ಕಾಶಿಯಾತ್ರೆ ಸಬ್ಸಿಡಿ 7500ಗೆ ಹೆಚ್ಚಳಕ್ಕೆ ಚಿಂತನೆ: ಸಚಿವ ರಾಮಲಿಂಗಾರೆಡ್ಡಿ
ರಾಜ್ಯ ಸರ್ಕಾರದಿಂದ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ಯೋಜನೆಯಡಿ ಕಾಶಿಯಾತ್ರೆಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು . 5ಸಾವಿರದಿಂದ . 7,500ಕ್ಕೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರು (ಜು.30): ರಾಜ್ಯ ಸರ್ಕಾರದಿಂದ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ಯೋಜನೆಯಡಿ ಕಾಶಿಯಾತ್ರೆಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು . 5ಸಾವಿರದಿಂದ . 7,500ಕ್ಕೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಯೋಜನೆಯಡಿ 450 ಪ್ರಯಾಣಿಕರನ್ನು ಕಾಶಿಗೆ ಕರೆದೊಯ್ಯುತ್ತಿರುವ ರೈಲಿಗೆ ಶನಿವಾರ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಯೋಜನೆಯಡಿ 8 ದಿನಗಳ ಕಾಶಿ ಪ್ರವಾಸಕ್ಕೆ ಒಬ್ಬರಿಗೆ 20 ಸಾವಿರ ದರವಿದೆ. ಇದರಲ್ಲಿ 5 ಸಾವಿರವನ್ನು ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಯಾತ್ರೆಯ ಸಬ್ಸಿಡಿ ದರ ಹೆಚ್ಚಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ತೀರ್ಮಾನಿಸಲಾಗುವುದು ಎಂದರು. ಮುಂದಿನ ಯಾತ್ರೆ ಆ. 12ಕ್ಕೆ ಆರಂಭವಾಗಲಿದ್ದು, ರಾಮೇಶ್ವರಂ, ಗಯಾ ಸೇರಿ ಹಲವು ಪ್ರವಾಸಿ ತಾಣಗಳ ಭೇಟಿ ನೀಡಲು ಅನುಕೂಲ ಆಗುವಂತೆ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ ಪ್ರಯಾಣ, ಊಟ, ವಸತಿ ವ್ಯವಸ್ಥೆಯೊಂದಿಗೆ ಧಾರ್ಮಿಕ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗ್ರಾಜ್ ದರ್ಶನವೂ ಸೇರಿದೆ ಎಂದು ಹೇಳಿದರು.
ಪುತ್ರ ರಾಕೇಶ್ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಇನ್ನೂ 210 ಸೀಟು ಖಾಲಿ: ಕಾಶಿ ಯಾತ್ರೆಗೆ ನಿಯೋಜಿಸಿರುವ ವಿಶೇಷ ರೈಲಿನಲ್ಲಿ 660 ಆಸನಗಳಿವೆ. ಈ ಪೈಕಿ ಮಳೆಗಾಲವಾದ ಕಾರಣ 450 ಸೀಟು ಮಾತ್ರ ಭರ್ತಿಯಾಗಿವೆ. 210 ಸೀಟುಗಳು ಖಾಲಿ ತೆರಳಿವೆ. ಮುಂದಿನ ದಿನಗಳಲ್ಲಿ ಯಾತ್ರಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸುವುದು, ಪ್ರಚಾರದ ಮೂಲಕ ಹೆಚ್ಚಿನ ಜನರನ್ನು ಆಹ್ವಾನಿಸಲಾಗುವುದು ಎಂದರು. ರಾಜ್ಯ ಸರ್ಕಾರ ಐಆರ್ಸಿಟಿಸಿ ಮತ್ತು ಭಾರತೀಯ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ 2022-23ನೇ ಸಾಲಿನಿಂದ ಈ ಯೋಜನೆ ಆರಂಭಿಸಿದೆ. ಇದು ನಾಲ್ಕನೇ ಸುತ್ತಿನ ಯಾತ್ರೆಯಾಗಿದೆ. ಈ ವಿಶೇಷ ರೈಲಿನಲ್ಲಿ ಅಡುಗೆ ಮನೆ, ವೈದ್ಯರ ತಂಡ ಇರಲಿದ್ದು ಪ್ರತಿ ಬೋಗಿಯಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಇದೆ. ನೂರು ರೈಲ್ವೆ ಸಿಬ್ಬಂದಿ ಇರುತ್ತಾರೆ.
ಹವಾಮಾನ ಆಧಾರಿತ ಬೆಳೆ ಬಗ್ಗೆ ಜಾಗೃತಿ ಮೂಡಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
82 ಲಕ್ಷ ಸಹಾಯಧನ: ಈ ಯೋಜನೆಯಡಿ ಈವರೆಗೆ 3 ಸುತ್ತಿನ ಯಾತ್ರೆ ಪೂರೈಸಿದ್ದು, ವಿಶೇಷ ರೈಲಿನಲ್ಲಿ ಒಟ್ಟು 1,644 ಯಾತ್ರಾರ್ಥಿಗಳು ಯಾತ್ರೆ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದಿಂದ ತಲಾ 5 ಸಾವಿರದಂತೆ ಈವರೆಗೆ 82.20 ಲಕ್ಷ ಸಹಾಯಧನವನ್ನು ವಿತರಿಸಲಾಗಿದೆ. ಮುಜರಾಯಿ ಇಲಾಖೆ ಆಯುಕ್ತ ಎಚ್. ಬಸವರಾಜೇಂದ್ರ ಇದ್ದರು.