Asianet Suvarna News Asianet Suvarna News

ಆರೆಸ್ಸೆಸ್‌ ಬೈಯುವ ಸಿದ್ದು ಚಾಳಿ ಈಗ ಎಚ್‌ಡಿಕೆಗೆ: ಈಶ್ವರಪ್ಪ ಕಿಡಿ

ಆರ್‌ಎಸ್‌ಎಸ್‌ ಬೈದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗಬಹುದು ಎಂದು ಕುಮಾರಸ್ವಾಮಿ ತಿಳಿದಿದ್ದಾರೆ. ಆರ್‌ಎಸ್‌ಎಸ್‌ ಬೈಯ್ಯೋದು ಸಿದ್ದರಾಮಯ್ಯನ ಕೆಟ್ಟಚಾಳಿ ಆಗಿತ್ತು. ಈಗ ಕುಮಾರಸ್ವಾಮಿಗೂ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕುಟುಕಿದರು.

ks eshwarappa express outrage against hd kumaraswamy gvd
Author
Bangalore, First Published Jun 27, 2022, 4:00 AM IST

ಶಿವಮೊಗ್ಗ (ಜೂ.27): ಆರ್‌ಎಸ್‌ಎಸ್‌ ಬೈದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗಬಹುದು ಎಂದು ಕುಮಾರಸ್ವಾಮಿ ತಿಳಿದಿದ್ದಾರೆ. ಆರ್‌ಎಸ್‌ಎಸ್‌ ಬೈಯ್ಯೋದು ಸಿದ್ದರಾಮಯ್ಯನ ಕೆಟ್ಟಚಾಳಿ ಆಗಿತ್ತು. ಈಗ ಕುಮಾರಸ್ವಾಮಿಗೂ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕುಟುಕಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರಗಳ ರಚನೆಗೆ ಆರ್‌ಎಸ್‌ಎಸ್‌ ಪರ್ಸೆಂಟೇಜ್‌ ರೂಪದಲ್ಲಿ ಹಣ ಸಂಗ್ರಹಿಸುತ್ತಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಆರ್‌ಎಸ್‌ಎಸ್‌ಗೆ ಬೈಯ್ಯದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣ ಆಗಲ್ಲ. ಹೀಗಾಗಿ ಸಂಘಟನೆ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ. ಅವರು ಸ್ವರ್ಗಕ್ಕೆ ಹೋಗಲಿ ಎಂಬುದು ನಮ್ಮ ಆಸೆ ಎಂದು ಲೇವಡಿ ಮಾಡಿದರು.

ವಿರೋಧ ಪಕ್ಷ ಇರಬೇಕು ಎಂಬುದು ನಮಗೂ ಆಸೆ. ನಿಮ್ಮ ಎಂಎಲ್‌ಎಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗದಿದ್ದರೆ ನಾವೇನು ಮಾಡುವುದು. ತಮ್ಮ ಶಾಸಕರನ್ನು ಶಿಸ್ತುಬದ್ಧವಾಗಿ, ವಿಶ್ವಾಸದಿಂದ ಇಟ್ಟುಕೊಂಡರೆ, ಸ್ವಾತಂತ್ರ್ಯ ಕೊಟ್ಟರೆ ಅವರೇಕೆ ಬಿಟ್ಟು ಹೋಗುತ್ತಾರೆ. ಮಹಾರಾಷ್ಟ್ರದಲ್ಲಿ ಶಾಸಕರಿಗೆ ಮುಖ್ಯಮಂತ್ರಿ ಭೇಟಿಗೆ ಅವಕಾಶವೇ ಇರಲಿಲ್ಲ. ಬಿಜೆಪಿಯಲ್ಲಿ ಆ ಪ್ರಶ್ನೆಯೇ ಇಲ್ಲ. ಇಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡಲು ಅವಕಾಶವಿದೆ. ಮೋದಿ ಅವರಂಥ ಒಳ್ಳೆಯ ನಾಯಕರು ಇದ್ದಾರೆ. ಹೀಗಾಗಿ ಬೇರೆ ಪಕ್ಷಗಳ ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಮಹಾರಾಷ್ಟ್ರದಲ್ಲಿನ ಬೆಳವಣಿಗೆಗಳನ್ನು ಈಶ್ವರಪ್ಪ ಸಮರ್ಥಿಸಿಕೊಂಡರು.

ಕೆಲವು ಮುಸ್ಲಿಂ ಗೂಂಡಾಗಳು ಶಿವಮೊಗ್ಗವನ್ನು ಗೂಂಡಾ ರಾಜ್ಯ ಮಾಡಲು ಹೊರಟ್ಟಿದ್ದಾರೆ: ಈಶ್ವರಪ್ಪ

ಮುಸ್ಲಿಂ ಮತದಿಂದ ಬಿಜೆಪಿ ಅವಲಂಬಿತವಾಗಿಲ್ಲ: ಆರ್‌ಎಸ್‌ಎಸ್‌ ಬೈದರೆ ಮುಸಲ್ಮಾನರ ಓಟು ನಮಗೆ ಬಂದು ಬರುತ್ತದೆ ಎಂಬ ಲೆಕ್ಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಅವರು ಇದ್ದಾರೆ. ಓಟು ಅವರು ತೆಗೆದುಕೊಳ್ಳಲಿ. ನಾವು ಬೇಡ ಅನ್ನೊಲ್ಲ. ಬಿಜೆಪಿಯವರು ನಾವು ಎಲ್ಲಿಯೂ ಮುಸ್ಲಿಮರ ಮತಕ್ಕೆ ಅವಲಂಬನೆ ಆಗಿಲ್ಲ. ನಾನು ಶಿವಮೊಗ್ಗದಲ್ಲಂತೂ ಮುಸ್ಲಿಂ ಸಮುದಾಯವರ ಬೀದಿಗೆ ಹೋಗಿ ನಾನು ಓಟು ಕೇಳಿಲ್ಲ. ಕೇಳುವುದೂ ಇಲ್ಲ. ಆದರೂ ಅವರು ಮತ ಹಾಕುತ್ತಿದ್ದಾರೆ ಎಂದರು.

ಕುಡಿವ ನೀರು ಪೂರೈಕೆಗೆ ಶೀಘ್ರ ಚಾಲನೆ: ಶೀಘದಲ್ಲಿ ಶಿವಮೊಗ್ಗ ನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರಕಲಿದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು. ಕುಡಿಯುವ ನೀರಿನ ಯೋಜನೆ 24/7 ಯೋಜನೆಯಲ್ಲಿ ಅನುಷ್ಠಾನ ಸಂಬಂಧ ಬೆಂಗಳೂರಿನ ಜಲ ಮಂಡಳಿಯ ಮುಖ್ಯ ಅಭಿಯಂತರ ದಿನೇಶ್‌ ಭಾನುವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಗಾಜನೂರಿನಿಂದ ಬರುವ ಕುಡಿಯುವ ನೀರಿಗೆ ಹೌಸಿಂಗ್‌ ಚೇಂಬರ್‌ ನಿರ್ಮಿಸಿ ಕಚ್ಚಾ ನೀರು ಸಂಗ್ರಹ ಮಾಡಲು 105 ಕೋಟಿ ವೆಚ್ಚದಲ್ಲಿ ಶುದ್ಧ ನೀರಿನ ಘಟಕ ಯೋಜನೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗೆ 5 ಕೋಟಿ ಅನುದಾನ, ಹೆಚ್ಚುವರಿ ವಾಹನ ವ್ಯವಸ್ಥೆ ಹೀಗೆ ಕುಡಿಯುವ ನೀರಿನ ಅನೇಕ ಬೇಡಿಕೆಗಳನ್ನು ಈಡೇರಿಸಲು ಮುಖ್ಯ ಎಂಜಿನಿಯರ್‌ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ನಗರದ ಎರಡು ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಹಳೇ ಪೈಪ್‌ಗಳಿಂದ ಕೆಂಪು ನೀರು ಸರಬರಾಜಾಗುತ್ತಿದೆ. 54 ಟ್ಯಾಂಕ್‌ಗಳ ಸ್ವಚ್ಛತೆ, ನಗರದಲ್ಲಿ 46 ಝೋನ್‌ ಗುರುತಿಸಲಾಗಿದ್ದು, ಇದರಲ್ಲಿ 12 ಝೊನ್‌ಗಳಿಗೆ 24/7 ಯೋಜನೆಯಡಿ ನೀರು ಸರಬರಾಜಾಗುತ್ತಿದೆ ಎಂದರು.

ರಾಜ್ಯಸಭಾ ಚುನಾವಣೆ: ಬಿಜೆಪಿ 3ನೇ ಅಭ್ಯರ್ಥಿ ಗೆಲುವಿಗೆ ಸಿದ್ದರಾಮಯ್ಯ ಕಾರಣ, ಈಶ್ವರಪ್ಪ

ಎಲ್ಲದಕ್ಕೂ 40 ಪರ್ಸೆಂಟ್‌ ಆರೋಪ ಮಾಡುತ್ತಾರೆ. ಅವರ (ವಿರೋಧ ಪಕ್ಷಗಳು) ಹಣೇ ಬರಹಕ್ಕೆ ಇಲ್ಲಿಯವರೆಗೆ ಪರ್ಸೆಂಟೇಜ್‌ ಪಡೆದ ಒಂದೇ ಒಂದು ಪ್ರಕರಣ ತೋರಿಸಲು ಆಗಿಲ್ಲ
-ಕೆ.ಎಸ್‌.ಈಶ್ವರಪ್ಪ

Follow Us:
Download App:
  • android
  • ios