ಸಿದ್ದರಾಮಯ್ಯ ಆಯ್ತು ಈಗ ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್
ಚುಂಚಶ್ರೀ ಬಳಗ ಭಾನುವಾರ ವಿಶ್ವೇಶ್ವರಯ್ಯಪುರದ ರಾಜ್ಯ ಒಕ್ಕಲಿಗರ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಸತ್ಸಂಗ ಮತ್ತು ಅಭಿನಂದನಾ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಾವು ಸಿಎಂ ಆಗಬೇಕೆಂಬ ಆಸೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟರು
ಬೆಂಗಳೂರು, (ಜುಲೈ.17): ಕರ್ನಾಟಕ ವಿಧಾನಸಭೆ ಚುನಾವಣೆಗೆ ಏನ್ನೇನು ಏಳೆಂಟು ತಿಂಗಳು ಬಾಕಿ ಇದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟು ಗೆಲ್ಲಲಿದೆ ಎನ್ನುವ ಸಮೀಕ್ಷೆಗಳು ಹೇಳುತ್ತಿವೆ. ಇದರಿಂದ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿದೆ.
ಇದರ ಮಧ್ಯೆ ಸಿಎಂ ಸ್ಥಾನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ, ಒಂದೆಡೆ ಸಿದ್ದರಾಮಯ್ಯ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ರೆ, ಇತ್ತ ಡಿಕೆ ಶಿವಕುಮಾರ್ ಸಹ ಇಂದು(ಭಾನುವಾರ) ಸಿಎಂ ಆಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
'ಕೈ'ಗೆ ಕೇಸರಿ ಟಕ್ಕರ್! ನಡೆಯುತ್ತಾ ಬೊಮ್ಮಾಯಿ ಸರ್ಕಾರದ ಉತ್ಸವ?
ಒಕ್ಕಲಿಗರ ಸಂಘದ ಆವರಣದಲ್ಲಿ ಭಾನುವಾರ ಚುಂಚಶ್ರೀ ಬಳಗ ಒಕ್ಕಲಿಸ ಸಮುದಾಯದ ಐಎಎಸ್ ,ಐಎಸ್ಎಫ್, ಕೆಎಎಸ್ ಪರೀಕ್ಷೆ ಸಾಧಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡಿಕೆಶಿ, ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗ ಸಮುದಾಯದ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರುವ ಅವಕಾಶವಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಈ ಅವಕಾಶ ತಪ್ಪಿಸಿಕೊಳ್ಳಬೇಡಿ ಎಂದರು. ಆ ಮೂಲಕ ತಾನೂ ಕೂಡ ಮುಂದಿನ ಸಿಎಂ ಅಭ್ಯರ್ಥಿ ಎಂಬ ಅರ್ಥದಲ್ಲಿ ಮಾತನಾಡಿದರು.
ಕೇವಲ ನಮ್ಮವ, ನಮ್ಮವ ಎಂದರೆ ಸಾಲದು. ಬಂದ ಅವಕಾಶವನ್ನು ಬಳಸಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಆಶೀರ್ವದಿಸಬೇಕು ಎಂದರು. ನಾನು ಯಾವುದೇ ತಪ್ಪು ಮಾಡಲಿಲ್ಲ.ಆದರೂ ತನಿಖೆ ಹೆಸರಿನಲ್ಲಿ ತಿಹಾರ ಜೈಲಿಗೆ ಕಳುಹಿಸಿದರು.ರಾಜಕೀಯ ಜೀವನದಲ್ಲಿ ಏಳುಬೀಳು ಕಂಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಸಮುದಾಯಕ್ಕೆ ಒದಗಿ ಬಂದಿರುವ ಅವಕಾಶ ಕಳೆದುಕೊಳ್ಳಬೇಡಿ ಎಂದು ಪರೋಕ್ಷವಾಗಿ ಸಿಎಂ ಆಗೋ ಆಸೆ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, ಪ್ರೋತ್ಸಾಹ ನೀಡುವಂತೆ ಒಕ್ಕಲಿಗರಲ್ಲಿ ಮನವಿ ಮಾಡಿದರು.