ವಿಧಾನ ಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಭಾರಿ ಕುತೂಹಲ ಕೆರಳಿಸಿದ ಜೂನ್ 15 ರಂದು ಫಲಿತಾಂಶ ಪ್ರಕಟ ಯಾರಿಗೆ ಗೆಲುವು ಯಾರಿಗೆ ಸೋಲು, ಕುತೂಹಲ ಘಟ್ಟದಲ್ಲಿ ಕದನ
ಬೆಂಗಳೂರು(ಜೂ.14): ವಿಧಾನ ಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆ ಫಲಿತಾಂಶ ನಾಳೆ(ಜೂ.15) ಪ್ರಕಟವಾಗಲಿದೆ. ಒಟ್ಟು 49 ಅಭ್ಯರ್ಥಿಗಳ ಭವಿಷ್ಯ ನಾಳೆ ಬಯಲಾಗಿದೆ. ಜೂನ್ 13 ರಂದು ನಡೆದಿದ್ದ ಚುನಾವಣೆಯಲ್ಲಿ ಶೇಕಡಾ 74.39 ರಷ್ಟು ಮಂದಿ ಮತದಾನ ಮಾಡಿದ್ದರು.
ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಸೇರದಂತೆ ಘಟಾನುಘಟಿಗಳು ಸ್ಪರ್ಧಿಸಿದ್ದರು. ವಾಯುವ್ಯ ಪದವೀಧರ, ದಕ್ಷಿಣ ಪದವೀಧರ, ವಾಯುವ್ಯ ಶಿಕ್ಷಕರು ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು.
ಮತ ಎಣಿಕೆಯು ಜೂ. 15 ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಬೆಳಗ್ಗೆ 7.45ಕ್ಕೆ ಮತ ಪೆಟ್ಟಿಗೆಗಳನ್ನು ಹೊರ ತೆಗೆದು, 8 ಗಂಟೆ ವೇಳೆಗೆ ಎಣಿಕೆ ಕಾರ್ಯ ಆರಂಭಿಸಲಾಗುತ್ತದೆ. ಚುನಾವಣೆ ಫಲಿತಾಂಶಕ್ಕಾಗಿ ಇದೀಗ ರಾಜಕೀಯ ಪಕ್ಷಗಳು ಮಾತ್ರವಲ್ಲ, ರಾಜ್ಯದ ಜನತೆಯೂ ಕಾಯುತ್ತಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಬಸವರಾಜ ಹೊರಟ್ಟಿ, ಕಾಂಗ್ರೆಸ್ನಿಂದ ಬಸವರಾಜ ಗುರಿಕಾರ ಹಾಗೂ ಜೆಡಿಎಸ್ನಿಂದ ಶ್ರೀಶೈಲ ಗಡದಿನ್ನಿ ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ ಹೊರಟ್ಟಿ ಹಾಗೂ ಬಸವರಾಜ್ ಗುರಿಕಾರ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ.
ಪ್ರತಿ ಮತ ಎಣಿಕೆ ಕೇಂದ್ರಗಳಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಭದ್ರತೆ ವಿಚಾರದಲ್ಲೂ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ಅವಕಾಶ ನೀಡದಿರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಹಾಗೂ ಶಾಹಿ ಪೆನ್ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಇದೇ ರೀತಿ ನೀರಿನ ಬಾಟಲ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿರುತ್ತದೆ. ಮಾಸ್ಕ್ ಧರಿಸಿಕೊಂಡು ಬರುವುದು ಕಡ್ಡಾಯವಾಗಿದ್ದು, ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶವಿರುತ್ತದೆ. ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರುಗಳಿಗೆ ಪಾವತಿ ಆಧಾರದ ಮೇಲೆ ಊಟೋಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ.
