‘ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರದೇ ಒರಿಜಿನಲ್‌ ಪಕ್ಷ ಎಂದು ಬೋರ್ಡ್‌ ಹಾಕಿಕೊಳ್ಳಲಿ’ ಎಂದು ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗರಂ ಆಗಿ ಹೇಳಿದ್ದಾರೆ. 

ಬೆಂಗಳೂರು (ಅ.18): ‘ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರದೇ ಒರಿಜಿನಲ್‌ ಪಕ್ಷ ಎಂದು ಬೋರ್ಡ್‌ ಹಾಕಿಕೊಳ್ಳಲಿ’ ಎಂದು ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗರಂ ಆಗಿ ಹೇಳಿದ್ದಾರೆ. ಅಲ್ಲದೆ, 3-4 ದಿನಗಳು ಕಳೆಯಲಿ, ನಂತರ ಮಾತನಾಡುತ್ತೇನೆ ಎಂದಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲಿ, ಏನು ಸರಿ ಮಾಡಬೇಕೋ ಅದನ್ನು ಮಾಡುತ್ತೇವೆ. ಮಾಧ್ಯಮಗಳಿಗೆ ಇಬ್ರಾಹಿಂ ಹೇಳಿಕೆ ದೊಡ್ಡದಿರಬಹುದು. ಆದರೆ, ನಮಗೆ ಅದೇನು ದೊಡ್ಡ ವಿಚಾರವಲ್ಲ. 

ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಅಭ್ಯಂತರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ತಮ್ಮನ್ನು ಮತ್ತು ಪಕ್ಷದ ಯುವ ಪಕ್ಷದ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ಉಚ್ಛಾಟಿಸುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇಂತಹ ಸಣ್ಣ ವಿಚಾರಗಳನ್ನು ತರಬೇಡಿ. ಅವರು ಏನಾದರೂ ಮಾಡಲಿ. ನಮ್ಮ ಪಕ್ಷದಲ್ಲಿ ಇರುವ ಹಿರಿಯರು ತೀರ್ಮಾನ ಕೈಗೊಳ್ಳಲಿದ್ದಾರೆ. 3-4 ದಿನಗಳು ಕಳೆಯಲಿ, ನಂತರ ಮಾತನಾಡುತ್ತೇನೆ ಎಂದು ತೀಕ್ಷ್ಣವಾಗಿ ಹೇಳಿದರು.

ಜನಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು ಕಟ್ಟಲು ಬಿಡಲ್ಲ: ಎಚ್.ಡಿ.ಕುಮಾರಸ್ವಾಮಿ

ಇಬ್ರಾಹಿಂ ಹಿಂದೆ ನಿಂತು ಕಾಂಗ್ರೆಸ್‌ ಆಡಿಸುತ್ತಿದೆ: ಡಿಎಸ್‌ ವರಿಷ್ಠ ದೇವೇಗೌಡರು ಮತ್ತು ಎಚ್‌ಡಿಕೆ ಕಟ್ಟಿರುವ ಪಕ್ಷದಲ್ಲಿ ಬಂದು ಸೇರಿಕೊಂಡಿರುವ ಸಿ.ಎಂ.ಇಬ್ರಾಹಿಂ ಈಗ ನನ್ನದೇ ಪಕ್ಷ ಅಂದ್ರೆ ಯಾರೂ ಒಪ್ಪುವುದಿಲ್ಲ. ಇದೆಲ್ಲ ಕಾಂಗ್ರೆಸ್‌ನವರು ಸಿ.ಎಂ.ಇಬ್ರಾಹಿಂ ಹಿಂದೆ ನಿಂತು ಆಡಿಸುತ್ತಿರುವ ಆಟ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ಆರೋಪಿಸಿದರು. ಒಕ್ಕಲಿಗ ಸಮುದಾಯದ ಬಗ್ಗೆ ಭಗವಾನ್ ನೀಡಿರುವ ಹೇಳಿಕೆ ಸಂಸ್ಕೃತಿ ಹೀನ ಎಂದು ಖಂಡಿಸಿ ನಗರದ ಎಸ್‌ಪಿ ಕಚೇರಿಯಲ್ಲಿ ಅಪರ ಜಿಲ್ಲಾ ರಕ್ಷಣಾಧಿಕಾರಿ ಭಾಸ್ಕರ್‌ರವರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ- ಜೆಡಿಎಸ್‌ ಮೈತ್ರಿ ಅನಿವಾರ್ಯ: ದೇವೇಗೌಡರ ಗರಡಿಯಲ್ಲಿ ಎಲ್ಲಾ ಅಧಿಕಾರಗಳನ್ನು ಅನುಭವಿಸಿ ಪಕ್ಷ ಬಿಟ್ಟು ಹೋದವರು ಇಬ್ರಾಹಿಂ, ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪಾದಾಗಲೂ ಜೆಡಿಎಸ್ ಪಕ್ಷದಲ್ಲಿ ರಾಜ್ಯಾದ್ಯಕ್ಷ ಪದವಿ ಕೊಟ್ಟಿದ್ದು ದೇವೇಗೌಡರು. ಪಕ್ಷವು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಈಗಾಗಲೇ 3-4 ಸುತ್ತಿನ ಮಾತುಕತೆಗಳು ಮುಗಿಸಿದೆ. ಪ್ರಸ್ತುತ ಜೆ.ಡಿ.ಎಸ್. ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ಎಂದರು. ದೇವೇಗೌಡರು ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ನಮ್ಮೆಲ್ಲರ ಒಪ್ಪಿಗೆ ಇದೆ, ರಾಜ್ಯದಲ್ಲಿ ಜೆಡಿಎಸ್ ಬಲಿಷ್ಟವಾಗಿ ಕಟ್ಟಲು ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ದವಾಗಿದ್ದೇವೆ, 

ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ: ಸಂಸದ ಡಿ.ಕೆ.ಸುರೇಶ್

ಪಕ್ಷದ ನಿರ್ಧಾರದಂತೆ ಕೋಲಾರಕ್ಕೆ ಯಾರೇ ಅಭ್ಯರ್ಥಿಯಾದರೂ ನಿಷ್ಠೆಯಿಂದ ಗೆಲ್ಲಿಸಿಕೊಡುತ್ತೇವೆ. ಕಾಂಗ್ರೆಸ್‌ನವರು 12 ಮಂದಿ ಜೆ.ಡಿ.ಎಸ್. ಶಾಸಕರು ತಮ್ಮ ಕಡೆ ಇದ್ದಾರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಒಬ್ಬರೂ ಅತ್ತ ಹೋಗುತ್ತಿಲ್ಲ ಎಂದು ಹೇಳಿದರು. ಬೆಂಗಳೂರಿನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಹಣವಾಗಿದ್ದು, ಭ್ರಷ್ಟಾಚಾರ ಮಾಡಲೆಂದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಪಂಚರಾಜ್ಯಗಳ ಹಾಗೂ ಲೋಕಸಭಾ ಚುನಾವಣೆಗಳಿಗೆ ಹಣ ಪೂರೈಸಲು ಭ್ರಷ್ಟಾಚಾರವಾಗಿದೆ, ಕಾಂಗ್ರೆಸ್ ಕಳೆದ 70 ವರ್ಷದಿಂದ ದೇಶವನ್ನು ಲೂಟಿ ಮಾಡಿದೆ ಎಂದರು.