ಅವರ ಗೆಲುವು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ರಾಜ್ಯ ಸಭಾಸದಸ್ಯ ಡಾ ನಾಸೀರ್ ಹುಸೇನ್  ಮತ್ತು ಅವಳಿ ಜಿಲ್ಲೆಯ ಶಾಸಕರಿಗೆ ಮತ್ತಷ್ಟು ಬಲ ದೊರೆತಂತಾಗಿದೆ.  

ಗ್ಯಾರೆಂಟಿಗಳ ಎಫೆಕ್ಟ್: ತುಕಾರಾಂ ಅವರ ಗೆಲುವಿಗೆ ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ  ಗ್ಯಾರಂಟಿ ಯೋಜನೆಗಳ ಎಫೆಕ್ಟ್  ಪ್ರಮುಖ ಕಾರಣ ಎಂದ್ರು ತಪ್ಪಾಗಲಾರದು. ಮಹಿಳೆಯರಿಗೆ ಎರಡು ಸಾವಿರ, ಫ್ರೀ ಬಸ್, ಅನ್ನಭಾಗದ ಅಕ್ಕಿ ಹಣಕ್ಕೆ ಬಳ್ಳಾರಿ ಲೋಕಸಭೆ ಕ್ಷೇತ್ರದ ಮಹಿಳಾ ಮತದಾರರು ಕಾಂಗ್ರೆಸ್ ಗೆ ಋಣ ತೀರಿಸಿದಂತಿದೆ.  

ವರ್ಷದ ಅಂತರದಲ್ಲಿ ಸತತ ಎರಡು ಸೋಲು: ರಾಜಕೀಯ ಜೀವನದ ಆರಂಭದಲ್ಲಿ ಅಂದರೆ 1999 ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಶ್ರೀರಾಮುಲು ನಂತರದ ಚುನಾವಣೆಗಳಲ್ಲಿ ಕ್ಷೇತ್ರ, ಪಕ್ಷ ಬದಲಿಸುತ್ತಾ   ಹೋದರು ಗೆಲುವು ಸಾಧಿಸುತ್ತಲೇ  ಇದ್ದರು.. ಆದರೆ , ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಬಿಟ್ಟಿದ್ದೇ ಅವರಿಗೆ ಮುಳುವಾದಂತೆ ಅಯ್ತು.. 2013ರ ಬಳಿಕ ಶ್ರೀರಾಮುಲು ಕ್ಷೇತ್ರ ಬಿಟ್ಟ ಮೇಲೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಜಯವನ್ನು ಮುಂದುವರೆಸುತ್ತಲೇ ಬಂತು. ಕಳೆದ ಚುನಾವಣೆಯಲ್ಲಿ ಸೋಲು ಕಂಡ ಶ್ರೀರಾಮುಲಗೆ  ಸೋಲಿಲ ಮೇಲೆ ಸೋಲು ಎ‌ನ್ನುವಂತೆ ಇದೀಗ ಮತ್ತೊಮ್ಮೆ ಲೋಕಸಭೆ ಸೋತು ಮರ್ಮಾಘಾತ ಅನುಭವಿಸಿದ್ದಾರೆ. 

ಎರೆಡು ದಶಕದ ನಂತರ: 1952 ರಿಂದ 1999 ರ ವರೆಗಿನ ಸಾರ್ವತ್ರಿಕ ಮತ್ತು 2000 ಇಸ್ವಿಯಲ್ಲಿ ನಡೆದ ಉಪ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರು. ಆದರೆ 2004 ರಲ್ಲಿ ಜನಾರ್ದನ ರೆಡ್ಡಿ , ಶ್ರೀರಾಮುಲು ಗುಂಪು ಮತ್ತು ಸುಷ್ಮಾ ಸ್ವರಾಜ್  ಅವರಿಂದ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಕಮಲದ ಕಲರವ ಆರಂಭಗೊಂಡಿತ್ತು. 2004, 2009  ಮತ್ತು 2014, 2019 ರಲ್ಲಿ ಮೋದಿ ಮೇನಿಯಾದಿಂದ ಸತತ ಬಿಜೆಪಿ ಸತತ ಗೆಲ್ಲುತ್ತಲೇ ಬಳ್ಳಾರಿಯನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿತ್ತು.(  2018 ಉಪ ಚುನಾವಣೆ ಕಾಂಗ್ರೆಸ್ ಗೆದ್ದಿತ್ತು)  ಎರಡು ದಶಕದ ನಂತರ ಕಾಂಗ್ರೆಸ್ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 

ಉಪಚುನಾವಣೆ: ಹಾಲಿ ಶಾಸಕ ತುಕಾರಾಂ  ಸಂಸದರಾದ ಕಾರಣ ತೆರವಾಗುವ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳು ತುಕಾರಾಂ ಅವರ ಮಗಳು  ಎನ್ನುವ ಚರ್ಚೆ ಜೋರಾಗಿದೆ.  

ಫಲಕೊಡಲಿಲ್ಲ: ಸ್ನೇಹಿತ ಶ್ರೀರಾಮುಲು ಗೆಲುವಿಗಾಗಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಕೆ.ಆರ್.ಪಿ ಪಕ್ಷವನ್ನು ಬಿಜೆಯೊಳಗೆ ವಿಲೀನ ಮಾಡಿದರು. ಪತ್ನಿ ಲಕ್ಷ್ಮೀ ಅರುಣಾ ಅವರಿಂದ ಪ್ರಚಾರ ನಡೆಸುದರೂ ಮತದಾರ ಮಾತ್ರ ಆಶಿರ್ವಾದ ಮಾಡಲಿಲ್ಲ. ಇದಷ್ಟೇ ಅಲ್ಲದೇ ಕಲ್ಯಾಣಿ ಕರ್ನಾಟದ ಎಲ್ಲಾ ಐದು ಕ್ಷೇತ್ರಗಳಲ್ಲಿ, ಮತ್ತು ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಭಾರಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಪೂರ್ತಿ  ತಂದಂತಾಗಿದೆ.

ಅಣ್ಣ ತಂಗಿಗೆ ಸೋಲು: ಬಳ್ಳಾರಿಯಲ್ಲಿ ಅಣ್ಣ ಶ್ರೀರಾಮುಲು ಅವರಿಗೆ ಸೋಲಾದರೆ, ಇದೇ ಬಳ್ಳಾರಿ ಕ್ಷೇತ್ರದಲ್ಲಿ 2009 ರಲ್ಲಿ ಅಲ್ಪ ಮತಗಳಿಂದ ಗೆದ್ದಿದ್ದ ಶ್ರೀರಾಮುಲು ಅವರ ಸಹೋದರಿ ಜೆ.ಶಾಂತಾ ಅವರು ಪ್ರಸಕ್ತ ಚುನಾವಣೆಯಲ್ಲಿ ಆಂದ್ರಪ್ರದೇಶದ ಹಿಂದುಪುರ ಕ್ಷೇತ್ರದಲ್ಲಿ ವೈಎಸ್ ಆರ್ ಪಕ್ಷದಿಂದ ಕಣಕ್ಕಿಳಿದು ಸೋಲು ಕಂಡಿದ್ದಾರೆ. ಶಾಂತಾ ವಿರುದ್ಧ ಟಿಡಿಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಕಲಬುರಗಿ ಲೋಕಸಭೆ ಮತಕ್ಷೇತ್ರ: ಮಾವನ ಸೋಲಿನ ಸೇಡು ತೀರಿಸಿಕೊಂಡ ಅಳಿಯ ರಾಧಾಕೃಷ್ಣ ದೊಡ್ಮನಿ

ಕಾಂಗ್ರೆಸ್ ವಿಜಯೋತ್ಸವ ಮತ ಎಣಿಕೆ ಕೇಂದ್ರಕ್ಕೆ ಬಾರದ ಶ್ರೀರಾಮುಲು: ಕಾಂಗ್ರೆಸ್ ಗೆಲುವು ಸನ್ನಿಹಿತವಾಗುತ್ತಿದ್ದಂತ ಎಣಿಕೆಯ  ಕೇಂದ್ರದ ಮುಂದೆ ಸೇರಿದ ಕಾಂಗ್ರೆಸ್ ಪಕ್ಷದ ಬೆಂಬಲಿಗರು, ಕಾರ್ಯಕರ್ತರು, ಮುಖಂಡರು ಪಕ್ಷದ ಬಾವುಟ ಹಿಡಿದು, ಜಯ ಘೋಷ ಹಾಕುತ್ತ ಪಟಾಕಿ ಸಿಡಿ, ಸಿಹಿ ಹಂಚಿ ಸಂಭ್ರಮಿಸಿದರು. ಆದರೆ ಮತ ಎಣಿಕೆ ಆರಂಭದಿಂದ ಮುಕ್ತಾಯದ ಹಂತಕ್ಕೆ ಬಂದ್ರೂ ಮತ ಎಣಿಕೆ ಕೇಂದ್ರದತ್ತ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಬರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ತುಕರಾಂ ಅವರು ಸಹ ಆರಂಭದಲ್ಲಿ ಬಂದಿರಲಿಲ್ಲ. ಗೆಲುವಿನ ಸುಳಿವು ದೊರೆತ ಮೇಲೆ ಬೆಂಬಲಿಗರೊಂದಿಗೆ ಬಂದು ಸಂಭ್ರಮಿಸಿದರು.. 

ಬಿಜೆಪಿ ವಿಜಯೋತ್ಸವಕ್ಕೆ ತಣ್ಣೀರು: ಚುನಾವಣೋತ್ತರ ಸಮೀಕ್ಷೆಯಿಂದ ಗೆಲುವಿನ ಆಸೆಹೊಂದಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಳ್ಳಾರಿಯ ಎಸ್ಪಿ ಸರ್ಕಲ್ ಬಳಿಯ ಹಳೇಯ ಬಿಜೆಪಿ ಕಚೇರಿಯ ಬಳಿ ವಿಜಯೋತ್ಸವ ಆಚರಿಸಲು ವೇದಿಕೆ ನಿರ್ಮಿಸಿದ್ದರು.  ಊಟದ ತಯಾರಿ ಮತ್ತು ಭರ್ಜರಿ ಮೆರವಣಿಗೆಗೆ ಸಿದ್ದತೆ ನಡೆದಿತ್ತು. ಆದರೆ ಅಕಾಲಿಕ ಮಳೆ ಎಂಬಂತೆ ತುಕಾರಾಂ ಗೆಲುವು ಬಿಜೆಪಿ ಸಂಭ್ರಮಕ್ಕೆ  ತಣ್ಣೀರೆರಚಿತು.

Latest Videos
Follow Us:
Download App:
  • android
  • ios