ಪರಿಷತ್ ಫೈಟ್: ಕುತೂಹಲ ಕೆರಳಿಸಿದ ಸಿದ್ದರಾಮಯ್ಯ-ಡಿಕೆಶಿ ಭೇಟಿ
ನೂತನ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜನ ಖರ್ಗೆ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಭೇಟಿಯಾಗಿರುವುದು ಕಾಂಗ್ರೆಸ್ನಲ್ಲಿ ವಿಧಾನಪರಿಷತ್ ಚುನಾವಣೆ ರಂಗೇರಿದೆ.
ಬೆಂಗಳೂರು, (ಜೂನ್. 16): ವಿಧಾನಪರಿಷತ್ ಚುನಾವಣೆ ಕಣ ರಂಗೇರಿದ್ದು, ಆಕಾಂಕ್ಷಿಗಳು ಟಿಕೆಟ್ಗಾಗಿ ತಮ್ಮ ನಾಯಕರ ದುಂಬಾಲು ಬಿದ್ದಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿಯಾಗಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕಾಂಗ್ರೆಸ್ನಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನ ಅಂತಿಮಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇಂದು (ಮಂಗಳವಾರ) ಸಂಜೆ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದು, ಈ ವೇಳೆ ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಕೆಲ ಹೊತ್ತು ಮಾತುಕತೆ ನಡೆಸಿದರು.
MLC ಎಲೆಕ್ಷನ್: 2 ಸ್ಥಾನಕ್ಕೆ ನಾಲ್ವರ ಹೆಸರು ಫೈನಲ್ ಮಾಡಿದ ಕಾಂಗ್ರೆಸ್
ಜೂನ್ 18 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುವುದರಿಂದ ಎರಡು ಸ್ಥಾನಗಳಿಗೆ ಯಾರನ್ನ ಆಯ್ಕೆ ಮಾಡಿದ್ರೆ ಸೂಕ್ತವೆಂದು ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರ ಜತೆ ಸಮಾಲೋಚನೆ ನಡೆಸಿದರು.
ಜೂನ್ 29ರಂದು ಕರ್ನಾಟಕದ ವಿಧಾನಸಭೆಯಿಂದ 7 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದ್ದು, ಶಾಸಕ ಬಲದ ಆಧಾರದ ಮೇಲೆ ಕಾಂಗ್ರೆಸ್ಗೆ 2 ಸ್ಥಾನ ಸಿಗಲಿದೆ. ಈ ಎರಡು ಸ್ಥಾನಕ್ಕೆ ಟಿಕೆಟ್ ಆಕಾಕ್ಷಿಗಳ ಪಟ್ಟಿ ಹನುಮಂತನ ಬಾಲದಂತಿದೆ.
ಕಾಂಗ್ರೆಸ್ ಜಯಗಳಿಸಬಹುದಾದ 2 ಸ್ಥಾನಗಳಿಗೆ ಅಲ್ಪ ಸಂಖ್ಯಾತ, ಮಹಿಳಾ, ಹಿಂದುಳಿದ ವರ್ಗ ಹೀಗೆ ವಿವಿಧ ಕೋಟಾದಡಿ ಹಿರಿಯ ನಾಯಕರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಯಾರಿಗೆ ಕೊಡಬೇಕೆನ್ನುವುದು ರಾಜ್ಯ ನಾಯಕರಿಗೆ ದೊಡ್ಡ ತಲೆನೋವಾಗಿದೆ.
ನಾಲ್ಕು ಹೆಸರು ಫೈನಲ್
ಇನ್ನು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದಂತೆ 4 ಹೆಸರಗಳನ್ನ ಪಟ್ಟಿ ಮಾಡಲಾಗಿದ್ದು, ಪ್ರಮುಖರು ಸೇರಿ ಈ ನಾಲ್ಕರಲ್ಲಿ ಇಬ್ಬರನ್ನ ಫೈನಲ್ ಮಾಡಲು ಚರ್ಚೆಗಳನ್ನ ನಡೆಸಿದ್ದಾರೆ.