Asianet Suvarna News Asianet Suvarna News

Karnataka Election Results 2023: ಉತ್ತರ ಕನ್ನಡದಲ್ಲಿ ಕೈ ಹಿಡಿದ ಮತದಾರರು, ಬಿಜೆಪಿಗೆ ಬರೀ ಇಬ್ಬರು!

ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಆರು ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದರೆ, ಬಿಜೆಪಿ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಅಚ್ಚರಿ ಎನ್ನುವಂತೆ ವಿಶ್ವೇಶ್ವರ ಹೆಗಡೆ ಕಾಗೇರಿ, ರೂಪಾಲಿ ನಾಯ್ಕ್‌ ಸೋಲು ಕಂಡಿದ್ದಾರೆ.
 

Karnataka Election Results 2023 Uttara kannada assembly constituencies san
Author
First Published May 13, 2023, 9:24 PM IST

ಬೆಂಗಳೂರು (ಮೇ.13): ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ಕಾರವಾರ, ಕುಮಟಾ, ಭಟ್ಕಳ-ಹೊನ್ನಾವರ, ಶಿರಸಿ-ಸಿದ್ಧಾಪುರ ಹಾಗೂ ಯಲ್ಲಾಪುರ ಸೇರಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದ್ದರೆ, ಕಾಂಗ್ರೆಸ್‌ ತನ್ನ ಬದ್ರಕೋಟೆಯಾದ ಹಳಿಯಾಳದಲ್ಲಿ ಗೆಲುವಿನ ನಗು ಬೀರಿತ್ತು. ಆದರೆ, ಈ ಬಾರಿ ಕಾರವಾರ, ಭಟ್ಕಳ-ಹೊನ್ನಾವರ, ಶಿರಸಿ-ಸಿದ್ಧಾಪುರ ಹಾಗೂ ಯಲ್ಲಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಹಳಿಯಾಳ ಹಾಗೂ ಕುಮಟಾದಲ್ಲಿ ಕಾಂಗ್ಎಸ್,‌ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. 

ಜಿಲ್ಲೆಯಲ್ಲಿ ಒಟ್ಟು ಮತದಾರರು: 1194714
ಪುರುಷ ಮತದಾರರು: 599527
ಮಹಿಳಾ ಮತದಾರರು: 595180
ಇತರೆ: 7
ಶೇಕಡವಾರು ಮತದಾನ: 77.92%

ಕುಮಟಾದಲ್ಲಿ ದಿನಕರ, ಮುಳುಗಿದ ಸೂರಜ್‌: ನಿವೇದಿತ್‌ ಆಳ್ವಾ, ಸೂರಜ್‌ ನಾಯ್ಕ್‌ ಸೋನಿ ಹಾಗೂ ದಿನಕರ ಶೆಟ್ಟಿ ಅವರ ಫೈಟ್‌ನ ಕಾರಣದಿಂದಾಗಿ ಕುಮಟಾದಲ್ಲಿ ತ್ರಿಕೋನ ಫೈಟ್‌ ಏರ್ಪಟ್ಟಿತ್ತು. ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ದಿನಕರ ಶೆಟ್ಟಿ ಅಭೂತಪೂರ್ವ ಗೆಲುವು ಸಾಧಿಸಿದ್ದರು ಈ ಬಾರಿಯೂ ಅದನ್ನು ಪುನರಾವರ್ತನೆ ಮಾಡಲು ಯಶಸ್ವಿಯಾಗಿದ್ದಾರೆ. ಆಗ ಕಾಂಗ್ರೆಸ್‌ನ ಶಾರದಾ ಶೆಟ್ಟಿ ವಿರುದ್ಧ ಗೆಲುವು ಸಾಧಿಸಿದ್ದರೆ, ಈ ಬಾರಿ ಜೆಡಿಎಸ್‌ನ ಸೂರಜ್‌ ನಾಯ್ಕ್‌ ಸೋನಿಯಿಂದ ದೊಡ್ಡ ಮಟ್ಟದ ಪ್ರತಿರೋಧ ಎದುರಿಸಿಯೂ ಗೆಲುವು ಕಂಡಿದ್ದಾರೆ. ಹಾಲಕ್ಕಿ ಒಕ್ಕಲಿಗರು, ನಾಮಧಾರಿಗಳು, ಹವ್ಯಕರು ಇಲ್ಲಿನ ಪ್ರಬಲ ಜಾತಿಯಾಗಿದ್ದವು.

ಪಕ್ಷ ಅಭ್ಯರ್ಥಿಗಳು ಪಡೆದ ಮತ ಅಂತರ
ಬಿಜೆಪಿ  ದಿನಕರ ಶೆಟ್ಟಿ 59966 673 ಮತ
ಕಾಂಗ್ರೆಸ್‌ ನಿವೇದಿತ್‌ ಆಳ್ವಾ 19272 ಸೋಲು
ಜೆಡಿಎಸ್‌ ಸೂರಜ್‌ ನಾಯ್ಕ್‌ ಸೋನಿ 59293 ಸೋಲು


ಕಾಗೇರಿ ಓಟಕ್ಕೆ ಬ್ರೇಕ್‌ ಹಾಕಿದ ಭೀಮಣ್ಣ: ಶಿರಸಿ ಕ್ಷೇತ್ರದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ದೊಡ್ಡ ಸೋಲು ಕಂಡಿದ್ದಾರೆ. ಇದು ಬಿಜೆಪಿ ಪಾಲಿಗೂ ಆಘಾತಕಾರಿ ಸಂಗತಿ ಎನಿಸಿದೆ. ಸತತ ಏಳನೇ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಗೇರಿ ಓಟಕ್ಕೆ ನಾಮಧಾರಿ ಸಮುದಾಯದ ಭೀಮಣ್ಣ ನಾಯ್ಕ್ ಬ್ರೇಕ್‌ ಹಾಕಿದ್ದಾರೆ. ಈಗಾಗಲೇ ಎರಡು ಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಫೈಟ್‌ ಮಾಡಿ ಸೋಲು ಕಂಡಿದ್ದ ಭೀಮಣ್ಣ ನಾಯ್ಕ್‌, ವಿಧಾನಪರಿಷತ್‌ನಲ್ಲೂ ಒಮ್ಮೆ ಸೋತಿದ್ದರು. ಈ ಬಾರಿ ಬಿಜೆಪಿ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಕ್ಷ ಅಭ್ಯರ್ಥಿಗಳು ಪಡೆದ ಮತ ಅಂತರ
ಬಿಜೆಪಿ ವಿಶ್ವೇಶ್ವರ ಹೆಗಡೆ ಕಾಗೇರಿ 68175 ಸೋಲು
ಕಾಂಗ್ರೆಸ್‌ ಭೀಮಣ್ಣ ನಾಯ್ಕ್‌ 76887 8712 ಮತ
ಜೆಡಿಎಸ್‌ ಉಪೇಂದ್ರ ಪೈ 9138 ಸೋಲು


ಯಲ್ಲಾಪುರಕ್ಕೆ ಮತ್ತೊಮ್ಮೆ ಹೆಬ್ಬಾರ: ಈ ಬಾರಿ ಯಲ್ಲಾಪುರದಲ್ಲಿ ಅಭ್ಯರ್ಥಿಗಳು ತಮ್ಮ ಪಕ್ಷವನ್ನು ಬದಲಾಯಿಸಿದ್ದರೂ, ಎದುರಾಳಿಗಳು ಹಳಬರೇ ಆಗಿದ್ದರು. ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಬಂದಿದ್ದ ಶಿವರಾಮ್‌ ಹೆಬ್ಬಾರ್‌ ಈ ಬಾರಿಯೂ ಗೆಲುವು ಕಾಣುವಲ್ಲಿ ಯಶ ಕಂಡಿದ್ದಾರೆ. ಹೆಬ್ಬಾರ್‌ ಕಾರಣದಿಂದಾಗಿ ಟಿಕೆಟ್‌ ಸಿಗದೇ ಇರಬಹುದು ಎಂದು ಅಂದಾಜಿಸಿದ್ದ ವಿಎಸ್‌ ಪಾಟೀಲ್‌ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರಾದರೂ ಸೋಲು ಕಂಡಿದ್ದಾರೆ. ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿಗಳನ್ನು ಒಳಗೊಂಡ ಈ ಕ್ಷೇತ್ರದಲ್ಲಿ ಹವ್ಯಕ ಬ್ರಾಹ್ಮಣರು ಹಾಗೂ ನಾಮಧಾರಿ ಮತದಾರರೇ ಹೆಚ್ಚಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಹೆಬ್ಬಾರ್‌ ಬಳಿಕ 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದರು.

ಪಕ್ಷ ಅಭ್ಯರ್ಥಿಗಳು ಪಡೆದ ಮತ ಅಂತರ
ಬಿಜೆಪಿ ಶಿವರಾಮ ಹೆಬ್ಬಾರ 74699 4004 ಮತ
ಕಾಂಗ್ರೆಸ್‌ ವಿ.ಎಸ್.ಪಾಟೀಲ್ 70695 ಸೋಲು 
ಜೆಡಿಎಸ್‌ ನಾಗೇಶ ನಾಯ್ಕ 1662 ಸೋಲು


ಸೈಲ್‌ ಮುಂದೆ ಶರಣಾದ ರೂಪಾಲಿ, ಕಾರವಾರ ಬಿಟ್ಟ ಬಿಜೆಪಿ: ಹಾಲಿ ಶಾಸಕಿಯಾಗಿದ್ದ ಬಿಜೆಪಿಯ ರೂಪಾಲಿ ನಾಯ್ಕ್‌ ಈ ಬಾರಿ ಹೀನಾಯ ಸೋಲು ಕಂಡಿದ್ದಾರೆ. ಮಾಜಿ ಶಾಸಕ ಸತೀಶ್‌ ಸೈಲ್‌ ದೊಡ್ಡ ಹೋರಾಟ ನೋಡಿ ಗೆಲುವು ಕಾಣುವಲ್ಲಿ ಯಶ ಕಂಡಿದ್ದಾರೆ. 2018ರ ಚುನಾವಣೆಯಲ್ಲಿ ಮೋದಿ ಅಲೆ ಹಾಗೂ ಪರೇಶ್‌ ಮೆಸ್ತ ಸಾವಿನಿಂದ ಉಂಟಾದ ಅಲೆಯಿಂದ ರೂಪಾಲಿ ನಾಯ್ಕ್‌ ಗೆಲುವು ಕಂಡಿದ್ದರು. ಆದರೆ, ಅಭಿವೃದ್ಧಿಯನ್ನು ಮುನ್ನಲೆಯಾಗಿಟ್ಟುಕೊಂಡು ಹೋಗುವಲ್ಲಿ ಸೋಲು ಕಂಡ ರೂಪಾಲಿ ಈಗ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದಾರೆ.

ಪಕ್ಷ ಅಭ್ಯರ್ಥಿಗಳು ಪಡೆದ ಮತ ಅಂತರ
ಬಿಜೆಪಿ ರೂಪಾಲಿ ನಾಯ್ಕ್‌ 75307 ಸೋಲು
ಕಾಂಗ್ರೆಸ್‌ ಸತೀಶ್ ಸೈಲ್ 77445 2138 ಮತ
ಜೆಡಿಎಸ್‌ ಚೈತ್ರಾ ಕೊಠಾರ್‌ಕರ್ 2918 ಸೋಲು

 

ಮಂಕಾಳು ವೈದ್ಯರಿಗೆ ಮೆಜೆಸ್ಟಿಕ್‌ ಗೆಲುವು ನೀಡಿದ ಭಟ್ಕಳ: ಈ ಬಾರಿ ಭಟ್ಕಳದಲ್ಲಿ ತ್ರಿಕೋನ ಪೈಪೋಟಿಯ ನಿರೀಕ್ಷೆ ಇತ್ತಾದರೂ, ಕೊನೆಗೆ ಸಾಧ್ಯವಾಗದ್ದು ಬಿಜೆಪಿಯ ಸುನೀಲ್‌ ನಾಯ್ಕ್‌ ಹಾಗೂ ಮಂಕಾಳು ವೈದ್ಯ ನಡುವಿನ ನೇರ ಫೈಟ್‌. ಕೊನೆಗೆ ಅಂದಾಜು 30 ಸಾವಿರ ಮತಗಳ ಅಂತರಕ್ಕಿಂತಲೂ ಹೆಚ್ಚು ಮತದಿಂದ ಮಂಕಾಳು ವೈದ್ಯ ಗೆಲುವು ಕಂಡಿದ್ದಾರೆ. ಸುನೀಲ್‌ ನಾಯ್ಕ್‌ ಪಾಲಿಗೆ ನಾಮಧಾರಿ ಸಮಾಜದ ಮತಗಳಿಗಿಂತ ಆಡಳಿತ ವಿರೋಧಿ ಮತಗಳೇ ಸೋಲಿಗೆ ಪ್ರಮುಖ ಕಾರಣವಾಗಿದೆ.

ಪಕ್ಷ ಅಭ್ಯರ್ಥಿಗಳು ಪಡೆದ ಮತ ಅಂತರ
ಬಿಜೆಪಿ ಸುನೀಲ್‌ ನಾಯ್ಕ್‌ 67771 ಸೋಲು
ಕಾಂಗ್ರೆಸ್ ಮಂಕಾಳು ವೈದ್ಯ 100442 32671 ಮತ
ಜೆಡಿಎಸ್‌ ನಾಗೇಂದ್ರ ನಾಯ್ಕ್‌ 1502 ಸೋಲು


ಹಳಿಯಾಳದಲ್ಲಿ ಗೆದ್ದು ಬೀಗಿದ ದೇಶಪಾಂಡೆ: 10ನೇ ಬಾರಿಗೆ ಕಣದಲ್ಲಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌ವಿ ದೇಶಪಾಂಡೆ, ಬಿಜೆಪಿಯ ಸುನೀಲ್‌ ಹೆಗಡೆಯಿಂದ ದೊಡ್ಡ ಮಟ್ಟದ ಪೈಪೋಟಿ ಎದುರಿಸಿದರೂ ಕೊನೆಗೆ ಗೆಲುವು ಕಾಣುವಲ್ಲಿ ಯಶ ಕಂಡಿದ್ದಾರೆ. ಹಳಿಯಾಳ, ದಾಂಡೆಲಿ ಹಾಗೂ ಜೊಯಿಡಾ ಕ್ಷೇತ್ರಗಳನ್ನು ಒಳಗೊಂಡ ಸ್ಪರ್ಧಾ ಕಣ ಇದಾಗಿತ್ತು. ಈವರೆಗೂ 9 ಬಾರಿ ಸ್ಪರ್ಧಿಸಿ 8 ಬಾರಿ ಗೆಲುವು ಕಂಡಿದ್ದ ದೇಶಪಾಂಡೆಗೆ ಇದು 9ನೇ ಗೆಲುವು. ದೇಶಪಾಂಡೆ ಪಾಳಯದಿಂದ ಹೊರಬಂದಿದ್ದ ಎಲ್‌ಎಲ್‌ ಘೋಟ್ನೇಕರ್‌ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದು ಚುನಾವಣಾ ಲೆಕ್ಕಾಚಾರವನ್ನು ಕೊಂಚ ಬುಡಮೇಲು ಮಾಡಿತ್ತಾದರೂ ಇದರಿಂದ ದೇಶಪಾಂಡೆಗೆ ಯಾವುದೇ ಸಮಸ್ಯೆ ಆಗಲಿಲ್ಲ.

ಪಕ್ಷ ಅಭ್ಯರ್ಥಿಗಳು ಪಡೆದ ಮತ ಅಂತರ
ಬಿಜೆಪಿ  ಸುನೀಲ್‌ ಹೆಗಡೆ 53617 ಸೋಲು
ಕಾಂಗ್ರೆಸ್‌ ಆರ್. ವಿ. ದೇಶಪಾಂಡೆ 57240 3623 ಮತ
ಜೆಡಿಎಸ್‌ ಎಸ್. ಎಲ್. ಘೋಟ್ನೇಕರ್ 28814 ಸೋಲು

ಇದನ್ನೂ ಓದಿ: SIRSI VISHWESHWARA HEGADE KAGERI ELECTION RESULTS 2023: ಭೀಮಣ್ಣನ ಮುಂದೆ ಜಾರಿಬಿದ್ದ ಕಾಗೇರಿ!

ಇದನ್ನೂ ಓದಿ:  Karnataka assembly election: ಭಟ್ಕಳದಲ್ಲಿ ಬಿಜೆಪಿ-ಕಾಂಗ್ರೆಸ್ ಮಾತಿನ ಚಕಮಕಿ: ಲಘು ಲಾಠಿ ಪ್ರಹಾರ!

Follow Us:
Download App:
  • android
  • ios