ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಗೊತ್ತಿದೆ. ಈ ಬಾರಿ ಸಹ ಎಚ್‌ಡಿಕೆ ಸಿಎಂ ಕ್ಯಾಂಡಿಡೇಟ್‌ ಎಂಬ ಅರಿವು ಜನರಿಗಿದ್ದು, ಅವರಿಗೆ ಮತ್ತೊಂದು ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು. 

ಚನ್ನಪಟ್ಟಣ (ಏ.26): ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಗೊತ್ತಿದೆ. ಈ ಬಾರಿ ಸಹ ಎಚ್‌ಡಿಕೆ ಸಿಎಂ ಕ್ಯಾಂಡಿಡೇಟ್‌ ಎಂಬ ಅರಿವು ಜನರಿಗಿದ್ದು, ಅವರಿಗೆ ಮತ್ತೊಂದು ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಶ್ರೀ ಕೆಂಗಲ್‌ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪರ ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಚನ್ನಪಟ್ಟಣ ನನ್ನ ಹಳೆಯ ಕ್ಷೇತ್ರ, ಕ್ಷೇತ್ರದ ಜನರ ಜೊತೆಗೆ ಒಡನಾಟವಿದೆ. ಹಾಗಾಗಿ ನಾನು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಈ ವೇಳೆ ಕ್ಷೇತ್ರದ ಜನ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಅವರು ಕುಮಾರಸ್ವಾಮಿ ಅವರನ್ನು ಅರ್ಥ ಮಾಡಿಕೊಂಡಿದ್ದಾರೆ. ಅಲ್ಲದೇ ಜನ ಕೂಡಾ ಬುದ್ಧಿವಂತರಿದ್ದಾರೆ. ಕುಮಾರಸ್ವಾಮಿ ಸಿಎಂ ಕ್ಯಾಂಡೇಟ್‌ ಹಾಗಾಗಿ ಅವರು ಗೆದ್ದರೆ ಕ್ಷೇತ್ರಕ್ಕೆ ಅನ್ಲಿಮಿಟೆಡ್‌ ಅನುದಾನ ಸಿಗುತ್ತೆ ಎಂದು ಗೊತ್ತಿದೆ. ಹಾಗಾಗಿ ಅವರನ್ನು ಮತ್ತೊಮ್ಮೆ ಚುನಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆ ಸಹೋ​ದ​ರ​ರಿಗೆ ಅಭ​ದ್ರತೆ ಕಾಡು​ತ್ತಿದೆ: ಸಚಿವ ಅ​ಶೋಕ್‌

ಮಕ್ಕಳ ರೀತಿ ಹಠ ಮಾಡುತ್ತಾರೆ: ಮಾಜಿ ಸಿಎಂ ಎಚ್‌ಡಿಕೆ ಆರೋಗ್ಯ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ರಾಜ್ಯದ ಹಲವೆಡೆ ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಸ್ವಲ್ಪ ಆಯಾಸ ಆಗಿತ್ತು. ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರು ಹೆಚ್ಚಿಗೆ ನೀರು ಕುಡಿಯೊಲ್ಲ. ಊಟದ ವಿಚಾರದಲ್ಲಿ ಮಕ್ಕಳ ರೀತಿ ಹಠ ಮಾಡುತ್ತಾರೆ. ಬರೀ ಮೊಸರನ್ನ ತಿನುತ್ತಾರೆ. ಸರಿಯಾಗಿ ಊಟ ಮಾಡಲ್ಲ. ಹಾಗಾಗಿ ಅನಾರೋಗ್ಯಗೊಂಡಿದ್ದರು, ಈಗ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಚನ್ನಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ವಿಚಾರಕ್ಕೆ ಪ್ರತಿಕ್ರಿಯಿಸಿ, ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಬರ್ತಿರೋದಕ್ಕೆ ಸ್ವಾಗತ ಇದೆ. ಅವರು ದೇಶದ ಪ್ರಧಾನಿ, ಅವರ ಮೇಲೆ ಗೌರವ ಇದೆ. 

ಅವರ ಬಂದು ಪ್ರಚಾರ ಮಾಡಿದರೂ ಜನತೆಗೆ ಎಲ್ಲಾ ಗೊತ್ತಿದೆ. ಅವರು ಯಾರನ್ನ ಆಯ್ಕೆ ಮಾಡಬೇಕೆಂಬುದನ್ನ ಅರ್ಥ ಮಾಡಿಕೊಂಡಿದ್ದಾರೆ ಎಂದರು. ಅನಿತಾ ಕುಮಾರಸ್ವಾಮಿ ತಮ್ಮ ಪತಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪರ ಹೊಂಗನೂರು ಜಿಲ್ಲಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಕೆಂಗಲ್‌, ಕರಿಕಲ್‌ ದೊಡ್ಡಿ, ಚಂದ್ರಗಿರಿದೊಡ್ಡಿ, ಹನುಮಂತಪುರ, ನೀಲಸಂದ್ರ, ತಿಮ್ಮಸಂದ್ರ ಮುಂತಾದ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಮುಖಂಡರಾದ ಪ್ರಸನ್ನ ಪಿ.ಗೌಡ, ಗೋವಿಂದಹಳ್ಳಿ ನಾಗರಾಜು ಮುಂತಾದವರು ಇದ್ದರು.

ಕಮಲ ಬಿಟ್ಟು ತೆನೆ ಹೊತ್ತ ಗೋವಿಂದರಾಜು!: ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಮುಖಂಡ ಗೋವಿಂದರಾಜು ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಳ್ಳುವುದಾಗಿ ಘೋಷಿಸಿದರು. ತಾಲೂಕಿನ ಸಾತನೂರು ರಸ್ತೆಯಲ್ಲಿರುವ ಕರಣ್‌ಗೌಡ ಫಾಮ್‌ರ್‍ನಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಸಮ್ಮುಖದಲ್ಲಿ ಗೋವಿಂದರಾಜು ಜೆಡಿಎಸ್‌ ಸೇರ್ಪಡೆಗೊಳ್ಳುವುದಾಗಿ ಘೋಷಿಸಿದ್ದು, ರಾಮನಗರ-ಚನ್ನಪಟ್ಟಣ ಎರಡು ಕ್ಷೇತ್ರದಲ್ಲಿ ಜೆಡಿಎಸ್‌ ಪರ ದುಡಿಯುವುದಾಗಿ ತಿಳಿಸಿದರು. 

ಏ.30ಕ್ಕೆ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಪ್ರಚಾರ: 2 ಲಕ್ಷ ಜನ ಭಾಗಿ

ಯೋಗೇಶ್ವರ್‌ ಆಪ್ತರೆಂದು ಗುರುತಿಸಿಕೊಂಡಿದ್ದ ಗೋವಿಂದರಾಜು ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಅಲ್ಲಿ ಬಿಜೆಪಿ ಸಂಘಟನೆಯಲ್ಲಿ ಸಾಕಷ್ಟುಸಕ್ರೀಯರಾಗಿದ್ದರು. ಆದರೆ ಇದೀಗ ಏಕಾಏಕಿ ಕಮಲ ಬಿಟ್ಟು ತೆನೆ ಹೊತ್ತಿದ್ದಾರೆ. ರಾಮನಗರದಲ್ಲಿ ಸಮಾವೇಶ ಆಯೋಜಿಸಿ ಅಲ್ಲಿ ಅವರು ಜೆಡಿಎಸ್‌ ಸೇರ್ಪಡೆಗೊಳ್ಳುವ ಚಿಂತನೆಯಲ್ಲಿದ್ದು, ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಘೋಷಿಸಿದ ಗೋವಿಂದರಾಜು ಅವರಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಸಾಂಕೇತಿಕವಾಗಿ ಜೆಡಿಎಸ್‌ ಶಾಲು ಹೊದಿಸಿ ಬರಮಾಡಿಕೊಂಡರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.