ಸಿದ್ದರಾಮಯ್ಯನವರದು ಹಳಸಲು ತಂತ್ರಗಾರಿಕೆ, ಈ ತಂತ್ರಗಾರಿಕೆಯಿಂದ ಯಾವುದೇ ಪ್ರಯೋಜನ ಆಗಲ್ಲ ಎಂದು ಬಿಜೆಪಿ ಎಂಎಲ್ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

Add Asianetnews Kannada as a Preferred SourcegooglePreferred

ಕೊಡಗು (ಏ.13): ಸಿದ್ದರಾಮಯ್ಯನವರದು ಹಳಸಲು ತಂತ್ರಗಾರಿಕೆ, ಈ ತಂತ್ರಗಾರಿಕೆಯಿಂದ ಯಾವುದೇ ಪ್ರಯೋಜನ ಆಗಲ್ಲ ಎಂದು ಬಿಜೆಪಿ ಎಂಎಲ್ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಮೈಸೂರು ಕೊಡಗು ಕ್ಷೇತ್ರ ಗೆಲ್ಲಲೇಬೇಕೆಂದು ಸಿದ್ದರಾಮಯ್ಯ ಮೈಸೂರಿನಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ. ಹಾಗೆಯೇ ಎನ್ ಡಿ ಎ ಕೂಡ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಆದರೆ ಮತದಾರ ಯಾರ ಕೈಹಿಡುತ್ತಾನೆ ನೋಡೋಣ ಎಂದಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅವರು ನಾವು ಒಕ್ಕಲಿಗ ಅಭ್ಯರ್ಥಿ ಹಾಕಿದ್ದೇವೆ ಗೆದ್ದು ಬಿಡ್ತೀವಿ ಎನ್ನುವುದು ಕಾಂಗ್ರೆಸ್ ಯೋಚನೆ ಸುಳ್ಳು. ಬಲಿಷ್ಠ ಕೋಮುಗಳಲ್ಲಿ ಒಂದು ಸಮುದಾಯ ಅದು ಒಕ್ಕಲಿಗ ಸಮುದಾಯ. ಬಿಜೆಪಿ ಸಿದ್ದಾಂತಕ್ಕೆ ವಿರುದ್ದವಾಗಿ ಹೋದ್ರೆ ಅದನ್ನ ಕೂಡ ನಾನು ಟೀಕೆ ಮಾಡ್ತೇನೆ ಎಂದಿದ್ದಾರೆ. ಎನ್.ಡಿ.ಎ ಮೈತ್ರಿ ಪಕ್ಷದ ಯದುವೀರ್ ಗೆಲ್ಲಿಸಲು ನಾವು ಸಿದ್ಧವಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ಪರವಾಗಿ ವಿಶ್ವನಾಥ್ ಬ್ಯಾಟ್ ಬೀಸಿದ್ದಾರೆ.

ನಾನು ಈಗ ಬಿಜೆಪಿ ಎಂಎಲ್ ಸಿ, ಎನ್ ಡಿ ಎ ಪರವಾಗಿ ಮತಯಾಚಿಸುತ್ತೇನೆ ಎಂದು ಎಂಎಲ್ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ನಾನು ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದೆ, ಮುದ್ದೆಹನುಮೇಗೌಡ್ರು ನಮ್ಮ ರೀತಿಯೇ ಬಿಜೆಪಿ, ಜೆಡಿಎಸ್ ಎಲ್ಲಾ ನೋಡಿ ಬಂದಿದ್ದಾರೆ. ನಿನ್ನೆ ಬಂದವರಿಗೆ ಇಂದು ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಾಗಿ ನನಗೆ ಯಾಕೆ ಟಿಕೆಟ್ ಕೊಡಲಿಲ್ಲ ಎಂದು ಪ್ರಶ್ನಿಸಿದರು. ತಾವೂ ಕೂಡ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದೆ. ಹಾಗಂತ ಟಿಕೆಟ್ ತಪ್ಪಿರುವುದಕ್ಕೆ ನನಗೆ ಯಾವು ಅಸಮಾಧಾನವಿಲ್ಲ.

ನಾನು ಯಾವುದೇ ಪಕ್ಷದಲ್ಲಿ ಇದ್ದರೂ ತಪ್ಪುಗಳನ್ನು ತಪ್ಪು ಎನ್ನುತ್ತೇನೆ. ಸರಿ ಇರುವುದನ್ನು ಯಾವುದೇ ಪಕ್ಷದದ್ದಾದರೂ ಸರಿ ಅಂತ ಒಪ್ಪುತ್ತೇನೆ. ಆದರೆ ರಾಜಕಾರಣದಲ್ಲಿ ಪ್ರಾಮಾಣಿಕತೆ, ಅನುಭವ ಎಲ್ಲವನ್ನೂ ನೋಡಿ ಲೆಕ್ಕಾಚಾರ ಮಾಡಲಾಗುತ್ತದೆ. ಇದನ್ನು ತಪ್ಪಾಗಿ ಭಾವಿಸಬಾರದು ಎಂದಿದ್ದಾರೆ. ನಾನು ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದನ್ನು ನೆಗೆಟಿವ್ ಆಗಿ ಭಾವಿಸಬಾರದು ಎಂದು ಎಂಎಲ್ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ. ಕೊಡಗು ಜಿಲ್ಲೆಯ ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಗೊಂದಲ ಎದುರಾಗಿದೆ.ಕೊಡಗು ಜೆಡಿಎಸ್ ಎರಡು ಬಣಗಳಾಗಿರುವುದೇ ಮೈತ್ರಿ ಗೊಂದಲಕ್ಕೆ ಕಾರಣವಾಗಿರುವುದು.

ಹೌದು ಕೊಡಗು ಜೆಡಿಎಸ್ ಮನೆಯೊಂದು ಎರಡು ಬಾಗಿಲು ಎನ್ನುವಂತೆ ಆಗಿದ್ದು ಯಾವ ಬಣದೊಂದಿಗೆ ಬಿಜೆಪಿ ನಾಯಕರು ಸಭೆ ನಡೆಸಿ ಪ್ರಚಾರ ನಡೆಸಬೇಕು ಎನ್ನುವ ಗೊಂದಲಕ್ಕೆ ಈಡಾಗುವಂತೆ ಆಗಿದೆ. ಜೆಡಿಎಸ್ ನದ್ದು ಒಂದು ಬಣ ಜೆಡಿಎಸ್ ನ ಸಿ. ಎಲ್ ವಿಶ್ವ ಅವರ ಬಣವಾಗಿದ್ದರೆ, ಮತ್ತೊಂದು ಬಣ ಕೆ. ಎಂ ಗಣೇಶ್ ಅವರ ಬಣವಾಗಿದೆ. ಜೆಡಿಎಸ್ ನ ಸಿ.ಎಲ್ ವಿಶ್ವ ಅವರ ಬಣ ಈಗಾಗಲೇ ಬಿಜೆಪಿಯೊಂದಿಗೆ ಸಮನ್ವಯ ಸಭೆ ಮಾಡಿದ್ದು ಪ್ರಚಾರ ಕಾರ್ಯವನ್ನು ಮಾಡುತ್ತಿದೆ. ಆದರೆ ಕೆ.ಎಂ ಗಣೇಶ್ ಅವರು ಕಳೆದ ಎರಡು ತಿಂಗಳ ಹಿಂದೆ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

Rameshwaram Cafe Blast Case: ಬೆಂಗಳೂರು to ಕೊಲ್ಕತ್ತಾ, ಉಗ್ರರು ಸಿಕ್ಕಿಬಿದ್ದಿದ್ದು ಹೇಗೆ? ಇಂಚಿಂಚು ಮಾಹಿತಿ

ಆದರೆ ಅಲ್ಲಿ ಸರಿಯಾದ ಸ್ಪಂದನೆ ಇಲ್ಲ ಎನ್ನುವ ಕಾರಣದಿಂದ ಇಂದು ಬಿಜೆಪಿ ಎಂಎಲ್ಸಿ ಎಚ್. ವಿಶ್ವನಾಥ್ ಸಮ್ಮುಖದಲ್ಲಿ ಕೆ. ಎಂ. ಗಣೇಶ್ ಬಣ ಕೊಡಗು ಬಿಜೆಪಿ ಮುಖಂಡರನ್ನು ಕರೆದು ಸಮನ್ವಯ ಸಭೆ ಮಾಡಿದೆ. ಈ ಸಭೆ ನಡೆಸಿರುವುದು ಜೆಡಿಎಸ್ನಲ್ಲಿ ಮತ್ತಷ್ಟು ಗೊಂದಲ ಜಾಸ್ತಿ ಆಗುವಂತೆ ಆಗಿದೆ. ಮಡಿಕೇರಿಯ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆದ ಈ ಪ್ರತ್ಯೇಕ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಂದಿರಲಿಲ್ಲ. 

ಹೀಗಾಗಿ ಸಭಾಂಗಣದಲ್ಲಿ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ, ಮಾಜಿ ಎಂಎಲ್ ಸಿ ಸುನಿಲ್ ಸುಬ್ರಹ್ಮಣಿ, ಬಿಜೆಪಿ ಹಾಲಿ ಎಂಎಲ್ ಸಿ ಸುಜಾ ಕುಶಾಲಪ್ಪ ಅವರು ಭಾಗಿಯಾಗಿದ್ದರು. ಈ ನಡುವೆ ಸಭೆ ಆರಂಭದಲ್ಲಿಯೇ ಜೆಡಿಎಸ್ ವಿಧಾನಸಭಾ ಚುನಾವಣಾ ಪರಾಜಿತ ಅಭ್ಯರ್ಥಿ ಮನ್ಸೂರ್ ಅಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ವಿಶ್ವನಾಥ್ ಅವರು ಬಂದು ಸಭೆ ನಡೆಸುತ್ತಿರುವುದೇ ನಮಗೆ ಗೊತ್ತಿಲ್ಲ. ಆದರೆ ಕುಮಾರಣ್ಣ ಅವರು ಹೇಳಿರುವುದರಿಂದ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.