ಖಡಕ್ ಎಚ್ಚರಿಕೆ ಕೊಟ್ಟ ಡಿಕೆಶಿ, ಬಿಜೆಪಿ ಸೇರ್ತಾರಾ ಕಾಂಗ್ರೆಸ್ ಶಾಸಕ..?
ಉಪಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ನಾಯಕನನ್ನು ಪಕ್ಷದಿಂದ ಉಚ್ಛಾಟಿಸಿ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದ ಶಾಸಕಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರು, (ಅ.16): ಡಿಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನ ಪಕ್ಷದಿಂದ ಉಚ್ಛಾಟಿಸಿ ಎಂದಿದ್ದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸಂಪತ್ ರಾಜ್ ಉಚ್ಛಾಟನೆ ಮಾಡಬೇಕೆಂಬ ಅಖಂಡ ಅವರ ಹೇಳಿಕೆ ಪ್ರತಿಕ್ರಿಯಿಸಿ, ಯಾರಾದರೂ ಹೇಳಬೇಕು ಅಂದ್ರೆ ನನ್ನ ಜೊತೆ ಮಾತನಾಡಲಿ. ಮಾಧ್ಯಮಗಳ ಜೊತೆ ಅಲ್ಲ. ಅವರ ನೋವು, ಭಾವನೆ ಹೇಳಿಕೊಳ್ಳಲಿ. ತಪ್ಪಲ್ಲ, ಆದ್ರೆ ಅದು ಮೀಡಿಯಾ ಎದುರಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೈ ಎಲೆಕ್ಷನ್ ಹೊತ್ತಲ್ಲಿ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ: ನಾಯಕನ ಉಚ್ಛಾಟನೆಗೆ ಆಗ್ರಹ..!
ಅಖಂ ಶ್ರೀನಿವಾಸ್ ಮೂರ್ತಿ ಬಿಜೆಪಿಯವರ ಎದುರು ಮಾತನಾಡುವುದಲ್ಲ. ಅಖಂಡಗೆ ನೋವಿದ್ರೆ ನನ್ನ ಬಳಿ ಬಂದು ಮಾತನಾಡಲಿ. ಮಾಧ್ಯಮದ ಎದುರು ಮಾತನಾಡೋದು ಶಿಸ್ತಲ್ಲ ಎಂದು ತಿರುಗೇಟು ನೀಡಿದರು.
ಇನ್ನು ಈ ವೇಳ ಡಿಕೆ ಶಿವಕುಮಾರ್ ಅವರು ತಮ್ಮ ಹೇಳಿಕೆಯಲ್ಲಿ ಅಖಂಡ ಬಿಜೆಪಿಯವರ ಎದುರು ಮಾತನಾಡೋದಲ್ಲ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ. ಅಂದ್ರೆ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದಾರಾ..? ಡಿಕೆಶಿ ಹೀಗ್ಯಾಕೆ ಅಂದ್ರು..? ಅಖಂಡ ಕಾಂಗ್ರೆಸ್ನಿಂದ ಒಂದು ಕಾಲು ಹೊರಗೆ ಇಟ್ರಾ..? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಅಖಂಡ ಬಿಜೆಪಿ ಸೇರಿದ್ರು ಅಚ್ಚರಿ ಇಲ್ಲ
ಹೌದು...ಸ್ವಪಕ್ಷದ ನಾಯಕರಿಂದಲೇ ತಮ್ಮ ಮನೆ ಸುಟ್ಟು ಹೋಗಿದೆ ಎಂದು ನೊಂದಿರುವ ಅಖಂಡ ಶ್ರೀನಿವಾಸ್ ಮೂರ್ತೀ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ಸೇರಿದರೂ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಅಖಂಡ ಅವರ ನೋವಿಗೆ ಕಾಂಗ್ರೆಸ್ ನಾಯಕರು ಅಷ್ಟು ಸ್ಪಂದಿಸಿಲ್ಲ. ಬದಲಿಗೆ ಬಿಜೆಪಿ ನಾಯಕರು ಅಖಂಡ ಶ್ರೀನಿವಾಸ ಮೂರ್ತಿ ಅವರನ್ನ ಸಿಎಂ ಬಳಿ ಕರೆದುಕೊಂಡು ಹೋಗಿ ಸಮಾಧಾನಪಡಿಸಿದ್ದಾರೆ.
ಇದರಿಂದ ಅಖಂಡ ಶ್ರೀನಿವಾಸ ಮೂರ್ತಿ ಅವರು ತಮ್ಮ ಪಕ್ಷದ ನಾಯಕ ಮೇಲೆ ಮುನಿಸಿಕೊಂಡಿದ್ದು, ಮಂದಿನ ದಿನಗಳಲ್ಲಿ ಅವರು ಬಿಜೆಪಿ ಸೇರಿದರೂ ಅಚ್ಚರಿ ಪಡಬೇಕಿಲ್ಲ.