ಪ್ರಧಾನಿ ಕಾರ್ಯಕ್ರಮಕ್ಕೆ ಚನ್ನಪಟ್ಟಣ, ಮಂಡ್ಯ, ತುಮಕೂರು, ಮೈಸೂರಿನಿಂದ ಜನರನ್ನು ಕರೆಸಿಕೊಳ್ಳಬಹುದು. ಒಂದು ದಿನ ಜಾತ್ರೆ ಮಾಡಿ ಹೋಗಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ... ಹೀಗೆ ಆಗಿದೆ ಅವರ ಕಥೆ. ಅದನ್ನು ಹೊರತುಪಡಿಸಿ ಜನಕ್ಕೆ ಅನುಕೂಲವಾಗುವ ಕಾರ್ಯಕ್ರಮ ಯಾವುದಾದರೂ ಮಾಡುತ್ತಾರಾ? ಚುನಾವಣೆ ಹೊತ್ತಿನಲ್ಲಿ ಬರುತ್ತಾರೆ, ಹೋಗುತ್ತಾರೆ ಎಂದು ವ್ಯಂಗ್ಯವಾಡಿದ ಎಚ್‌ಡಿಕೆ. 

ಬೆಂಗಳೂರು(ಏ.26):  ‘ಬಿಜೆಪಿಯವರು ಪ್ರಚಾರಕ್ಕೆ ಪ್ರಧಾನಿಯನ್ನಾದರೂ ಕರೆಸಲಿ, ಅಮೆರಿಕದ ಅಧ್ಯಕ್ಷರನ್ನಾದರೂ ಕರೆಸಲಿ. ನನಗೇನೂ ಆತಂಕ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ಕಾರ್ಯಕ್ರಮಕ್ಕೆ ಚನ್ನಪಟ್ಟಣ, ಮಂಡ್ಯ, ತುಮಕೂರು, ಮೈಸೂರಿನಿಂದ ಜನರನ್ನು ಕರೆಸಿಕೊಳ್ಳಬಹುದು. ಒಂದು ದಿನ ಜಾತ್ರೆ ಮಾಡಿ ಹೋಗಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ... ಹೀಗೆ ಆಗಿದೆ ಅವರ ಕಥೆ. ಅದನ್ನು ಹೊರತುಪಡಿಸಿ ಜನಕ್ಕೆ ಅನುಕೂಲವಾಗುವ ಕಾರ್ಯಕ್ರಮ ಯಾವುದಾದರೂ ಮಾಡುತ್ತಾರಾ? ಚುನಾವಣೆ ಹೊತ್ತಿನಲ್ಲಿ ಬರುತ್ತಾರೆ, ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.

ಯಾರನ್ನೋ ಸೋಲಿಸಲು ನಾನು ಇಲ್ಲಿಗೆ ಪ್ರಚಾರಕ್ಕೆ ಬಂದಿಲ್ಲ; ಎಚ್‌ಡಿಕೆ

ಕಳೆದ ಹಲವು ತಿಂಗಳಿನಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಕೇಂದ್ರ ಗೃಹಸಚಿವ ಅಮಿತ್‌ ಶಾ ರೋಡ್‌ ಶೋ ಗಮನಿಸಿದ್ದೇನೆ. ನಾನು ನಾಲ್ಕು ತಿಂಗಳಿನಿಂದ ನಡೆಸಿರುವ ರೋಡ್‌ ಶೋಗಳ ಮುಂದೆ ಇದೇನಲ್ಲ. ಜೆಡಿಎಸ್‌ನ ರೋಡ್‌ ಶೋಗಳಿಗೆ ಹೋಲಿಸಿದರೆ ಬಿಜೆಪಿ, ಕಾಂಗ್ರೆಸ್‌ನ ರೋಡ್‌ ಶೋಗಳು ಏನೇನು ಅಲ್ಲ. ನನ್ನ ಕಾರ್ಯಕ್ರಮಗಳ ವಿಶೇಷತೆಗಳೇ ಬೇರೆಯಾಗಿದ್ದು, ಅವರ ಕಾರ್ಯಕ್ರಮಗಳು ನನ್ನ ಕಾರ್ಯಕ್ರಮಕ್ಕೆ ಸರಿಸಾಟಿಯಲ್ಲ ಎಂದರು.