ಬಿಜೆಪಿಯಲ್ಲಿನ ಹಿರಿಯರು ಎಲ್ಲ ಅಧಿಕಾರ ಅನುಭವಿಸಿ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದು ಹೋಗುತ್ತಿದ್ದಾರೆ. ಹೋಗುವವರೆಲ್ಲ ಹೋಗಿ ಬಿಡಲಿ ಪಕ್ಷ ಒಮ್ಮೆ ಸ್ವಚ್ಛವಾಗಿ ಬಿಡುತ್ತದೆ! 

ಬೆಳಗಾವಿ (ಏ.17): ಬಿಜೆಪಿಯಲ್ಲಿನ ಹಿರಿಯರು ಎಲ್ಲ ಅಧಿಕಾರ ಅನುಭವಿಸಿ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದು ಹೋಗುತ್ತಿದ್ದಾರೆ. ಹೋಗುವವರೆಲ್ಲ ಹೋಗಿ ಬಿಡಲಿ ಪಕ್ಷ ಒಮ್ಮೆ ಸ್ವಚ್ಛವಾಗಿ ಬಿಡುತ್ತದೆ! ಮಾಜಿ ಸಚಿವ, ಬೆಳಗಾವಿ ಭಾಗದ ಪ್ರಭಾವಿ ನಾಯಕ ರಮೇಶ ಜಾರಕಿಹೊಳಿ ಅವರ ವರಸೆ ಇದು. ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ ಅವರಂಥ ನಾಯಕರು ಹೋದರೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಇದು ಲೀಡರ್‌ಗಳ ಪಕ್ಷ ಅಲ್ಲ, ಕಾರ್ಯಕರ್ತರ ಪಕ್ಷ. ಕಾರ್ಯಕರ್ತರಿಗೆ ಹೊಸ ನಾಯಕರನ್ನು ಹುಟ್ಟು ಹಾಕುವ ಶಕ್ತಿಯಿದೆ. ಒಬ್ಬ ಲೀಡರ್‌ ಹೋದರೆ ಅಂಥ 10 ನಾಯಕರನ್ನು ತಯಾರಿಸುವ ಶಕ್ತಿ ಬಿಜೆಪಿಗಿದೆ ಎಂದು ಜಾರಕಿಹೊಳಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ಧರ್ಮನಾಥ ಭವನದಲ್ಲಿ ಭಾನುವಾರ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ನಾಯಕರುಗಳು ಪಕ್ಷ ಬಿಡುತ್ತಿರುವ ಬಗ್ಗೆ ಯಾವ ಕಾರ್ಯಕರ್ತರೂ ಅಂಜಬೇಕಿಲ್ಲ. ಇಂತಹ ಎಷ್ಟುನಾಯಕರು ಹೋಗುತ್ತಾರೋ ಹೋಗಲಿ ಒಮ್ಮೆ ಪಕ್ಷ ಸ್ವಚ್ಛವಾಗುತ್ತದೆ. ಎಲ್ಲ ಸ್ವಚ್ಛ ಮಾಡಿ, ಕಾರ್ಯಕರ್ತರನ್ನೇ ನಾಯಕರನ್ನಾಗಿ ಮಾಡೋಣ ಎಂದು ಹೇಳಿದರು. ಇವತ್ತಿನಿಂದ ಎಲ್ಲರೂ ವೈಮನಸ್ಸು ಮರೆತು ಬಿಜೆಪಿಯನ್ನು ಗೆಲ್ಲಿಸುವ ಶಪಥ ಮಾಡೋಣ. ಲಿಂಗಾಯತ, ಮರಾಠ, ಎಸ್‌ಸಿ ಸೇರಿ ಎಲ್ಲಾ ಸಮಾಜಗಳಲ್ಲಿ ಹೊಸ ನಾಯಕರನ್ನು ತಯಾರು ಮಾಡಿ, ಬರುವ 20 ವರ್ಷದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಗಟ್ಟಿಯಾಗಿ ಬೆಳೆಸೋಣ ಎಂದು ರಮೇಶ ಜಾರಕಿಹೊಳಿ ಆತ್ಮವಿಶ್ವಾಸ ಮೂಡಿಸುವ ಪ್ರಯಕ್ತ ಮಾಡಿದರು.

ಎದುರಾಳಿ ಯಾರೇ ಆದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿಯಲ್ಲಿ ಸೋತ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡಿದ್ದೆವು. ಆದರೆ, ಈಗ ಅವರು ಪಕ್ಷದ ಬಗ್ಗೆ ಬಹಳಷ್ಟುಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇನ್ನೊಬ್ಬರು ಜಗದೀಶ ಶೆಟ್ಟರ್‌ ಸಹ ಎಲ್ಲ ಹುದ್ದೆ ಅನುಭವಿಸಿ ಈಗ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವುದು ವಿಪರ್ಯಾಸ. ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾನಿ ಪಕ್ಷಕ್ಕಾಗಿ ದೊಡ್ಡ ತ್ಯಾಗ ಮಾಡಿದರು. ಆದರೆ, ಇವತ್ತಿನ ನಾಯಕರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಸವದಿ ಮತ್ತು ಶೆಟ್ಟರ್‌ಗೆ ಶುಭ ಹಾರೈಸಿದರು.

15 ಕ್ಷೇತ್ರ ಗೆಲ್ಲಿಸಲು ಶಪಥ: ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳಿರುವುದು ಬೆಳಗಾವಿ ಜಿಲ್ಲೆಯಲ್ಲೇ. ಬೆಂಗಳೂರಿನಲ್ಲಿ 28 ಸ್ಥಾನಗಳಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ 18 ಕ್ಷೇತ್ರಗಳಿವೆ. ಇದರಲ್ಲಿ ಕನಿಷ್ಠ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ದೃಢ ಸಂಕಲ್ಪ ಮಾಡಬೇಕಿದೆ. ಆ ನಿಟ್ಟಿನಿಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕೆಂದು ರಮೇಶ ಜಾರಕಿಹೊಳಿ ಕರೆ ನೀಡಿದರು. ವಿಶೇಷವಾಗಿ ಅಥಣಿ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಬೇಕಿದ್ದು, ಅಥಣಿಯಲ್ಲಿ ಬಿಜೆಪಿ ಬಾವುಟ ಹಾರಿಸಲೇಬೇಕೆಂದು ದೃಢಸಂಕಲ್ಪ ಮಾಡಿಯಾಗಿದೆ, ಗೆದ್ದೇ ತೀರುತ್ತೇವೆ. ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಿಗೆ ಹೆಚ್ಚು ಒತ್ತು ಕೊಡುತ್ತೇವೆ. 

ಲಕ್ಷ್ಮಣ ಸವದಿ ದುಡುಕಿನ ನಿರ್ಣಯ ಕೈಗೊಂಡಿದ್ದಾರೆ: ಶಾಸಕ ಬಸನಗೌಡ ಯತ್ನಾಳ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಂಜಯ ಪಾಟೀಲ, ಧನಂಜಯ ಜಾಧವ ಪಕ್ಷವನ್ನು ಗೆಲ್ಲಿಸುವ ನೇತೃತ್ವ ವಹಿಸಿಕೊಳ್ಳಬೇಕು. ಹೆಗಲಿಗೆ ಹೆಗಲು ಕೊಟ್ಟು ನಾಗೇಶ ಮನ್ನೋಳ್ಕರ ಅವರನ್ನು ಗೆಲ್ಲಿಸಬೇಕು. ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಒಂದಾದರೆ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.