ತಮಿಳರ ರೀತಿ ಕನ್ನಡಿಗರು ಸಹ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ ಅನ್ನು ಉಳಿಸಿ, ಪ್ರಾದೇಶಿಕತೆ ಬೆಂಬಲಿಸುವಂತೆ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮನವಿ ಮಾಡಿದರು. 

ಚನ್ನ​ಪ​ಟ್ಟಣ (ಮೇ.01): ತಮಿಳರ ರೀತಿ ಕನ್ನಡಿಗರು ಸಹ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ ಅನ್ನು ಉಳಿಸಿ, ಪ್ರಾದೇಶಿಕತೆ ಬೆಂಬಲಿಸುವಂತೆ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮನವಿ ಮಾಡಿದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಗ್ಗಲೂರು ಗ್ರಾಮದಲ್ಲಿ ಜೆಡಿ​ಎಸ್‌ ಅಭ್ಯರ್ಥಿ ಕುಮಾರಸ್ವಾಮಿ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ತಲೆ ಎತ್ತಿ ನಿಲ್ಲಲು ಸಾಧ್ಯ​ವಾ​ಗಿಲ್ಲ. ಕನ್ನಡಿಗರ ಮೇಲೆ ತಮಿಳುನಾಡಿನವರು ಸವಾರಿ ಮಾಡುತ್ತಿ​ದ್ದಾರೆ. ಅವರಿಗೆ ನಮ್ಮ ನೆಲದ ನೀರನ್ನು ಬಿಟ್ಟು ಕೊಡಬಾರದು ಎಂದು ಹೇಳಿದರು.

ನನ್ನ ರಾಜಕೀಯ ಜೀವನದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟಯೋಜನೆಗಳ ರೀತಿ ಬೇರೆ ಯಾರು ಮಾಡಿಲ್ಲ. ನುಡಿದಂತೆ ನಡೆಯುವ, ಬಡವರ ಕಣ್ಣೀರು ಒರೆಸಿದ ಒಬ್ಬ ರಾಜಕಾರಣಿ ಈ ದೇಶದಲ್ಲಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಪಂಚರತ್ನ ಯೋಜನೆ ಜಾರಿಗಾಗಿ ಹಗಲು ರಾತ್ರಿ ಹೋರಾಟ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಗೆ ನೀರು ಕೊಡಲು ಜಲಧಾರೆ ಯೋಜನೆಯನ್ನು ರೂಪಿಸಿದ್ದಾರೆ ಎಂದು ಹೇಳಿ​ದರು. ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸ್ವ-ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯ ಸಿಗುತ್ತಿಲ್ಲ. ನಾನು ಮೊದಲ ಬಾರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. 

ಪಂಚ​ರತ್ನ ಯೋಜ​ನೆ​ಗಳ ಅನುಷ್ಠಾನಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು: ಎಚ್‌.ಡಿ.​ದೇ​ವೇ​ಗೌಡ

ಜನರು ಕುಮಾರಸ್ವಾಮಿ ಕೈ ಹಿಡಿಯುತ್ತಾರೆಂಬ ನಂಬಿಕೆಯಿದೆ. ಚನ್ನಪಟ್ಟಣದ ಮತದಾರರು ಕುಮಾರಸ್ವಾಮಿ ಅವರನ್ನು ಶಾಸಕರಾಗಿ ಮಾಡಿ, ವಿಧಾನಸೌಧದ ಮುಂಭಾಗ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಹೇಳಿ ಜನರಲ್ಲಿ ಉತ್ಸಾಹ ಮೂಡಿಸಿದರು. ಸಂಸತ್ತಿನಲ್ಲಿ ಕರ್ನಾಟಕದ ಪರವಾಗಿ ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. ಕಾಂಗ್ರೆಸ್‌, ಬಿಜೆಪಿ ನಾಯಕರು ಯಾರು ರಾಜ್ಯದ ಪರ ನಿಲ್ಲಲಿಲ್ಲ. 40 ತಮಿಳು ಸಂಸದರು ನನ್ನನ್ನು ಕಟ್ಟಿಹಾಕಿದರು. ಇಗ್ಗಲೂರು ಜಲಾಶಯ ನಿರ್ಮಾಣಕ್ಕೆ ಯಾರು ಒಂದು ರುಪಾಯಿ ಕೊಡಲಿಲ್ಲ. 

ಅದು ರೈತರು ಬೆವರು ಸುರಿಸಿ ಕೊಟ್ಟ ಹಣದಲ್ಲಿ ಡ್ಯಾಂ ಕಟ್ಟಿದ್ದೇನೆ ಎಂದು ಇಗ್ಗಲೂರು ಜಲಾಶಯ ನಿರ್ಮಾಣದ ಹಿಂದಿನ ಶ್ರಮವನ್ನು ದೇವೇ​ಗೌ​ಡರು ಮೆಲುಕು ಹಾಕಿದರು. ಮಾಜಿ ಶಾಸಕ ಎಂ.ಸಿ.ಅಶ್ವತ್‌, ಬಮೂಲ ನಿರ್ದೇಶಕ ಜಯಮುತ್ತು, ಜೆಡಿಎಸ್‌ ಮುಖಂಡರಾದ ರಾಮಚಂದ್ರು, ರೇಖಾಉಮಾಶಂಕರ್‌ ಮತ್ತಿ​ತ​ರರು ಹಾಜ​ರಿ​ದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ರಾಜಕೀಯದಲ್ಲಿ ತಿಂದ ಮನೆಗೆ ದ್ರೋಹ ಬಗೆಯುವ ವ್ಯಕ್ತಿ ನಾನಲ್ಲ: ಎಚ್‌.ಡಿ.ದೇವೇಗೌಡ

ಪ್ರಧಾನಿ ಮೋದಿಯನ್ನು ಬರ​ಬೇಡಿ ಅನ್ನಲಾಗು​ತ್ತೆಯೇ: ಬರು​ವ​ವರು ಬರಲಿ, ಹೋಗು​ವ​ವರು ಹೋಗಲಿ. ಯಾರೇ ಬಂದು ಹೋದರು ಜನರು ಬಯ​ಸಿದ ತೀರ್ಪನ್ನೇ ಕೊಡು​ತ್ತಾರೆ ಎಂದು ಪ್ರಧಾನಿ ಮೋದಿ ಭೇಟಿ ವಿಚಾ​ರಕ್ಕೆ ಮಾಜಿ ಪ್ರಧಾನಿ ದೇವೇ​ಗೌಡ ಪ್ರತಿ​ಕ್ರಿ​ಯಿ​ಸಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಬರು​ವ​ವ​ರನ್ನು ಹೋಗು​ವ​ವ​ರನ್ನು ನಾವು ಬೇಡ ಅನ್ನಲು ಆಗು​ತ್ತ​ದೆಯೇ? ತೀರ್ಪು ಕೊಡು​ವ​ವರು ಪುಣ್ಯಾ​ತ್ಮರು. ಅಳೆದು ತೂಗಿ ಆಶೀ​ರ್ವಾದ ಮಾಡು​ತ್ತಾರೆ. ಮಾಜಿ ಸಿಎಂ ಕುಮಾ​ರ​ಸ್ವಾಮಿ ಪಂಚ​ರತ್ನ ರಥ​ಯಾ​ತ್ರೆ​ಯಲ್ಲಿ ರಾಜ್ಯಾ​ದ್ಯಂತ ಪ್ರವಾಸ ಮಾಡು​ತ್ತಿ​ದ್ದಾರೆ. ಹೀಗಾಗಿ ಅವ​ರಿಗೆ ಸ್ವ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯ ಸಿಗು​ತ್ತಿಲ್ಲ. ನಾನು ಮೊದಲ ಬಾರಿಗೆ ಚನ್ನ​ಪ​ಟ್ಟಣ ಕ್ಷೇತ್ರಕ್ಕೆ ಅವರ ಪರ​ವಾಗಿ ಪ್ರಚಾ​ರಕ್ಕೆ ಬಂದಿ​ದ್ದೇನೆ. ಜನರು ಕುಮಾ​ರ​ಸ್ವಾಮಿ ಕೈ ಹಿಡಿ​ಯು​ತ್ತಾ​ರೆಂಬ ನಂಬಿ​ಕೆ​ಯಿದೆ ಎಂದು ಹೇಳಿ​ದರು.