ಸೋನಿಯಾ, ರಾಹುಲ್‌ ಗಾಂಧಿ ಬಿಟ್ಟು ಹೋದ ಮುರುಕಲು ಕುರ್ಚಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಂದು ಕೂರಿಸಿದ್ದಾರೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಗೇಲಿ ಮಾಡಿದ್ದಾರೆ. 

ಗುಂಡ್ಲುಪೇಟೆ (ಏ.13): ಸೋನಿಯಾ, ರಾಹುಲ್‌ ಗಾಂಧಿ ಬಿಟ್ಟು ಹೋದ ಮುರುಕಲು ಕುರ್ಚಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಂದು ಕೂರಿಸಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಗೇಲಿ ಮಾಡಿದ್ದಾರೆ. ಸಿಎಂಎಸ್‌ ಕಲಾ ಮಂದಿರದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶದಲ್ಲಿ ಮಾತನಾಡಿ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಇಂದು ದಿಕ್ಕೆಟ್ಟು ಹೋಗಿದೆ. ಜವಾಹರಲಾಲ್‌ ಕಾಲದಲ್ಲಿ 83 ಸ್ಥಾನ ಇದ್ದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಒಂದು ಸ್ಥಾನವನ್ನು ಗೆದ್ದಿಲ್ಲ ಎಂದು ವ್ಯಂಗ್ಯವಾಡಿದರು. ರಾಹುಲ್‌ ಗಾಂಧಿ ಕೇರಳಕ್ಕೆ ಹೋದರು. ಈ ಮೂಲಕ ಕಾಂಗ್ರೆಸ್‌ ನಾಯಕತ್ವ ಇಲ್ಲದೆ ದಿವಾಳಿಯಾಗಿದೆ. ಜನ ಬೆಂಬಲವಿಲ್ಲದೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ತಿರಸ್ಕಾರಗೊಂಡಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಒಂದು ಕ್ಷೇತ್ರದಲ್ಲಿ ನಿಲ್ಲಲು ಧೈರ್ಯವಿಲ್ಲದೆ ಎರಡೆರಡು ಕ್ಷೇತ್ರಕ್ಕೆ ಗಾಳ ಹಾಕಿದ್ದಾರೆ. ಸಿದ್ದರಾಮಯ್ಯ ಊರೂರು ಅಲೆದು ಕೊನೆಗೆ ವರುಣಾಕ್ಕೆ ಬಂದಿದ್ದಾರೆ ಎಂದರು. ನಂಜನಗೂಡು ನಂಜುಂಡೇಶ್ವರ ದೇವಸ್ಥಾನದಲ್ಲಿ 140 ಕೋಟಿ ಹಣವಿದೆ. ಅದು ಭಕ್ತರ ಹಣ. ನಾನೇ ಸಮುದಾಯ ಭವನಕ್ಕೆ ಹಣ ಕೊಡಿ ಎಂದು ಸಿಎಂಗೆ ಹೇಳಿದ್ದೆ. ಇದಕ್ಕೆ ಹಲವರು ಟೀಕೆ ಮಾಡಿದ್ದರು. ಯಾವುದಕ್ಕೂ ತಲೆ ಕಡೆಸಿಕೊಳ್ಳುವುದಿಲ್ಲ ಎಂದರು. ಅಂಬೇಡ್ಕರ್‌ ನಮ್ಮ ಜೀವನದ ಸರ್ವಸ್ವ. ಅಂಬೇಡ್ಕರ್‌ ಬರೆದ ಸಂವಿಧಾನ ಬದಲಿಸಲು ಸಾಧ್ಯವೇ. ಸಂವಿಧಾನವೇನು ಮಗ್ಗಿ ಪುಸ್ತಕನಾ? ಆದ್ದರಿಂದ ಸುಳ್ಳು ಹೇಳಿಕೆಗೆ ಕಿವಿಗೊಡಬೇಡಿ ಎಂದು ಕಿವಿಮಾತು ಹೇಳಿದರು.

Chamarajanagar: ಕಾಂಗ್ರೆಸ್‌ಗೆ ಸ್ಟಾರ್‌ಗಳ ಅನಿವಾರ್ಯತೆ ಇಲ್ಲ: ಎಸ್‌.ನಾರಾಯಣ್‌

ಬಿಜೆಪಿ ಅಭ್ಯರ್ಥಿ ಸಿ.ಎಸ್‌. ನಿರಂಜನಕುಮಾರ್‌ ಮಾತನಾಡಿ, ಬಿಜೆಪಿಯಲ್ಲಿ ದಲಿತರ ಸಂಖ್ಯೆ ಕಡಿಮೆ ಎನ್ನುತ್ತಿದ್ದರು. ಆದರೆ, ಕಾಲ ಬದಲಾಗಿದ್ದು, ಈಗ ದಲಿತರೇ ಹೆಚ್ಚಾಗಿದ್ದಾರೆ. ಬಿಜೆಪಿ ಹಾಗೂ ಮೋದಿಯಿಂದ ಪರಿಶಿಷ್ಠರಿಗೆ ನ್ಯಾಯ ಸಿಕ್ಕಿದೆ ಎಂದರು. ಅಂಬೇಡ್ಕರ್‌ಗೆ ಕಾಂಗ್ರೆಸ್‌ ಗೌರವ ಕೊಡಲಿಲ್ಲ. ಎಸ್ಸಿ, ಎಸ್ಟಿಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಕಾಲಾಹರಣ ಮಾಡಿದರು. ಆದರೆ, ಬಿಜೆಪಿ ಮೀಸಲಾತಿ ಹೆಚ್ಚಳ ಮಾಡಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕಾರಣವಾಗಿದೆ. ಬಿಜೆಪಿ ದಲಿತರ ಪರವಾಗಿದೆ ಎಂದರು. ಕಾಂಗ್ರೆಸ್‌ 25 ವರ್ಷ ಅಧಿಕಾರ ನಡೆಸಿದರೂ ಮೂಲಭೂತ ಸೌಕರ್ಯ ನೀಡಲಿಲ್ಲ. ಕೇವಲ ಓಟಿಗಾಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದರು. 

ಆದರೆ, ಐದು ವರ್ಷದ ಅವಧಿಯಲ್ಲಿ ಕೋಟಿಗಟ್ಟಲೆ ಅನುದಾನ ತಂದು ಸಿಸಿ ರಸ್ತೆ ಹಾಗೂ ಚರಂಡಿ ಮಾಡಲಾಗಿದೆ. ಅನೇಕ ರೈತರಿಗೆ ಸಾಗುವಳಿ ಪತ್ರ ಕೊಟ್ಟಿದ್ದೇವೆ ಎಂದರು. ಕೆಲಸ ಮಾಡುವ ವಿಚಾರದಲ್ಲಿ ಜನ ಸಾಮಾನ್ಯರ ಪರ ಇದ್ದೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು, ಬಾಯಿ ಮಾತಿನಲ್ಲಿ ಮಾತ್ರ ಅಭಿವೃದ್ಧಿ ಮಾಡುತ್ತಿದ್ದರು. ಮತ್ತಷ್ಟುಜನಪರ ಕೆಲಸ ಮಾಡಲು ಎರಡನೇ ಬಾರಿ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ, ಎಸ್ಸಿ ಮೋರ್ಚಾ ಅಧ್ಯಕ್ಷ ಹೊರೆಯಾಲ ಕೃಷ್ಣ , ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪರಮಾನಂದ ಮಾತನಾಡಿದರು.

ಇದು ನನ್ನ ರಾಜಕೀಯದ ಕೊನೆ ಚುನಾವಣೆ ಪ್ರಚಾರ: ಇದು ನನ್ನ ರಾಜಕೀಯದ ಕೊನೆ ಚುನಾವಣೆ ಪ್ರಚಾರ. ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸಂಸದ ವಿ. ಶ್ರೀನಿವಾಸ್‌ಪ್ರಸಾದ್‌ ಹೇಳಿದ್ದಾರೆ. ಸಭೆಯಲ್ಲಿ ಮಾತನಾಡಿ, ನನ್ನ ಕೈಯಲ್ಲಿ ನಿಂತುಕೊಂಡು ಭಾಷಣ ಮಾಡಲು ಆಗುತ್ತಿಲ್ಲ. 16 ಬಾರಿ ಚುನಾವಣೆ ಎದುರಿಸಿರುವ ನನ್ನ ಜೀವನ ಸಾರ್ಥಕವಾಯಿತು. ಎಳ್ಳಷ್ಟು ಅಪಾದನೆ ಇಲ್ಲದೆ, ಜನರು ಮೆಚ್ಚುವಂತೆ ಕೆಲಸ ಮಾಡಿದ್ದೇನೆ ಎಂದರು. ಮುಖಂಡರ ಒತ್ತಾಯದ ಮೇರೆಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ನಿಲ್ಲಿಸಿದ್ದರು. 

ಮಹದೇಶ್ವರನ ಆಶೀರ್ವಾದದಿಂದ ಚಾಮರಾಜನಗರ ಮಾದರಿ ಜಿಲ್ಲೆಯಾಗಿಸುವಾಸೆ: ಸಚಿವ ಸೋಮಣ್ಣ

ನನ್ನ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ 2.75 ಲಕ್ಷ ಮತ ಅಂತರ ಇತ್ತು. ಆದರೆ, 1800 ಲೀಡ್‌ನಲ್ಲಿ ಗೆಲ್ಲಿಸಿದರು. ಕ್ಷೇತ್ರದಲ್ಲಿ ನಾನು ಮೊಟ್ಟಮೊದಲ ಬಾರಿಗೆ ಬಾವುಟ ಹಾರಿಸಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.