ರಾಜಕೀಯ ವಾಗ್ಯುದ್ಧ: ಸಚಿವ ಸುರೇಶ್ ಕುಮಾರ್ ಅಪಹಾಸ್ಯಕ್ಕೆ ಡಿಕೆಶಿ ತಿರುಗೇಟು..!
ಕೊರೋನಾ ಸಮಯದಲ್ಲೂ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ನಡುವೆ ರಾಜಕೀಯ ವಾಗ್ಯುದ್ಧ ನಡೆದಿದೆ.
ಬೆಂಗಳೂರು, (ಮೇ.04): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷ ಸಚಿವ ಸುರೇಶ್ ಕುಮಾರ್ ಅವರ ಅಪಹಾಸ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಅಂಗನವಾಡಿ ಆಹಾರ ಪದಾರ್ಥವನ್ನು ಬಿಜೆಪಿ ನಾಯಕರು ತಮ್ಮ-ತಮ್ಮ ಫೋಟೋ ಹಾಕಿಕೊಂಡು ಜನರಿಗೆ ಹಂಚಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು.
ಅಂಗನವಾಡಿ ಆಹಾರದಿಂದ ಬಿಜೆಪಿ ಬಿಟ್ಟಿ ಪ್ರಚಾರ, ಬೀದಿಗಿಳಿದ ಕಾಂಗ್ರೆಸ್ ಮಹಿಳೆಯರು..!
ಇದಕ್ಕೆ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ, ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ "ಪೂರ್ಣ ಸಹಕಾರ" ಕೊಡುತ್ತೇವೆ ಎಂದು ಹೇಳಿದವರು ನೀಡಿರುವ ಸಹಕಾರ, ಸಹಕಾರದ ಅರ್ಥವನ್ನೇ ಸುಳ್ಳಾಗಿಸಿದೆ ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಸುರೇಶ್ ಕುಮಾರ್ ಅಣ್ಣ ನೀವು ನಿಮ್ಮ ಸಿಎಂರನ್ನು ಬಾಯಿ ಮುಚ್ಚಿಸಬಹುದು. ಆದ್ರೆ ಮಕ್ಕಳಿಗೆ ಗರ್ಭಿಣಿಯರಿಗೆ ಕೊಡುವ ಆಹಾರ ಮಾರಾಟ ಮಾಡಿದ್ರೆ ಸುಮ್ನೆ ಇರೋಕೆ ಆಗತ್ತಾ ಎಂದು ಪ್ರಶ್ನಿಸಿದರು.
ಉಮಾಶ್ರೀ, ಜಯಮಾಲಾ, ಮೋಟಮ್ಮ ಮೂವರು ಮಂತ್ರಿಗಳಾಗಿ ಕೆಲಸ ಮಾಡಿದವರು. ಅವರು ಮಾತಡದೇ ಇರೋಕೆ ಆಗತ್ತಾ ? ಸಿಎಂ ನೀವು ಸುಮ್ಮನೆ ಇದ್ದರೆ ನೀವು ಜವಬ್ದಾರರಾಗುತ್ತೀರಿ ಎಂದು ತಿರುಗೇಟು ನೀಡಿತ್ತಾ ಕಾಂಗ್ರೆಸ್ ಮಹಿಳಾ ಶಾಸಕಿಯರ ಪ್ರತಿಭಟನೆ ಸಮರ್ಥಿಸಿಕೊಂಡರು.
ಬೆಂಗಳೂರಿನ ಹೊರವಲಯದಲ್ಲಿರುವ ಸರ್ಕಾರಿ ಗೋದಾಮಿನಲ್ಲಿರುವ ಅಂಗನವಾಡಿ ಮಕ್ಕಳ ಆಹಾರವನ್ನು ಪ್ಯಾಕೇಟ್ ಮಾಡಿ ಅದರ ಮೇಲೆ ನಾಯಕರು ತಮ್ಮ ಫೋಟೋ ಹಾಕಿಕೊಂಡು ಹಂಚಿಕೆ ಮಾಡುತ್ತಿದ್ದರು. ಇದನ್ನು ಖುದ್ದು ಬೆಂಗಳೂರು ಗ್ರಾಮಾಂತ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರೇ ಗೋದಾಮಿನ ಮೇಲೆ ದಾಳಿ ಮಾಡಿ ಎಲ್ಲಾವನ್ನೂ ಬಟಾಬಯಲು ಮಾಡಿದ್ದರು.