Asianet Suvarna News Asianet Suvarna News

40 ಪರ್ಸೆಂಟ್‌ ಸರ್ಕಾರ ಕಿತ್ತೊಗೆದು ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ: ಪ್ರಿಯಾಂಕಾ ಗಾಂಧಿ

ದೇಶದ ಬಡ ಜನತೆಯ ಹಣವನ್ನು ಬಿಜೆಪಿ ಸರ್ಕಾರ ಅದಾನಿಗೆ ಒಪ್ಪಿಸಿ ಜನತೆಯನ್ನು ಬೀದಿಪಾಲು ಮಾಡಿದೆ. ರಾಜ್ಯದಲ್ಲಿರುವ ಶೇ. 40 ಪರ್ಸೆಂಟ್‌ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಹೇಳಿದರು. 

Karnataka Election 2023 Priyanka Gandhi Slams On BJP Govt gvd
Author
First Published Apr 26, 2023, 11:59 PM IST

ಹನೂರು (ಏ.26): ದೇಶದ ಬಡ ಜನತೆಯ ಹಣವನ್ನು ಬಿಜೆಪಿ ಸರ್ಕಾರ ಅದಾನಿಗೆ ಒಪ್ಪಿಸಿ ಜನತೆಯನ್ನು ಬೀದಿಪಾಲು ಮಾಡಿದೆ. ರಾಜ್ಯದಲ್ಲಿರುವ ಶೇ. 40 ಪರ್ಸೆಂಟ್‌ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು. ಆರ್‌.ಎಸ್‌.ದೊಡ್ಡಿ ಸರ್ಕಾರಿ ಪದವಿ ಕಾಲೇಜು ಸಮೀಪದ ಖಾಸಗಿ ಜಮೀನಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ ಬಿಜೆಪಿ ಪಕ್ಷದಿಂದ ಆಗಿರುವ ತೊಂದರೆ ಅನುಭವಿಸಿದ್ದೀರಿ. ಮಹಿಳೆಯರು, ಯುವಕರು ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ. ನಾನು ಓರ್ವ ಮಹಿಳೆಯಾಗಿ ಮಹಿಳೆಯರ ಕಷ್ಟಅನುಭವಿಸಿದ್ದೇನೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರು. ನೇರವಾಗಿ ತಮ್ಮ ಖಾತೆಗೆ ತಲುಪಿಸುತ್ತೇವೆ. ಮನೆಗೆ 200 ಯೂನಿಟ್‌ ವಿದ್ಯುತ್‌ ಸೌಲಭ್ಯ, ನಿರುದ್ಯೋಗಿ ಪದವೀಧರ ಯುವಕರಿಗೆ ತಿಂಗಳಿಗೆ 3000, ಡಿಪ್ಲೋಮೋ ಯುವಕರಿಗೆ 1500 ಸಾವಿರ ರು. ನೀಡಲಾಗುವುದು ಎಂದು ಭರವಸೆ ನೀಡಿದರು.

ನನಗೆ ಆರೋಗ್ಯಕ್ಕಿಂತ ಅಭ್ಯರ್ಥಿಗಳ ಗೆಲುವು ಮುಖ್ಯ: ಎಚ್‌.ಡಿ.ಕುಮಾರಸ್ವಾಮಿ

ನೀವೆಲ್ಲರೂ ನಮ್ಮ ಮೇಲೆ ವಿಶ್ವಾಸ ಇಟ್ಟಿರಲು ನಮ್ಮ ಅಜ್ಜಿ ಇಂದಿರಾ ಗಾಂಧಿ, ತಂದೆ ರಾಜೀವ್‌ ಗಾಂಧಿ, ತಾಯಿ ಸೋನಿಯಾ ಗಾಂಧಿ, ಕಾಂಗ್ರೆಸ್‌ ಪಕ್ಷದ ನಿಷ್ಠಾವಂತರು, ಅಧಿಕಾರಕ್ಕೆ ಬಂದ ಸರ್ಕಾರ ಜನತೆಗೆ ರಸ್ತೆ, ಕುಡಿವ ನೀರಿನ ವ್ಯವಸ್ಥೆ, ಆಸ್ಪತ್ರೆ ಸೌಲಭ್ಯ, ಶಿಕ್ಷಣಕ್ಕೆ ಒತ್ತು ನೀಡಬೇಕು. ಆದರೆ, ಬಿಜೆಪಿ ಸರ್ಕಾರ ಸೌಲಭ್ಯ ಕಲ್ಪಿಸಲು ವಿಫಲವಾಗಿದೆ. ಬಿಜೆಪಿ ಸುಳ್ಳನ್ನು ಹೊತ್ತು ನಿಮ್ಮ ಬಳಿ ಬರಲಿದೆ. ಆ ಸುಳ್ಳಿಗೆ ತಲೆ ಭಾಗಬೇಡಿ. ಬಿಜೆಪಿ ಅಧಿಕಾರಕ್ಕೆ ಬಂದು ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದೆ. ನಾನು, ದಾರಿಯಲ್ಲಿ ಬರುತ್ತಾ ನೋಡಿದೆ. ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ.

ರೈತ ಪ್ರತಿದಿನ ಕೇವಲ 25 ರು. ಮಾತ್ರ ಸಂಪಾದಿಸುತ್ತಿದ್ದಾನೆ. ಆದರೆ, ನರೇಂದ್ರ ಮೋದಿಯ ಆಪ್ತಮಿತ್ರ ಅದಾನಿ ದಿನಕ್ಕೆ 16 ಲಕ್ಷ ಕೋಟಿ ರು. ಗಳಿಸುತ್ತಿದ್ದಾನೆ. ಬಿಜೆಪಿ ಸರ್ಕಾರ ಒಂದು ಲಕ್ಷ ಕೋಟಿ ರು.ಲೂಟಿ ಮಾಡಿದೆ. ಇಷ್ಟೊಂದು ಹಣ ನನ್ನ ಬಳಿ ಇದ್ದರೆ 100 ದೊಡ್ಡ ದೊಡ್ಡ ಆಸ್ಪತ್ರೆಗಳು, 175 ಇಎಸ್‌ಐ ಆಸ್ಪತ್ರೆ, 30,000 ಸ್ಮಾರ್ಚ್‌ ಕ್ಲಾಸ್‌ ಶಾಲೆ, 750 ಕಿಮೀ ಮೆಟ್ರೋ ಟ್ರೈನ್‌, 2200 ಕಿಮೀ ಹೆದ್ದಾರಿ, ಬಡವರಿಗೆ 30ಲಕ್ಷ ಮನೆ ಕಟ್ಟಿಕೊಡುತ್ತಿದ್ದೆ. ಆದರೆ, ಬಿಜೆಪಿ ಕೊಳ್ಳೆ ಹೊಡೆದು ಇಟ್ಟುಕೊಂಡಿದೆ ಎಂದು ಆರೋಪಿಸಿದರು.

ರಾಜ್ಯದ ಅಸ್ಮಿತೆ ಆಗಿರುವ ನಂದಿನಿ ಹಾಲನ್ನು ಖಾಸಗಿ ಸಂಸ್ಥೆಯೊಂದಿಗೆ ವಿಲೀನಗೊಳಿಸಲು ಮುಂದಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಸವಣ್ಣ, ನಾರಾಯಣ ಗುರು ಅವರುಗಳ ವಿಚಾರಗಳ ಬಗ್ಗೆ ತಪುತ್ರ್ಪ ವದಂತಿ ಹಬ್ಬಿಸುತ್ತಿದೆ. ಚುನಾವಣೆ ನಿಮ್ಮ ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ ಹಾಗಾಗಿ, ನೀವು ಹುಷಾರಾಗಿರಬೇಕು. ಯಾರಿಗೆ ಮತ ಹಾಕಬೇಕು ಎಂಬುದನ್ನು ಮನಗಾಣಬೇಕು. ಬಿಜೆಪಿ ಜಾತಿ ಧರ್ಮದ ನಡುವೆ ಒಡಕು ಉಂಟು ಮಾಡುತ್ತಿದೆ. ಬಿಜೆಪಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಉದ್ಯೋಗಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಸಾಲ ಮನ್ನಾ ಮಾಡಲಾಗಿದೆ ಎಂದರು.

ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಸೋಮುಗೌಡ, ಇನ್ಸ್‌ ಪೆಕ್ಟರ್‌ಗಳಾದ ಸಂತೋಷ್‌ ಕಶ್ಯಪ್‌, ಶಶಿಕುಮಾರ್‌, ಕಿರಣ್‌ ಕುಮಾರ್‌ ಮತ್ತು ಜಿಲ್ಲೆಯ ವಿವಿಧ ಕಡೆಯಿಂದ ಪೊಲೀಸರು ಸೇರಿದಂತೆ ಕೆಎಸ್‌ಆರ್‌ಪಿಸಿ 4 ತುಕಡಿ, ಡಿಎಆರ್‌ ನಾಲ್ಕು ತುಕಡಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು. ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ, ಕಾಂಗ್ರೆಸ್‌ ರಾಜ್ಯ ಮಹಿಳಾ ಅಧ್ಯಕ್ಷ ಪುಷ್ಪಾ ಅಮರನಾಥ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಸ್ವಾಮಿ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಇನ್ನಿತರೆ ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಹನುಮ ಮಂದಿರಕ್ಕಾಗಿ ಬಿಜೆಪಿಗೆ ಮತ ನೀಡಿ: ಸಿ.ಟಿ.ರವಿ

ಕರ್ನಾಟಕ ಜನತೆ ಎಂದರೆ ನನಗೆ ಅಚ್ಚುಮೆಚ್ಚು: ಛತ್ತೀಸ್‌ಘಡದಲ್ಲಿ ರೈತರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ನೀಡಲಾದ ಅನ್ನಭಾಗ್ಯ, ಪಶು ಭಾಗ್ಯ, ಕೃಷಿ ಭಾಗ್ಯ, ಆರೋಗ್ಯ ಭಾಗ್ಯ, ಇಂದಿರಾ ಕ್ಯಾಂಟೀನ್‌ ಇತರೆ ಜನಪರ ಕಾರ್ಯಗಳು ಮೆಚ್ಚುವಂಥದ್ದು. ಕಾಂಗ್ರೆಸ್‌ ಪಕ್ಷ ನೂರಕ್ಕೆ ನೂರು ಭರವಸೆ ಈಡೇರಿಸುತ್ತದೆ. ಜನತೆಯ ವಿಕಾಸವನ್ನು ಮಾಡುತ್ತದೆ. ಕರ್ನಾಟಕದಿಂದ ಬಂದ ಯುವಕರು ನನ್ನ ಬಳಿ ಅಭಿಮಾನದಿಂದ ಮಾತನಾಡುತ್ತಾರೆ. ಕರ್ನಾಟಕ ಜನತೆ ಎಂದರೆ ನನಗೆ ಅಚ್ಚುಮೆಚ್ಚು ಎಂದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios