Asianet Suvarna News Asianet Suvarna News

ನಟ ಶಿವರಾಜ್‌ ಕುಮಾರ್ ನಟಿಸಿರುವ ಸಿನಿಮಾಗಳಿಗೆ ನಿರ್ಬಂಧ ಹೇರಿ, ಬಿಜೆಪಿ ದೂರು ದಾಖಲು!

ನಟ ಶಿವರಾಜ್ ಕುಮಾರ್‌ ವಿರುದ್ಧ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ನಟ ಶಿವಣ್ಣ ನಟಿಸಿರುವ ಸಿನಿಮಾ, ಜಾಹೀರಾತುಗಳಿಗೆ ನಿರ್ಬಂಧ ಹೇರುವಂತೆ ಮನವಿ ಮಾಡಿಕೊಳ್ಳಲಾಗಿದೆ.

Letter to EC to restrict actor shiva rajkumar movies and advertisements over Lok Sabha election 2024 gow
Author
First Published Mar 22, 2024, 2:58 PM IST

ಬೆಂಗಳೂರು (ಮಾ.22): ನಟ ಶಿವರಾಜ್ ಕುಮಾರ್‌ ವಿರುದ್ಧ ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ನಟ ಶಿವಣ್ಣ ನಟಿಸಿರುವ ಸಿನಿಮಾ, ಜಾಹೀರಾತುಗಳಿಗೆ ನಿರ್ಬಂಧ ಹೇರುವಂತೆ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಹಿಂದುಳಿದ ವರ್ಗಗಳ ಮೋರ್ಚಾದಿಂದ ದೂರು ದಾಖಲಾಗಿದ್ದು, ಗೀತಾ ಶಿವರಾಜಕುಮಾರ್ ಅಭ್ಯರ್ಥಿ ಆಗಿರುವ ಹಿನ್ನೆಲೆ ಅವರ ಪತಿ ಶಿವರಾಜ್ ಕುಮಾರ್ ನಾಯಕ‌ ನಟರಾಗಿದ್ದಾರೆ. ಶಿವರಾಜಕುಮಾರ್ ಅವರ ಜನಪ್ರಿಯತೆ & ಚಲನಚಿತ್ರಗಳು‌ ಮತದಾರರ ಮೇಲೆ ಪ್ರಭಾವ ಬೀರಲಿದೆ. ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಜ್ ಕುಮಾರ್ ನಟನೆಯ ಚಿತ್ರ ಪ್ರಸಾರಕ್ಕೆ ತಡೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಈಗಾಗಲೇ ಪ್ರಚಾರ ಆರಂಭಿಸಿದ್ದು, ತಂದೆ ಎಸ್. ಬಂಗಾರಪ್ಪನವರೇ ನನಗೆ ಆದರ್ಶ ಎಂದಿದ್ದಾರೆ.

Lok Sabha Election 2024: ತಂದೆ ಬಂಗಾರಪ್ಪನವರೇ ನನಗೆ ಆದರ್ಶ: ಗೀತಾ ಶಿವರಾಜ್‌ಮಾರ್

ಪ್ರತೀ ಬಾರಿ ಕೊಲ್ಲೂರು ತಾಯಿಯ ದರ್ಶನ ಮಾಡಿದಾಗ ಒಂದು ರೀತಿಯ ಸಮಾಧಾನ, ನೆಮ್ಮದಿ ಸಿಗುತ್ತದೆ. ಭದ್ರಾವತಿಯಿಂದ ಈಗಾಗಲೇ ಪ್ರಚಾರ ಆರಂಭಿಸಿದ್ದು, ಹೋದಲ್ಲೆಲ್ಲ ಮತದಾರರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಎಲ್ಲ ಕಡೆ ತಂದೆ ಬಂಗಾರಪ್ಪರನ್ನು ಪ್ರೀತಿ ಮಾಡುವ ಜನರಿದ್ದಾರೆ. ಅವರೇ ನನಗೆ ಆದರ್ಶ ಎಂದು ಬೈಂದೂರು ಕ್ಷೇತ್ರದ ವಂಡ್ಸೆ- ನೆಂಪುವಿನಲ್ಲಿರುವ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಿವಮೊಗ್ಗಕ್ಕಿಂತ ಬೈಂದೂರಿಗೆ ಹೆಚ್ಚಿನ ಒತ್ತನ್ನು ಕೊಡುತ್ತೇವೆ. ತಂದೆ ಬಂಗಾರಪ್ಪನವರು ಬೈಂದೂರು ಜನರ ಪ್ರೀತಿಪಾತ್ರರಾದವರು. ಮೋದಿ ಜನಕ್ಕೆ ಏನು ಗ್ಯಾರಂಟಿ ಕೊಟ್ಟಿದ್ದಾರೆ. ಸಂಸದ ರಾಘವೇಂದ್ರರ ಸಾಧನೆಯೇನು? ಯಾವ ಗ್ಯಾರಂಟಿ ತಂದಿದ್ದಾರೆ ಎಂದು ಪ್ರಶ್ನಿಸಿದರು. ಕುಮಾರ್ ಬಂಗಾರಪ್ಪ ಕುರಿತು ಕೇಳಿದ ಪ್ರಶ್ನೆಗೆ ಗರಂ ಆದ ಅವರು, ಕೆಲವಕ್ಕೆ ಉತ್ತರ ಕೊಟ್ಟು ಅಭ್ಯಾಸವಿಲ್ಲ ಎಂದರು.

ನಿಮ್ಮಪ್ಪ 2009ರಲ್ಲಿ ಸಿಎಂ ಆದ್ರೆ, ನಮ್ಮಪ್ಪ 1990ರಲ್ಲೇ ಸಿಎಂ ಆಗಿದ್ರು; ಸಚಿವ ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಬಣಗಳ ನಡುವಿನ ಭಿನ್ನಾಭಿಪ್ರಾಯ ದಿನೇದಿನೆ ಹೆಚ್ಚುತ್ತಿರುವುದರಿಂದ ಅಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಜಾತಿ, ಧರ್ಮ ಆಧಾರವಾಗಿಟ್ಟು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದವರು ಹೇಳಿದರು.

ಇನ್ನು ಟಿಕೆಟ್‌ ಘೋಷಣೆ ಬಳಿಕ ಮೊದಲ ಬಾರಿಗೆ ರಿಪ್ಪನಪೇಟೆಗೆ ಆಗಮಿಸಿದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಅವರಿಗೆ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ಇದಾದ ನಂತರ ಗೀತಾ ಶಿವರಾಜ್ ಕುಮಾರ್ ಕಲ್ಲೂರು ಬೈಂದೂರು ತೆರಳುವ ಮಾರ್ಗದ ರಿಪ್ಪನ್‍ಪೇಟೆಯ ರಾಜ್ಯ ಹೆದ್ದಾರಿ ಪಕ್ಕದ ಬೃಂದಾವನ ಕ್ಯಾಂಟೀನ್‍ನಲ್ಲಿ ಪತಿ, ನಟ ಶಿವರಾಜ್‌ಕುಮಾರ್‌, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಅವರರೊಂದಿಗೆ ಮೆಣಸಿನಕಾಯಿ ಬೋಂಡಾ, ಮಂಡಕ್ಕಿ ಸವಿದರು.

 

Follow Us:
Download App:
  • android
  • ios