ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಸಮುದಾಯಕ್ಕೆ ಒಂದು ಟಿಕೆಟ್‌ ಕೊಡದ ಬಿಜೆಪಿ ಪ್ರಜಾಪ್ರಭುತ್ವ ಕಾಣಲು ಹೇಗೆ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. 

ಮಳವಳ್ಳಿ (ಮೇ.05): ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಸಮುದಾಯಕ್ಕೆ ಒಂದು ಟಿಕೆಟ್‌ ಕೊಡದ ಬಿಜೆಪಿ ಪ್ರಜಾಪ್ರಭುತ್ವ ಕಾಣಲು ಹೇಗೆ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ ಬಿಜೆಪಿ ಸರ್ಕಾರ ಕೊಟ್ಟಿದ್ದ 600 ಭರವಸೆಗಳಲ್ಲಿ ಕೇವಲ 55 ಭರವಸೆ ಮಾತ್ರ ಈಡೇರಿದೆ. ಈ ಮೂಲಕ ವಚನ ಭ್ರಷ್ಟಪಕ್ಷವಾಗಿ ಜನತೆಗೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ಅಧಿಕಾರದ ಅವಧಿಯಲ್ಲಿ ಸುಭದ್ರ ಸರ್ಕಾರ ಕೊಟ್ಟಿದ್ದೇನೆ. 2013ರಲ್ಲಿ ಕೊಟ್ಟಿದ್ದ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೇವೆ. 38 ಹೊಸ ಕಾರ್ಯಕ್ರಮ ಕೊಟ್ಟಿದ್ದೇವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನವೇ ಘೋಷಣೆ ಮಾಡಿರುವ ಗ್ಯಾರಂಟಿಗಳನ್ನು ಜಾರಿ ಮಾಡಲಿದೆ ಎಂದರು. ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ದಿನದಿಂದ ಹಿಡಿದು ಇಲ್ಲಿಯವರೆಗೂ ಪತ್ರಕರ್ತರನ್ನು ಕೂರಿಸಿ ಪತ್ರಿಕಾಗೋಷ್ಠಿ ಮಾಡಿಲ್ಲ. ಜನರನ್ನು ನಂಬಿಸಲು ನಾಟಕವಾಡುತ್ತಿದ್ದಾರೆ. ಚುನಾವಣೆ ಬರುತ್ತಿದ್ದಂತೆ ಕರ್ನಾಟಕದ್ಯಾಂತ ರೋಡ್‌ ಶೋ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಸಿಎಂ ಗಾದಿ ಅವಕಾಶವಿದೆ, ಬೆಂಬಲಿಸಿ: ಮತ್ತೊಮ್ಮೆ ಮನದಿಂಗಿತ ಬಿಚ್ಚಿಟ್ಟ ಸಿದ್ದರಾಮಯ್ಯ

ಪ್ರಧಾನಿ ಮೋದಿ ಕಾಂಗ್ರೆಸ್‌ ಕೊಟ್ಟಿರುವ ಗ್ಯಾರಂಟಿ ಈಡೇರಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಬಡವರ ಪರ ನಿಲ್ಲುವ ಕಾಂಗ್ರೆಸ್‌ ನುಡಿದಂತೆ ನಡೆಯುವ ಪಕ್ಷವಾಗಿದೆ. ಪಕ್ಷ ಅಧಿಕಾರಕ್ಕೆ ಬರಲು ಮಳವಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಅವರು ಸುಭದ್ರ ಸರ್ಕಾರ ಕೊಡಕು ಸಾಧ್ಯವಾಗಿಲ್ಲ. ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಬಿಜೆಪಿ ಭ್ರಷ್ಟಸರ್ಕಾರ ಎಂದಿಗೂ ನೋಡಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಉತ್ತಮ ಆಡಳಿತವನ್ನು ಕಂಡಿಲ್ಲ ಎಂದರು.

ನಾರಾಯಣಗೌಡ ಗೆದ್ದು ಮಂತ್ರಿಯಾಗುವುದು ಖಚಿತ: ಯಡಿಯೂರಪ್ಪ ಭವಿಷ್ಯ

ಚಲುವರಾಯಸ್ವಾಮಿ ಮತ್ತು ನಾವೀದ್ದಾಗ ಜೆಡಿಎಸ್‌ ಪಕ್ಷ 59 ಸ್ಥಾನ ಗೆಲ್ಲಲಾಗಿತ್ತು. ನಂತರ ಚುನಾವಣೆಗಳಲ್ಲಿ ಜೆಡಿಎಸ್‌ ಸ್ಥಾನ ಗಳಿಕೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಜೆಡಿಎಸ್‌ ಅಧಿಕಾರಕ್ಕೆ ಬರೋಲ್ಲ. ರಾಜ್ಯದಲ್ಲಿ ಅತಂತ್ರವಾಗಿಸದೇ ಬಿಜೆಪಿ ದೂರವಿಟ್ಟು ಕಾಂಗ್ರೆಸ್‌ ಅಭ್ಯರ್ಥಿಯನ್ನು 25 ಸಾವಿರಕ್ಕೂ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲಿಸಬೇಕೆಂದು ಕೋರಿದರು. ಸಭೆಯಲ್ಲಿ ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ, ಬಿ.ಸೋಮಶೇಖರ್‌, ಮುಖಂಡ ಡಾ.ಮೂರ್ತಿ, ಕುರುಬರ ಸಂಘದ ಅಧ್ಯಕ್ಷ ಸುರೇಶ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರದ ಶಿವಣ್ಣ, ದೊಡ್ಡಯ್ಯ, ಸಿದ್ದೇಗೌಡ, ಪರಶಿವಮೂರ್ತಿ, ಶಿವಕುಮಾರ್‌, ಚೌಡಶೆಟ್ಟಿ, ವಿಶ್ವಾಸ್‌, ವಿ.ಪಿ.ನಾಗೇಶ್‌, ಸಿ ಮಾಧು, ಜಗದೀಶ್‌ ಸೇರಿದಂತೆ ಇತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.