ಮುಖ್ಯಮಂತ್ರಿ ಯಡಿಯೂರಪ್ಪ ಆಪರೇಷನ್ ಕಮಲ ಆಡಿಯೋ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಆಡಿಯೋವನ್ನು ಯಾರು ಮಾಡಿ ರೇಕಾರ್ಡ್ ಮಾಡಿ ಲೀಕ್ ಮಾಡಿದ್ದಾರೆ ಎನ್ನುವ ಗಂಭೀರ ಚರ್ಚೆ ಬಿಜೆಪಿಯಲ್ಲಿ ನಡೆದಿದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರು ಆಡಿಯೋ ಯಾರು ಲೀಕ್ ಮಾಡಿದ್ದು ಎನ್ನುವುದನ್ನು ಕ್ಲೂ ಕೊಟ್ಟಿದ್ದಾರೆ. 

ಉತ್ತರ ಕನ್ನಡ, [ನ.04]: ಅನರ್ಹ ಶಾಸಕರ ಬಗ್ಗೆ ಸಿಎಂ ಮಾತನ್ನಾಡಿರುವ ಆಡಿಯೋ ಕೈ ಪಾಳಯಕ್ಕೆ ಅಸ್ತ್ರವಾಗಿದ್ದು, ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಹೊಸಹೊಸ ತಿರುವನ್ನು ಪಡೆಯುತ್ತಿದೆ.

Add Asianetnews Kannada as a Preferred SourcegooglePreferred

ಈ ಹಿನ್ನೆಯಲ್ಲಿ ಇದನ್ನು ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಸಭೆಯಲ್ಲಿ ಯಾರು ರೇಕಾರ್ಡ್ ಮಾಡಿ ಬಳಿಕ ಲೀಕ್ ಮಾಡಿದ್ದಾರೆ ಎನ್ನುವುದನ್ನು ತನಿಖೆ ನಡೆಸಿದೆ. ಇದರ ಮಧ್ಯೆ ಸಿದ್ದರಾಮಯ್ಯ ಆಡಿಯೋ ಬಿಡುಗಡೆ ಮಾಡಿದವರ ಕ್ಲೂ ಕೊಟ್ಟು ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವಂತೆ ಮಾಡಿದ್ದಾರೆ.

ಆಡಿಯೋ ಕೇಸ್: ಸುಪ್ರೀಂನಲ್ಲಿ ಕೈ ಮೇಲು, BSY, ಅನರ್ಹ ಶಾಸಕರಿಗೆ ಸಂಕಷ್ಟ

ಇಂದು [ಮಂಗಳವಾರ] ಮುಂಡಗೋಡದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪಾ ನಿಮ್ ಮನೆಯೊಳಗೇ ಕಳ್ಳರು ಇದ್ದಾರೆ. ಯಡಿಯೂರಪ್ಪರನ್ನು ಸಿಕ್ಕಿಸಿ ಹಾಕಲು ಆಡಿಯೋ, ವಿಡಿಯೋ ಬಿಟ್ಟಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಅನರ್ಹರನ್ನು ಎರಡೂವರೆ ತಿಂಗಳು ಐಷಾರಾಮಿ ಹೋಟೆಲ್‌ನಲ್ಲಿ ಯಡಿಯೂರಪ್ಪ ಇಟ್ಟಿದ್ರು, ಆದರೆ, ನಾನು ಇಟ್ಟಿಲ್ಲ, ಅಮಿತ್ ಶಾ ಇಟ್ಟಿದ್ದು ಅಂತ ಯಡಿಯೂರಪ್ಪ ಹೇಳಿದ್ರು, ಈಗ ಅಮಿತ್ ಶಾನೇ ಯಡಿಯೂರಪ್ಪನರನ್ನು ಗುದ್ದುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದರು.

ಬಿಜೆಪಿಯವರ ಆಡಿಯೋ, ವಿಡಿಯೋ ರೆಕಾರ್ಡ್ ನಳಿನ್ ಕುಮಾರ್ ಕಟೀಲ್, ಉಮೇಶ್ ಕತ್ತಿ ಕೊಟ್ಟಿರ್ಬೇಕು. ಅಮಿತ್ ಶಾ ಕರ್ನಾಟಕದಲ್ಲಿ ನೇರವಾಗಿ ಪಕ್ಷಾಂತರ‌ ಮಾಡಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಮೊನ್ನೇ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪನವರು ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದರು. ಇದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರು ಹೇಳಿದ್ದು, ಆ ವಿಡಿಯೋ ಇದೀಗ ಬಹಿರಂಗವಾಗಿದೆ. 

ಈ ವಿಡಿಯೋವನ್ನೇ ಅಸ್ತ್ರವಾಗಿ ಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಿದೆ. ಅಷ್ಟೇ ಅಲ್ಲದೇ ಇದನ್ನು ಸುಪ್ರೀಂಕೋರ್ಟ್ ಗೆ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಮಂಗಳವಾರ ವಿಚಾರಣೆ ನಡೆಸೋಣವೆಂದು ಸುಪ್ರೀಂಕೋರ್ಟ್ ಹೇಳಿದೆ.