Land Grab Case: ಬೈರತಿ ಬಸವರಾಜು ವಿರುದ್ಧ ಭೂ ಕಬಳಿಕೆ ಆರೋಪ: ಚರ್ಚೆಗೆ ಕಾಂಗ್ರೆಸ್ ಪಟ್ಟು, ಸಭಾತ್ಯಾಗ!
*ನಗರಾಭಿವೃದ್ಧಿ ಸಚಿವರ ವಿರುದ್ಧ ಭೂಕಬಳಿಕೆ ಆರೋಪ
*ಚರ್ಚೆಗೆ ಕಾಂಗ್ರೆಸ್ ಪಟ್ಟು , ಪ್ರತಿಭಟನೆ: ಸರ್ಕಾರಕ್ಕೆ ಮುಜುಗರ
*ಬೈರತಿ ಕೇಸ್ ಬಗ್ಗೆ ಮತ್ತೆ ಗದ್ದಲ, ಸಭಾತ್ಯಾಗ
ವಿಧಾನ ಮಂಡಲ (ಡಿ.21): ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು (Byrathi Basavaraj) ವಿರುದ್ಧದ ಭೂ ಕಬಳಿಕೆ (Land Grab) ಆರೋಪ ಪ್ರಕರಣ ಸೋಮವಾರವೂ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ (Belagavi Assembly Session) ಪ್ರತಿಭಟನೆ, ಧರಣಿ, ಅಂತಿಮವಾಗಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಸಭಾತ್ಯಾಗಕ್ಕೂ ಕಾರಣವಾಯಿತು. ಪರಿಣಾಮ ಕಲಾಪ ಸರಿಯಾಗಿ ನಡೆಯಲಿಲ್ಲ. ಇದರಿಂದಾಗಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದರೂ ಉತ್ತರ ಕರ್ನಾಟಕ ಕುರಿತು ಚರ್ಚೆಗೆ ಅವಕಾಶ ಸಿಗದ ಕಾರಣ ಸರ್ಕಾರ ಮುಜುಗರ ಅನುಭವಿಸುವಂತಾಯಿತು.
ಬೈರತಿ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸೋಮವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ತೀವ್ರ ಪ್ರತಿಭಟನೆ, ಧರಣಿ ನಡೆಸಿದರು. ಚರ್ಚೆಗೆ ಅವಕಾಶ ಕೊಡದೇ ಇರುವುದನ್ನು ಖಂಡಿಸಿ, ಸಭಾತ್ಯಾಗ ಮಾಡಿದರು. ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ, ಘೋಷಣೆಗಳ ನಡುವೆ ಪ್ರಶ್ನೋತ್ತರ, ಶೂನ್ಯವೇಳೆ ಕಲಾಪಗಳು ನಡೆದರೆ, ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ಜರುಗಿತು.
ವಿಧಾನಸಭೆಯಲ್ಲಿ ವಾಕ್ಸಮರ:
ವಿಧಾನಸಭೆಯಲ್ಲಿ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ನಿಧನದ ಸಂತಾಪ ಸೂಚನೆ ಬಳಿಕ ಕಲಾಪ ಶುರುವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಚಿವ ಬೈರತಿ ಬಸವರಾಜ ವಿರುದ್ಧ ನ್ಯಾಯಾಲಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದೆ. ಆದ ಕಾರಣ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ ಸದಸ್ಯರೆಲ್ಲರೂ ಬಾವಿಗಿಳಿದು ಪ್ರತಿಭಟನೆ ಶುರು ಮಾಡಿದರು. ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆದವು. ಧಿಕ್ಕಾರದ ಘೋಷಣೆ ನಡುವೆಯೇ ಪ್ರಶ್ನೋತ್ತರ ಅವಧಿ ಪೂರ್ಣಗೊಳಿಸಿ ಕಲಾಪವನ್ನು ಮುಂದೂಡಲಾಯಿತು.
Recruitment in Aided schools: ಅನುದಾನಿತ ಶಾಲೆಗಳ ನೇಮಕ ತಡೆ ತೆರವಿಗೆ ಶೀಘ್ರ ನಿರ್ಧಾರ: ಬಿ.ಸಿ. ನಾಗೇಶ್
ಊಟದ ವಿರಾಮದ ಬಳಿಕ ಶುರುವಾದ ಕಲಾಪದಲ್ಲಿ ಕಾಂಗ್ರೆಸ್, ಬಾವಿಗಿಳಿದು ಮತ್ತೆ ಪ್ರತಿಭಟನೆ ಮುಂದುವರಿಸಿತು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಈ ಸರ್ಕಾರ ಭಂಡ ಸರ್ಕಾರ. ಭ್ರಷ್ಟತೆ ತುಂಬಿ ತುಳುಕುತ್ತಿದೆ. ಆದರೆ ಚರ್ಚಿಸಲು ಅವಕಾಶ ನೀಡುತ್ತಿಲ್ಲ ಎಂದು ಕಿಡಿಕಾರಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಇತರ ಸದಸ್ಯರೊಂದಿಗೆ ಹೊರನಡೆದರು.
ಮೇಲ್ಮನೆಯಲ್ಲಿ ಧರಣಿ:
ವಿಧಾನಪರಿಷತ್ತಿನಲ್ಲೂ ಸಂತಾಪ ಬಳಿಕ ನಂತರ ಕಾಂಗ್ರೆಸ್ ಸದಸ್ಯರು ಹಾಲಿ ಸಚಿವರೊಬ್ಬರ ಭೂ ಕಬಳಿಕೆ ಆರೋಪ ಪ್ರಕರಣದ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಸಭಾಪತಿಗಳ ಮುಂದೆ ಬಂದು ಧರಣಿ ಆರಂಭಿಸಿದರು.
ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಾಗಿದೆ. ಹೀಗಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಆಗ ಕಾಂಗ್ರೆಸ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಮತ್ತಿತರರು, ನಿಯಮ 68 ಅಡಿ ಸಲ್ಲಿಸಿರುವ ಪ್ರಸ್ತಾವನೆಗೆ ಚರ್ಚಿಸಲು ಯಾವಾಗ ಅವಕಾಶ ಕೊಡುತ್ತೀರಿ ಎಂದು ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸಿ ನಂತರ ತೀರ್ಮಾನಿಸುವುದಾಗಿ ಸಭಾಪತಿ ಹೇಳಿದಾಗ ಅದಕ್ಕೆ ಒಪ್ಪದ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು.
ಸಂಧಾನ ಸಭೆಯಲ್ಲಿ ಬಗೆಹರಿಯದ ಸಮಸ್ಯೆ!
ಎಸ್.ಆರ್. ಪಾಟೀಲ್ ಅವರು, ಸದನವನ್ನು 10 ನಿಮಿಷ ಮುಂದೂಡಿ ಎಲ್ಲ ಮುಖಂಡರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಸಭಾಪತಿಗಳಿಗೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಸಭಾಪತಿ ಹೊರಟ್ಟಿಕಲಾಪ ಮುಂದೂಡಿದರು. ಆದರೆ ಸಂಧಾನ ಸಭೆಯಲ್ಲಿ ಸಮಸ್ಯೆ ಬಗೆಹರಿಯಲಿಲ್ಲ. ಪುನಃ ಸದನ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪುನಃ ಧರಣಿ ಆರಂಭಿಸುತ್ತಿದ್ದಂತೆ ಸಭಾಪತಿ ಹೊರಟ್ಟಿಪ್ರಶ್ನೋತ್ತರ ಕಲಾಪ ಆರಂಭಿಸಿದರು. ಇದಾದ ಬಳಿಕ ಭೋಜನ ವಿರಾಮಕ್ಕೆ ಮುಂದೂಡಿದರು.
Belagavi Winter Session ಅಧಿವೇಶನಕ್ಕೆ ಹೋಗಿ ಏನ್ಮಾಡಲಿ? ಪ್ರತಿ ದಿನ ಕಲಾಪ ವ್ಯರ್ಥ ಎಂದ ಹೆಚ್ಡಿ ಕುಮಾರಸ್ವಾಮಿ!
ಭೋಜನ ವಿರಾಮದ ನಂತರ ಸಹ ಕಾಂಗ್ರೆಸ್ ಸದಸ್ಯರು ಸಚಿವರ ಭೂ ಕಬಳಿಕೆ ವಿಷಯ ಚರ್ಚಿಸಲು ಅವಕಾಶ ನೀಡಬೇಕೆಂಬ ಮನವಿಗೆ ಸಭಾಪತಿ ಒಪ್ಪದೇ ಎಂಇಎಸ್ ಪುಂಡರ ಗಲಾಟೆ ಬಗ್ಗೆ ಚರ್ಚಿಸಲು ಅವಕಾಶ ನೀಡಿದರು. ಇದನ್ನು ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
"ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ, ಅತಿವೃಷ್ಟಿ, ಎಂಇಎಸ್ ಪುಂಡಾಟಿಕೆ ಕುರಿತು ಸುದೀರ್ಘ ಚರ್ಚೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಸಚಿವ ಬೈರತಿ ಬಸವರಾಜ ವಿರುದ್ಧದ ಭೂವ್ಯಾಜ್ಯದ ಚರ್ಚೆಗೆ ಅವಕಾಶ ನೀಡದಿರುವುದನ್ನು ಖಂಡಿಸಿ ಸಭಾತ್ಯಾಗ ಮಾಡಿದ್ದೇವೆ ಅಷ್ಟೆ" ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ