ಚುನಾವಣಾ ಪ್ರಚಾರದ ಅಂಗವಾಗಿ ಬೆಂಗಳೂರಿನಲ್ಲಿ ಡೆಲಿವರಿ ಕೆಲಸಗಾರರ ಜತೆ ಸಂವಾದ ನಡೆಸಿದ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು, ಡೆಲಿವರಿ ಯುವಕನ ಬೈಕ್‌ನಲ್ಲೇ ಸಾಮಾನ್ಯ ಜನರಂತೆ ಹಿಂಬದಿ ಸವಾರರಾಗಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದರು.

ಬೆಂಗಳೂರು (ಮೇ.08): ಚುನಾವಣಾ ಪ್ರಚಾರದ ಅಂಗವಾಗಿ ಬೆಂಗಳೂರಿನಲ್ಲಿ ಡೆಲಿವರಿ ಕೆಲಸಗಾರರ ಜತೆ ಸಂವಾದ ನಡೆಸಿದ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು, ಡೆಲಿವರಿ ಯುವಕನ ಬೈಕ್‌ನಲ್ಲೇ ಸಾಮಾನ್ಯ ಜನರಂತೆ ಹಿಂಬದಿ ಸವಾರರಾಗಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದರು. 

ಬೆಂಗಳೂರಿನ ಐಕಾನಿಕ್‌ ಏರ್‌ಲೈನ್ಸ್‌ ಹೋಟೆಲ್‌ನಲ್ಲಿ ಅಸಂಘಟಿತ ಡೆಲಿವರಿ ಕಾರ್ಮಿಕರು ಮತ್ತು ಡಂಜೊ, ಸ್ವಿಗ್ಗಿ, ಜೊಮ್ಯಾಟೋ, ಬ್ಲಿಂಕಿಟ್‌ ಡೆಲಿವರಿ ಹುಡುಗರ ಜತೆ ರಾಹುಲ್‌ ಗಾಂಧಿ ಸಂವಾದ ನಡೆಸಿದರು. ಸಂವಾದ ಬಳಿಕ ಎಂ.ಜಿ. ರಸ್ತೆ ಹಾಗೂ ಸೇಂಟ್‌ ಮಾರ್ಕ್ಸ್ ವೃತ್ತದ ನಡುವಿನ ಏರ್‌ಲೈನ್ಸ್‌ ಹೋಟೆಲ್‌ನಿಂದ ವಸಂತನಗರದ ಶಾಂಘ್ರಿಲಾ ಹೋಟೆಲ್‌ ಕಡೆಗೆ ರಾಹುಲ್‌ ಗಾಂಧಿ ತೆರಳಬೇಕಿತ್ತು. 

ಪ್ರಧಾನಿ ಮೋದಿ ಮೆಗಾ ಪ್ರಚಾರಕ್ಕೆ ತೆರೆ: ಕಡೇ ದಿನ ಬೆಂಗಳೂರಲ್ಲಿ ರೋಡ್‌ ಶೋ

ಈ ವೇಳೆ ಸಂವಾದ ಮುಗಿಸಿಕೊಂಡು ತೆರಳಲು ಮುಂದಾಗಿದ್ದ ಡೆಲಿವರಿ ಯುವಕನ ಬೈಕ್‌ನ ಹಿಂಬದಿಯಲ್ಲಿ ಹೆಲ್ಮೆಟ್‌ ಧರಿಸಿಕೊಂಡು ಕುಳಿತ ರಾಹುಲ್‌ ಗಾಂಧಿ ಶಾಂಘ್ರಿಲಾ ಹೋಟೆಲ್‌ಗೆ ತೆರಳುವಂತೆ ಸೂಚನೆ ನೀಡಿದರು. ಇದರಿಂದ ಅಚ್ಚರಿಗೊಂಡ ಡೆಲಿವರಿ ಯುವಕ ಬಳಿಕ ರಾಹುಲ್‌ ಗಾಂಧಿ ಅವರನ್ನು ಕರೆದುಕೊಂಡು ಶಾಂಘ್ರಿಲಾ ಹೋಟೆಲ್‌ನತ್ತ ತೆರಳಿದರು. ಡೆಲಿವರಿ ಯುವಕನ ಜತೆ ರಾಹುಲ್‌ ಗಾಂಧಿ ಅವರು ರಾಜ್ಯ ಸರ್ಕಾರದ 40 ಪರ್ಸೆಂಟ್‌ ಭ್ರಷ್ಟಾಚಾರ, ಜನ ವಿರೋಧಿ ನೀತಿಗಳು ಹಾಗೂ ಡೆಲಿವರಿ ಕೆಲಸಗಾರರ ಸಮಸ್ಯೆಗಳನ್ನು ಕೇಳಿದರು ಎಂದು ಕಾಂಗ್ರೆಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬಹಳ ಖುಷಿಯಾಯಿತು: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಶೀಲನ್‌, ಮೊದಲಿಗೆ ಹಿಂಬದಿ ಯಾರೋ ಬಂದು ಕೂತಾಗ ಯಾರು ಎಂಬುದು ಗೊತ್ತಾಗಲಿಲ್ಲ. ಬಳಿಕ ಹಿಂದೆ ತಿರುಗಿ ರಾಹುಲ್‌ ಗಾಂಧಿ ಅವರನ್ನು ನೋಡಿ ಕ್ಷಣಕಾಲ ಭಯವಾಯಿತು. ಅವರನ್ನು ರಾಹುಲ್‌ ಗಾಂಧಿ ಅವರನ್ನು ಶಾಂಘ್ರಿಲಾ ಹೋಟೆಲ್‌ವರೆಗೂ ಕರೆದುಕೊಂಡು ಬಂದೆ. ಗಾಡಿ ಓಡಿಸುವಾಗಲೂ ಗಣ್ಯ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂಬ ಭಯವಿತ್ತು. ಬಳಿಕ ತುಂಬಾ ಖುಷಿಯಾಯಿತು. ಇದು ನನ್ನ ಜೀವನದಲ್ಲಿ ಅವಿಸ್ಮರಣೀಯ ಘಟನೆ ಎಂದು ಖುಷಿ ಹಂಚಿಕೊಂಡರು.

ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಮರೆತ ಕಾಂಗ್ರೆಸ್‌: ಸಚಿವ ಅಮಿತ್‌ ಶಾ ಕಿಡಿ

ರಾಹುಲ್‌ ಗಾಂಧಿ ಅವರ ಮಾತುಗಳನ್ನು ವಿವರಿಸಿದ ಅವರು, ಡೆಲಿವರಿ ಬಾಯ್ಸ್‌ಗೆ ರಾಜಸ್ತಾನದಲ್ಲಿ ಜೀವ ವಿಮೆ ಮಾಡಿಸಲಾಗಿದೆ. ಕರ್ನಾಟಕದಲ್ಲಿನ ಡೆಲಿವರಿ ಬಾಯ್ಸ್‌ಗೂ ಅದೇ ರೀತಿ ವಿಮೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.