* ವಿಧಾನ ಪರಿಷತ್ ಚುನಾವಣೆ ಫಲಿತಾಂಶ* ಎಲ್ಲಾ ಏಳೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ* ಬಿಜೆಪಿಗೆ 4, ಕಾಂಗ್ರೆಸ್ ಗೆ 2 ಹಾಗೂ ಜೆಡಿಎಸ್ ಗೆ ಒಂದು ಸ್ಥಾನ

ಬೆಂಗಳೂರು, (ಮೇ.27): ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ ನ ಏಳು ಸ್ಥಾನಗಳ ಚುನಾವಣೆಗೆ ಸ್ಪರ್ಧಿಸಿದ್ದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ 7 ಸ್ಥಾನಗಳ ಪೈಕಿ ಬಿಜೆಪಿಗೆ 4, ಕಾಂಗ್ರೆಸ್ ಗೆ 2 ಹಾಗೂ ಜೆಡಿಎಸ್ ಗೆ ಒಂದು ಸ್ಥಾನ ದಕ್ಕಿದೆ. 

Add Asianetnews Kannada as a Preferred SourcegooglePreferred

ದಿನಾಂಕ 03-06-2022 ರಂದು ನಿಗಧಿಯಾಗಿದ್ದ ಚುನಾವಣೆಗೆ ಸ್ಪರ್ಧಿಸಿದ್ದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿಗಳೂ ಆದ ವಿಶಾಲಾಕ್ಷಿ ಅವರು ಇಂದು (ಶುಕ್ರವಾರ) ಘೋಷಿಸಿದರು.

ಮೇ 24 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು, ಮೇ 25 ರಂದು ಪರಿಶೀಲನೆ ಹಾಗೂ ಮೇ 27 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು. ಏಳು ಸ್ಥಾನಗಳಿಗೆ ಏಳು ಅಭ್ಯರ್ಥಿಗಳನ್ನ ಬಿಟ್ಟು ಬೇರೆಯಾರು ಸ್ಪರ್ಧೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿಅಂತಿಮ ಕಣದಲ್ಲಿ ಉಳಿದಿದ್ದ ಕಾರಣಕ್ಕೆ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

MLC ಚುನಾವಣೆ: ಅಭ್ಯರ್ಥಿಗಳ ಆಯ್ಕೆ, ಅಹಿಂದ ಮಂತ್ರ ಜಪಿಸಿದ 3 ಪಕ್ಷಗಳು

ಅವಿರೋಧವಾಗಿ ಆಯ್ಕೆಯಾದವರು
ಬಿಜೆಪಿಯಿಂದ ಸ್ಪರ್ಧಿಸಿದ್ದ ಸವದಿ ಲಕ್ಷ್ಮಣ, ಟಿ. ನಾರಾಯಣಸ್ವಾಮಿ, ಹೇಮಾಲತಾ ನಾಯಕ ಹಾಗೂ ಎಸ್. ಕೇಶವ ಪ್ರಸಾದ್‌ ಆಯ್ಕೆಯಾಗಿದ್ರೆ, ಕಾಂಗ್ರೆಸ್‌ನಿಂದ ಕೆ.ಅಬ್ದುಲ್ ಜಬ್ಬಾರ್ ಹಾಗೂ ಎಂ. ನಾಗರಾಜ್ ಯಾದವ್ ಆಯ್ಕೆಯಾಗಿದ್ದಾರೆ. ಇನ್ನು ಒಂದು ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಶರವಣನ್. ಟಿ ಅವರು ಅವಿರೋಧವಾಗಿ ವಿಧಾನಪರಿಷತ್‌ಗೆ ಆಯ್ಕೆಯಾದರು.

ಇಂದು ನಾಮಪತ್ರ ಹಿಂಪಡೆಯುವ ಸಮಯ ಮೀರಿದ ನಂತರ ನಾಮಪತ್ರ ಸಲ್ಲಿಸಿದ್ದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯ್ತು. ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿಗಳೂ ಆದ ಶ್ರೀಮತಿ ವಿಶಾಲಾಕ್ಷಿ ಅವರು ಅವಿರೋಧ ಆಯ್ಕೆಯ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಗಳಿಗೆ ವಿತರಿಸಿದರು.