ವಿಪಕ್ಷದ 20 ಶಾಸಕರ ರಾಜೀನಾಮೆ ಕೊಡಿಸುವೆ| ರಮೇಶ ಜಾರಕಿಹೊಳಿ ಬಾಂಬ್‌| -ಹೈಕಮಾಂಡ್‌ ಒಪ್ಪಿದರೆ ಈ ಕೆಲಸ| ಆದರೆ ಬಹುಮತ ಇರುವ ಕಾರಣ ಈ ಯತ್ನ ಮಾಡಲ್ಲ

ಬೆಂಗಳೂರು(ಮೇ.31): ಶುಕ್ರವಾರವಷ್ಟೇ ಐವರು ಕಾಂಗ್ರೆಸ್‌ ಶಾಸಕರ ರಾಜೀನಾಮೆ ಕೊಡಿಸುವೆ ಎಂದು ಹೇಳಿದ್ದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ಶನಿವಾರ ಮತ್ತೆ ಬಿಜೆಪಿ ಹೈಕಮಾಂಡ್‌, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಪ್ಪಿಗೆ ನೀಡಿದರೆ ಪ್ರತಿಪಕ್ಷದ 20 ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ. ಆದರೆ ಸರ್ಕಾರಕ್ಕೆ ಬಹುಮತ ಇದ್ದು, ಪ್ರತಿಪಕ್ಷ ಶಾಸಕರ ರಾಜೀನಾಮೆ ಕೊಡಿಸುವ ಪ್ರಯತ್ನಕ್ಕೆ ಮುಂದಾಗುವುದಿಲ್ಲ ಎಂದಿದ್ದಾರೆ.

Add Asianetnews Kannada as a Preferred SourcegooglePreferred

BJP ಅಸಮಾಧಾನ: ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿರುವ ದಾರಿಗಳೇನು?

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸರ್ಕಾರಕ್ಕೆ ಬಹುಮತ ಇದ್ದು, ಪ್ರತಿಪಕ್ಷ ಶಾಸಕರ ರಾಜೀನಾಮೆ ಕೊಡಿಸುವ ಅಗತ್ಯತೆ ಇಲ್ಲ. ಆದರೆ, ಬಿಜೆಪಿ ಹೈಕಮಾಂಡ್‌ ಮತ್ತು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದರೆ ಪ್ರತಿಪಕ್ಷದ 20 ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ. ಬೆಳಗಾವಿಯ 3, ವಿಜಯಪುರ 3, ಬೀದರ್‌ 2, ಕಲಬುರಗಿ 1, ರಾಯಚೂರು 2, ಕೊಪ್ಪಳ 2, ಬಳ್ಳಾರಿ 2, ದಾವಣಗೆರೆ 1, ಚಿತ್ರದುರ್ಗ 1, ಬೆಂಗಳೂರು ಸುತ್ತಮುತ್ತಲಿನ 2 ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ’ ಎಂದು ಹೇಳಿದರು.

ಬಿಜೆಪಿ ರೆಬಲ್ಸ್ ಪಟ್ಟಿಯಲ್ಲಿ ಸಿದ್ದು ಜತೆ ಸಚಿವರಾಗಿ ಕೆಲಸ ಮಾಡಿದವರಿದ್ದಾರೆ!

‘ಯಡಿಯೂರಪ್ಪ ಜತೆ ನಾವು ಕೊನೆಯವರೆಗೆ ನಿಲ್ಲುತ್ತೇವೆ. ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತೀಯ ಸಭೆ ಇಲ್ಲ. ಊಟಕ್ಕಾಗಿ ಶಾಸಕರು ಸೇರಿದ್ದಾರೆ. ಉಮೇಶ್‌ ಕತ್ತಿ ಅವರು ಸಚಿವ ಸ್ಥಾನ ಮತ್ತು ಅವರ ಸಹೋದರನಿಗೆ ರಾಜ್ಯಸಭಾ ಸ್ಥಾನ ಕೇಳುವುದು ತಪ್ಪಲ್ಲ. ಎಲ್ಲರೂ ಕುಳಿತು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.