Asianet Suvarna News Asianet Suvarna News

ಮತ್ತೊಮ್ಮೆ ಮೋದಿ ಸರ್ಕಾರ: ರಾಮಮಂದಿರ, ಸಿಎಎಯಿಂದ ಬಿಜೆಪಿಗೆ ಲಾಭ: ಸಮೀಕ್ಷೆ!

ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಸೂಕ್ತ ಎಂದು ಶೇ.78ರಷ್ಟು ಜನರು ಹೇಳಿದ್ದಾರೆ. ವಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಪರ ಶೇ.21ರಷ್ಟು ಮಂದಿ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಏಷ್ಯಾನೆಟ್‌ ಡಿಜಿಟಲ್‌ ನೆಟ್‌ವರ್ಕ್‌ ಸಮೀಕ್ಷೆ ಹೇಳಿದೆ. 

Lok Sabha Election 2024 Narendra Modi Govt Again Asianet Digital Network Survey gvd
Author
First Published Mar 28, 2024, 5:49 AM IST

ಬೆಂಗಳೂರು (ಮಾ.28): ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಸೂಕ್ತ ಎಂದು ಶೇ.78ರಷ್ಟು ಜನರು ಹೇಳಿದ್ದಾರೆ. ವಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಪರ ಶೇ.21ರಷ್ಟು ಮಂದಿ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಏಷ್ಯಾನೆಟ್‌ ಡಿಜಿಟಲ್‌ ನೆಟ್‌ವರ್ಕ್‌ ಸಮೀಕ್ಷೆ ಹೇಳಿದೆ. ಮೋದಿ ಅಲೆಯನ್ನು ತಡೆಯಲು ಇಂಡಿಯಾ ಕೂಟಕ್ಕೆ ಸಾಧ್ಯವಿಲ್ಲ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಯಾತ್ರೆಯಿಂದ ಅವರ ಪಕ್ಷಕ್ಕೆ ಹೆಚ್ಚು ಲಾಭವಿಲ್ಲ ಎಂದೂ ಈ ಸಮೀಕ್ಷೆ ನುಡಿದಿದೆ.

ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಆನ್‌ಲೈನ್‌ನಲ್ಲಿ ನಡೆಸಿದ ಮೆಗಾ ‘ಮೂಡ್‌ ಆಫ್‌ ದ ನೇಷನ್‌’ ಸಮೀಕ್ಷೆಯ ಪ್ರಕಾರ ಮುಂದಿನ ಚುನಾವಣೆಯಲ್ಲಿ ಎನ್‌ಡಿಎಗೆ ಪೈಪೋಟಿ ನೀಡಲು ವಿಪಕ್ಷಗಳು ದೊಡ್ಡ ಮಟ್ಟದ ಸಾಹಸ ಪ್ರದರ್ಶನ ಮಾಡಬೇಕಿದೆ ಎನ್ನುವುದು ಕಂಡುಬಂದಿದೆ. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮಾ.13- ಮಾ.27 ರ ನಡುವೆ ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿಯಲ್ಲಿ ನಡೆಸಿದ ವ್ಯಾಪಕ ಸಮೀಕ್ಷೆಗೆ 7,59,340 ಪ್ರತಿಕ್ರಿಯೆಗಳು ಬಂದಿವೆ. ಪ್ರಸ್ತುತ ಭಾರತದ ನೈಜ ಚಿತ್ರಣ ಹಾಗೂ ಭಾರತದ ಮೂಲೆ ಮೂಲೆಗಳಲ್ಲಿ ಚರ್ಚೆ ಆಗುತ್ತಿರುವ ವಿಷಯಗಳ ಕುರಿತು ಸಮೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿತ್ತು.

ದಾವಣಗೆರೆ ಬಂಡಾಯ ಬಗೆಹರಿಸಿದ ಬಿಎಸ್‌ವೈ: ರವೀಂದ್ರನಾಥ್‌ ನೇತೃತ್ವದಲ್ಲಿ ಚುನಾವಣೆಗೆ ಸರ್ವಸಮ್ಮತಿ

ಸಮೀಕ್ಷೆಯಲ್ಲಿ ಏನಿದೆ?
ಮತ್ತೆ ಎನ್‌ಡಿಎ ಸರ್ಕಾರವೇ ಸೂಕ್ತ:
ಮುಂದಿನ ಐದು ವರ್ಷಗಳ ಕಾಲ ಭಾರತವನ್ನು ಆಳಲು ಯಾರು ಸೂಕ್ತರು ಎಂದು ಎನ್ನುವುದಕ್ಕೆ ಮತಗಳು ಏಕಪಕ್ಷೀಯವಾಗಿದ್ದು, ಶೇಕಡಾ 78.6 ರಷ್ಟು ಜನರು ಎನ್‌ಡಿಎ ಸರ್ಕಾರವನ್ನು ಆರಿಸಿದ್ದಾರೆ ಮತ್ತು ಶೇಕಡಾ 21.4 ರಷ್ಟು ಜನರು ಇಂಡಿಯಾ ಮೈತ್ರಿಯ ಪರ ನಿಂತಿದ್ದಾರೆ.

ಸಿಎಎ ಜಾರಿಯಿಂದ ಬಿಜೆಪಿಗೆ ಲಾಭ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ ನರೇಂದ್ರ ಮೋದಿ ಸರ್ಕಾರದ ನಿರ್ಧಾರವು ಬಿಜೆಪಿಯ ಚುನಾವಣಾ ಭವಿಷ್ಯಕ್ಕೆ ಪಾಸಿಟಿವ್‌ ಪರಿಣಾಮ ಬೀರುತ್ತದೆ ಎಂದು ಶೇ.51.1 ರಷ್ಟು ಜನರು ನಂಬಿದ್ದಾರೆ. ಡಿಜಿಟಲ್ ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇಕಡಾ 26.85 ರಷ್ಟು ಜನರು ಸಿಎಎ ನಿರ್ಧಾರವು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಿದ್ದರೆ, 22.03 ಶೇಕಡಾ ಜನರು ಪಕ್ಷದ ಕಾರ್ಯಕ್ಷಮತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕುತೂಹಲಕಾರಿಯಾಗಿ, ತಮಿಳುನಾಡಿನಿಂದ ಪ್ರತಿಕ್ರಿಯಿಸಿದವರಲ್ಲಿ 48.4 ಪ್ರತಿಶತದಷ್ಟು ಜನರು ಸಿಎಎ ನಿಯಮಗಳನ್ನು ಸೂಚಿಸುವ ನಿರ್ಧಾರವು ಬಿಜೆಪಿಯ ಚುನಾವಣಾ ಅದೃಷ್ಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿ ಮೋದಿಗೆ ವರ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅತಿದೊಡ್ಡ ಸಾಧನೆ ಯಾವುದು ಎನ್ನುವ ಪ್ರಶ್ನೆಗೆ ಶೇ.38.11ರಷ್ಟು ಜನರು ಸರ್ಕಾರ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳೇ ದೊಡ್ಡ ಸಾಧನೆ ಎಂದಿದ್ದಾರೆ. ಶೇ.26.41 ರಷ್ಟು ಜನರು ಸರ್ಕಾರದ ಡಿಜಿಟಲ್ ಇಂಡಿಯಾ ಎಂದು ಹೇಳಿದ್ದರೆ, ಶೇ.11.46 ರಷ್ಟು ಜನರು ಮೋದಿ ಸರ್ಕಾರದ ''ಆತ್ಮನಿರ್ಭರ್ ಭಾರತ್'' (ಸ್ವಾವಲಂಬಿ ಭಾರತ) ಬದಲಾವಣೆಯನ್ನು ತಮ್ಮ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಹಿಂದಿ ಹೃದಯಭಾಗ (ಶೇ.30.04)ದ ರಾಜ್ಯಗಳು ರಾಮಮಂದಿರ ಭರವಸೆ ಈಡೇರಿಸಿದ್ದೇ ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದು ಹೇಳಿದೆ. 

ವಿಶೇಷವೆಂದರೆ, ತೆಲುಗು ಭಾಷಿಕ ಜನರಲ್ಲೂ ಇದೇ ದೃಷ್ಟಿಕೋನ ಹೊರಹೊಮ್ಮಿದೆ. ಶೇ.30.83ರಷ್ಟು ಮಂದಿ ರಾಮ ಮಂದಿರ ಭರವಸೆ ಈಡೇರಿಸಿದ್ದೇ ಮೋದಿ ಸರ್ಕಾರದ ಸಾಧನೆ ಎಂದಿದ್ದಾರೆ. ಅದರೊಂದಿಗೆ ಇವರು ಡಿಜಿಟಲ್‌ ಇಂಡಿಯಾ ಕಾರ್ಯಕ್ರಮಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಮಮಂದಿರವೂ ಪ್ರಮುಖ ವಿಚಾರ: ರಾಮ ಮಂದಿರದ ಕುರಿತಾಗಿಯೇ ಇದ್ದ ಮೂಡ್‌ ಆಫ್‌ ದ ನೇಷನ್‌ ಸಮೀಕ್ಷೆಯ ಇನ್ನೊಂದು ಪ್ರಶ್ನೆಗೆ, ಶೇ.57.16ರಷ್ಟು ಮಂದಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಮ ಮಂದಿರ ವಿಚಾರವೂ ಒಂದು ಪ್ರಮುಖ ಅಂಶ ಎಂದು ಹೇಳಿದ್ದಾರೆ. ಶೇ.31.16ರಷ್ಟು ಮಂದಿ ರಾಮ ಮಂದಿರ ವಿಚಾರ ಲೋಕಸಭೆ ಚುನಾವಣೆಯಲ್ಲಿ ಪ್ರಮುಖವಾಗೋದಿಲ್ಲ ಎಂದಿದ್ದಾರೆ.

ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯೇ ಸೂಕ್ತ: ಪ್ರಧಾನಿ ಸ್ಥಾನಕ್ಕೆ ಯಾರು ಸೂಕ್ತ ಎನ್ನುವ ಪ್ರಶ್ನೆಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಶೇ.51.06ರಷ್ಟು ಮತ ಬಿದ್ದಿದ್ದರೆ. ರಾಹುಲ್‌ ಗಾಂಧಿ ಶೇ.46.45ರಷ್ಟು ಮತಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಇನ್ನು ರಾಹುಲ್‌ ಗಾಂಧಿಗೆ ಹೆಚ್ಚಿನ ಮತಗಳು ಬಂದಿರುವುದು ಕೇವಲ ಒಂದು ರಾಜ್ಯದಿಂದ ಮಾತ್ರ. ಕೇರಳದ ಶೇ. 50.59ರಷ್ಟು ಮಂದಿ ರಾಹುಲ್‌ ಗಾಂಧಿ ಪ್ರಧಾನಿ ಪಟ್ಟಕ್ಕೆ ಸೂಕ್ತ ಎಂದಿದ್ದಾರೆ. ಇದೊಂದು ರಾಜ್ಯವನ್ನು ಹೊರತುಪಡಿಸಿದರೆ, ದೇಶದ ಶೇ.80ರಷ್ಟು ಮಂದಿ ನರೇಂದ್ರ ಮೋದಿ ಅವರೇ ದೇಶದ ನಾಯಕರಾಗಲು ಸೂಕ್ತ ಎಂದು ಮತ ಹಾಕಿದ್ದಾರೆ.

ಗ್ಯಾರಂಟಿಗಿಂತ ಅಭಿವೃದ್ಧಿಯೇ ಮುಖ್ಯ: ಸಮೀಕ್ಷೆಯಿಂದ ವ್ಯಕ್ತವಾದ ಮತ್ತೊಂದು ಪ್ರಮುಖ ಅಂಶವೆಂದರೆ, ಮತದಾರರು ತಮಗೆ ಹೆಚ್ಚು ಮುಖ್ಯವಾದುದನ್ನು ನಿರ್ಧರಿಸುವಾಗ ಉಚಿತ ಮತ್ತು ಜನಪ್ರಿಯ ಭರವಸೆಗಳಿಗೆ ಜೋತುಬೀಳುವ ದಶಕಗಳ ಹಿಂದಿನ ಅಭ್ಯಾಸವನ್ನು ತ್ಯಜಿಸಿದ್ದಾರೆ. ಪ್ರತಿಕ್ರಿಯಿಸಿದ ಶೇ.80.5 ರಷ್ಟು ಅಭಿವೃದ್ಧಿ ವಿಚಾರವೇ ತಮ್ಮ ಮತವನ್ನು ನಿರ್ಧಾರ ಮಾಡುತ್ತದೆ ಎಂದಿದ್ದಾರೆ. ಜಾತಿ ಡೈನಾಮಿಕ್ಸ್‌, ಅಭ್ಯರ್ಥಿಗಳ ಪ್ರೊಫೈಲ್‌ ಹಾಗೂ ಉಚಿತ ಘೋಷಣೆಗಳು ಮುಖ್ಯವಾಗೋದಿಲ್ಲ. ಇದು ಮತದಾರರ ವಯಸ್ಸನ್ನು ಪ್ರತಿಬಿಂಬಿಸುತ್ತದೆ ಮತ್ತು ಅನೇಕ ವಿಧಗಳಲ್ಲಿ, ತಮ್ಮ ಚುನಾವಣಾ ತಂತ್ರವನ್ನು ಪುನರ್ವಿಮರ್ಶಿಸಲು ಪ್ರತಿಪಕ್ಷಗಳಿಗೆ ಅವಕಾಶವನ್ನು ನೀಡುತ್ತದೆ.

ಮೋದಿ ಅಲೆ ತಡೆಯಲು ಇಂಡಿಯಾ ಕೂಟಕ್ಕೆ ಸಾಧ್ಯವಿಲ್ಲ: ವಿರೋಧ ಪಕ್ಷಗಳ ಬಗ್ಗೆ ಹೇಳುವುದಾದರೆ, ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಸಮೀಕ್ಷೆಯು 60.33 ಪ್ರತಿಶತದಷ್ಟು ಜನರು, ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿಯೂ ಸಹ 2024 ರ ಲೋಕಸಭೆಯಲ್ಲಿ ಚುನಾವಣೆಯಲ್ಲಿ ಮೋದಿ ಅಲೆಯನ್ನು ತಡೆಯಲು ಇಂಡಿಯಾ ಮೈತ್ರಿಗೆ ಸಾಧ್ಯವಾಗೋದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ. 32.28ರಷ್ಟು ಜನರು ಮಾತ್ರವೇ ಇಂಡಿಯಾ ಮೈತ್ರಿಕೂಟ ಮೋದಿ ಅಲೆಯನ್ನು ತಡೆಯಲಿದೆ ಎಂದು ಹೇಳಿದ್ದಾರೆ.

ರಾಹುಲ್‌ ಯಾತ್ರೆಯಿಂದ ಪಕ್ಷಕ್ಕೆ ಲಾಭವಿಲ್ಲ: ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ರಾಜೀನಾಮೆ ಸಂಕಷ್ಟಗಳನ್ನು ಎದುರಿಸಿರುವ ಕಾಂಗ್ರೆಸ್‌ ಪಕ್ಷದ ಕುರಿತಾಗಿ ಕೆಲವು ಆತಂಕಕಾರಿ ಅಂಶಗಳನ್ನು ಸಮೀಕ್ಷೆ ಹೇಳಿದೆ. ಸಮೀಕ್ಷೆಯಲ್ಲಿ 54.76 ಪ್ರತಿಶತದಷ್ಟು ಜನರು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಮುಂಬರುವ ಲೋಕಸಭಾ ಚುನಾವಣೆ 2024 ರಲ್ಲಿ ಪಕ್ಷದ ಭವಿಷ್ಯವನ್ನು ಯಾವುದೇ ರೀತಿಯಲ್ಲೂ ಬದಲಾಯಿಸೋದಿಲ್ಲ ಎಂದಿದ್ದಾರೆ. ಶೇ.38.12ರಷ್ಟು ಮಂದಿ ನ್ಯಾಯ್‌ ಯಾತ್ರೆಯಿಂದ ಕಾಂಗ್ರೆಸ್‌ ಕೆಲವು ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದಾರೆ.

ಮಣಿಪುರ ಹಿಂಸೆ, ನಿರುದ್ಯೋಗ ಮೋದಿಗೆ ಕಪ್ಪುಚುಕ್ಕೆ: ನರೇಂದ್ರ ಮೋದಿ ಸರ್ಕಾರದದ ಅತಿದೊಡ್ಡ ವೈಫಲ್ಯ ಯಾವುದು ಎನ್ನುವ ಪ್ರಶ್ನೆಗೆ ಶೇ.32.86ರಷ್ಟು ಮಂದಿ ಮಣಿಪುರ ಹಿಂಸಾಚಾರ ಎಂದು ಹೇಳಿದ್ದಾರೆ. ಉಳಿದಂತೆ ಇಂಧನ ಬೆಲೆ ಏರಿಕೆ (ಶೇ. 26.2), ನಿರುದ್ಯೋಗ (ಶೇ. 21.3) ಮತ್ತು ಹಣದುಬ್ಬರ (ಶೇ. 19.6) ಎಂದು ಹೇಳಿದ್ದಾರೆ. ಹಿಂದಿ ಹೃದಯಭಾಗದಲ್ಲಿ ನಿರುದ್ಯೋಗ (ಶೇ. 36.7) ದೊಡ್ಡ ಸಮಸ್ಯೆ ಎಂದಿದ್ದರೆ, ತಮಿಳುನಾಡು ಪಾಲಿಗೆ ಇಂಧನ ಬೆಲೆ ಏರಿಕೆ (ಶೇ. 41.79) ಮೋದಿ ಸರ್ಕಾರದ ದೊಡ್ಡ ವೈಫಲ್ಯ ಎಂದಿದ್ದಾರೆ.

ಉತ್ತರ- ದಕ್ಷಿಣ ವಿಭಜನೆಗೆ ಉದ್ದೇಶಪೂರ್ವಕ ಯತ್ನ: ಮೂಡ್ ಆಫ್ ದ ನೇಷನ್ ಸಮೀಕ್ಷೆಯಿಂದ ಹೊರಹೊಮ್ಮಿದ ಮತ್ತೊಂದು ಪ್ರಮುಖ ಅಂಶವೆಂದರೆ, 51.36 ಪ್ರತಿಶತದಷ್ಟು ಜನರು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸಲು ಉದ್ದೇಶಪೂರ್ವಕ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಶೇ. 35.28ರಷ್ಟು ಜನರು ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋದಿ ಸರ್ಕಾರಕ್ಕೆ ಮಧ್ಯಮವರ್ಗ ಬಹುಪರಾಕ್‌: ಮಧ್ಯಮ ವರ್ಗದವರು ಈ ದೇಶದ ಬೆನ್ನೆಲುಬು. ಮತ್ತು ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಮಧ್ಯಮ ವರ್ಗದ ಜೀವನವು ಸುಧಾರಿಸಿದೆಯೇ ಎನ್ನುವ ಪ್ರಶ್ನೆಗೆ, ಸಮಬಲದ ಉತ್ತರಗಳು ಬಂದಿದೆ. ಶೇ.47.8 ರಷ್ಟು ಜನರು ಮಧ್ಯಮ ವರ್ಗದ ಜನರ ಜೀವನ ಸುಧಾರಿಸಿದೆ ಎಂದು ಅಭಿಪ್ರಾಯಪಟ್ಟರೆ, ಶೇ.46.1 ರಷ್ಟು ಜನರು ಇಲ್ಲ ಎಂದು ಹೇಳಿದ್ದಾರೆ. ನಿಸ್ಸಂಶಯವಾಗಿ, ಈ ಡೇಟಾಸೆಟ್ ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ನರೇಂದ್ರ ಮೋದಿ ಸರ್ಕಾರ ಇಬ್ಬರಿಗೂ ಚಿಂತನೆಗೆ ದೂಡಲಿದೆ.

ಭರವಸೆ ಈಡೇರಿಸಿದ ಕೀರ್ತಿ ಮೋದಿ ಸರ್ಕಾರದ್ದು: ಶೇ.51.07ರಷ್ಟು ಮಂದಿ ನರೇಂದ್ರ ಮೋದಿ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದ್ದರೆ, ಶೇ.42.97 ಮಂದಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.60.4ರಷ್ಟು ಜನರು ನರೇಂದ್ರ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ಶೇ.56.39 ಜನರು ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ಇನ್ನು ಶೇ.65.08 ರಷ್ಟು ಜನರು ನರೇಂದ್ರ ಮೋದಿ ಸರ್ಕಾರ ಚೀನಾದೊಂದಿಗಿನ ಗಡಿ ಸಮಸ್ಯೆಯನ್ನು ನಿಭಾಯಿಸುತ್ತಿರುವುದನ್ನು ಅನುಮೋದಿಸಿದ್ದರೆ, ಶೇ.21.82 ರಷ್ಟು ಜನರು ಬೀಜಿಂಗ್ ವಿಚಾರದಲ್ಲಿ ಸರ್ಕಾರ ನಿರ್ವಹಿಸಿದ ರೀತಿಯಿಂದ ಅತೃಪ್ತರಾಗಿದ್ದಾರೆ. ಅಲ್ಲದೆ, 79.27 ಪ್ರತಿಶತ ಜನರು ಪ್ರಧಾನಿ ಮೋದಿಯವರ ಅಡಿಯಲ್ಲಿ ಜಾಗತಿಕವಾಗಿ ದೇಶದ ಮನ್ನಣೆ ಜಾಸ್ತಿಯಾಗಿದೆ ಎಂದಿದ್ದಾರೆ.

ಲೋಕಸಭಾ ಟಿಕೆಟ್ ಭಿನ್ನಮತ ಶಮನಕ್ಕೆ ಬಿಎಸ್‌ವೈ ಸಾರಥ್ಯ: ಕೊಪ್ಪಳ, ಬಳ್ಳಾರಿ, ದಾವಣಗೆರೆಯಲ್ಲಿ ಯಶಸ್ವಿ?

ರಾಮಮಂದಿರ ಪ್ರಮುಖ ಚುನಾವಣಾ ವಿಷಯವೇ
ಹೌದು-57.16%
ಇಲ್ಲ-31.16%
ಗೊತ್ತಿಲ್ಲ-11.68%

ಮೋದಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಿಗ್ರಹ ಆಗಿದೆಯೇ?
ಹೌದು-60.40%
ಇಲ್ಲ-30.12%
ಗೊತ್ತಿಲ್ಲ-9.59%

ಮೋದಿ ಆಡಳಿತದಲ್ಲಿ ಜಾಗತಿಕವಾಗಿ ಭಾರತ ಹಿರಿಮೆ ಹೆಚ್ಚಾಗಿದೆಯೇ?
ಹೌದು-79.27%
ಇಲ್ಲ-17.18%
ಗೊತ್ತಿಲ್ಲ-3.59%

Follow Us:
Download App:
  • android
  • ios