ಸಚಿವ ಸ್ಥಾನಕ್ಕಾಗಿ ದಿಲ್ಲಿಯಲ್ಲಿ ಲಾಬಿ ಶುರು| ದೆಹಲಿಗೆ ಅಗಮಿಸಿದ ವಿಶ್ವನಾಥ್‌, ಆರ್‌.ಶಂಕರ್‌| ಉನ್ನತ ಮುಖಂಡರೊಂದಿಗೆ ಮಾತುಕತೆಗೆ ಯತ್ನ| ಸಿಎಂ ದೆಹಲಿ ಭೇಟಿ ಮುನ್ನವೇ ಆಕಾಂಕ್ಷಿಗಳ ಆಗಮನ

ನವದೆಹಲಿ(ನ.09): ರಾಜರಾಜೇಶ್ವರಿನಗರ, ಶಿರಾ ಉಪಚುನಾವಣೆ ಫಲಿತಾಂಶ ಪ್ರಕಟವಾಗುವ ಮೊದಲೇ ರಾಜ್ಯದಲ್ಲಿ ಸಚಿವ ಸ್ಥಾನಕ್ಕಾಗಿ ಮತ್ತೊಮ್ಮೆ ಪೈಪೋಟಿ ಶುರುವಾಗಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ವಿಧಾನ ಪರಿಷತ್‌ ಸದಸ್ಯರಾದ ಎಚ್‌.ವಿಶ್ವನಾಥ್‌ ಹಾಗೂ ಆರ್‌.ಶಂಕರ್‌ ಅವರು ದೆಹಲಿಯಲ್ಲಿ ಈಗಾಗಲೇ ಲಾಬಿ ಆರಂಭಿಸಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.

Add Asianetnews Kannada as a Preferred SourcegooglePreferred

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸದ್ಯದಲ್ಲೇ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಆದರೆ ಇದಕ್ಕೂ ಮೊದಲೇ ಭಾನುವಾರ ದೆಹಲಿಗೆ ಆಗಮಿಸಿರುವ ವಿಶ್ವನಾಥ್‌ ಹಾಗೂ ಆರ್‌.ಶಂಕರ್‌ ಪಕ್ಷದ ರಾಷ್ಟ್ರೀಯ ನಾಯಕರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಸಂಘಟನಾ ಕಾರ್ಯದರ್ಶಿ ಬಿ.ಎಲ… ಸಂತೋಷ್‌ ಭೇಟಿಗೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಮುನಿರತ್ನ ಅವರು ಗೆದ್ದ ಬಳಿಕ ಅವರಿಗೆ ಸಚಿವಸ್ಥಾನ ನೀಡಬೇಕಾಗುತ್ತದೆ. ಈ ವೇಳೆ ತಮಗೂ ಸ್ಥಾನ ಪಡೆದುಕೊಳ್ಳುವ ಬಗ್ಗೆ ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದಾರೆ.

ಮಾಹಿತಿ ಇಲ್ಲ ಎಂದ ಸಿ.ಟಿ.ರವಿ: ವಿಶ್ವನಾಥ್‌ ಹಾಗೂ ಆರ್‌.ಶಂಕರ್‌ ದೆಹಲಿಗೆ ಆಗಮಿಸಿ ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಅವರನ್ನು ತಾವು ಗಮನಿಸಿಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ವಿಶ್ವನಾಥ್‌ ಮತ್ತು ಆರ್‌.ಶಂಕರ್‌ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ರಾಷ್ಟ್ರೀಯ ಕಾರ‍್ಯದರ್ಶಿಗಳ ಸಭೆ ಹಿನ್ನೆಲೆಯಲ್ಲಿ ಆಗಮಿಸಿದ್ದೇನೆ. ಅವರಿಬ್ಬರನ್ನು ನಾನು ಗಮನಿಸಿಲ್ಲ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.