ಮೀಸಲಾತಿ ಹೆಚ್ಚಳ ಸಮರ್ಥಿಸಿಕೊಳ್ಳುವಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಟೀಕಿಸಿದರು. 

ಮೈಸೂರು (ಏ.27): ಮೀಸಲಾತಿ ಹೆಚ್ಚಳ ಸಮರ್ಥಿಸಿಕೊಳ್ಳುವಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಟೀಕಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಲಿಂಗಾಯತ, ಒಕ್ಕಲಿಗ, ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತ ಸಮುದಾಯಕ್ಕೆ ದ್ರೋಹ ಬಗೆಯುವ ಜೊತೆಗೆ ಅಪಮಾನ ಮಾಡಿದೆ. ಚುನಾವಣೆ ವೇಳೆ ಸರ್ಕಾರ ಆತುರವಾಗಿ ಕೈಗೊಂಡ ನಿರ್ಧಾರದಿಂದಾಗಿ ಗೊಂದಲ ಮತ್ತು ಸಾಕಷ್ಟುಸಮಸ್ಯೆ ನಿರ್ಮಾಣವಾಗಿದೆ ಎಂದು ದೂರಿದರು.

2002 ರಲ್ಲಿ ಜಾರಿಯಲ್ಲಿದ್ದ ಮೀಸಲಾತಿಯನ್ನು ಮರು ಜಾರಿಗೊಳಿಸುವುದಾಗಿ ಸುಪ್ರಿಂ ಕೋರ್ಟ್‌ನಲ್ಲಿ ತಿಳಿಸಲಾಗಿದೆ. ಆ ಮೂಲಕ ಒಕ್ಕಲಿಗರು ಹಾಗೂ ಲಿಂಗಾಯತರು 3 ವರ್ಗೀಕರಣದಲ್ಲಿ ಮುಂದುವರೆಯುವರು. ಸರ್ಕಾರ ಆದೇಶದಂತೆ ಹೆಚ್ಚುವರಿ ಶೇ. 2 ಮೀಸಲಾತಿ ಸಿಗುವುದಿಲ್ಲ. ಬೊಮ್ಮಾಯಿ ಸರ್ಕಾರ ಏ. 25, 2023ರಂದು ಸುಪ್ರೀಂ ಕೋರ್ಟ್‌ ನಲ್ಲಿ ಸಾಲಿಸಿಟರ್‌ ಜನರಲ್‌ ಮೂಲಕ, ಮಾಚ್‌ರ್‍ 27, 2023ರಂದು ತಾನು ಹೊರಡಿಸಿದ್ದ ಮೀಸಲಾತಿ ಹೆಚ್ಚಳ ಆದೇಶಕ್ಕೆ ತಾನೇ ತಡೆ ಹಿಡಿದಿದ್ದು, ಕ್ಷಮಿಸಲಾರದ ಪಾಪ ಎಸಗಿದೆ ಎಂದು ಅವರು ಕಿಡಿಕಾರಿದರು.

40 ಪರ್ಸೆಂಟ್‌ ಸರ್ಕಾರ ಕಿತ್ತೊಗೆದು ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ: ಪ್ರಿಯಾಂಕಾ ಗಾಂಧಿ

ಮೀಸಲಾತಿ ಹೆಚ್ಚಳ ವಿಚಾರ ಕಾನೂನು ಕಟಕಟೆಯಲ್ಲಿ ನಿಂತು ಯಾರಿಗೂ ಮೀಸಲಾತಿ ಸಿಗಬಾರದು, ಮೀಸಲಾತಿ ಹೆಸರಿನಲ್ಲಿ ಮತ ಬ್ಯಾಂಕ್‌ ರಾಜಕಾರಣ ಮಾಡುವ ಷಡ್ಯಂತ್ರ ರೂಪಿಸಿತ್ತು. ಈ ಷಡ್ಯಂತ್ರ ಸುಪ್ರೀಂ ಕೋರ್ಟ್‌ನಲ್ಲಿ ಬಯಲಾಗಿದೆ. ಇದರ ಪರಿಣಾಮ ಲಿಂಗಾಯತ ಮೀಸಲಾತಿ ವರ್ಗೀಕರಣ 2 ರಿಂದ 3ಕ್ಕೆ ಮರಳಿದೆ. ಲಿಂಗಾಯತರಿಗೆ ನೀಡಿದ್ದ ಶೇ. 2 ಹೆಚ್ಚುವರಿ ಮೀಸಲಾತಿ ಹಿಂಪಡೆದಂತಾಗಿದೆ ಎಂದು ಅವರು ದೂರಿದರು. ಒಕ್ಕಲಿಗರ ಮೀಸಲಾತಿ ವರ್ಗೀಕರಣ 2ಯಿಂದ 3ಗೆ ಮರಳಿದೆ. ಒಕ್ಕಲಿಗರಿಗೆ ನೀಡಿದ್ದ ಶೇ. 2 ಹೆಚ್ಚುವರಿ ಮೀಸಲಾತಿ ಹಿಂದಕ್ಕೆ ಪಡೆಯಲಾಗಿದೆ. ಪ.ಜಾತಿ ಮತ್ತು ಪ.ಪಂಗಡದ ಸಮುದಾಯಗಳ ಮೀಸಲಾತಿ ಹೆಚ್ಚಳವನ್ನು ಕೇಂದ್ರ ಸರ್ಕಾರ ಮಾ. 14ರಂದು ಸಂಸತ್ತಿನಲ್ಲಿ ನಿರಾಕರಿಸಿದೆ. ಇದೆಲ್ಲದರ ಫಲ ಯಾರಿಗೂ ಯಾವುದೇ ಮೀಸಲಾತಿ ಸಿಗದೆ ಎಲ್ಲರನ್ನೂ ವಂಚಿಸಲಾಗಿದೆ ಎಂದರು.

ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ: ಎಚ್‌.ಡಿ.ಕುಮಾರಸ್ವಾಮಿ

ಈ ಎಲ್ಲಾ ಸಮುದಾಯಕ್ಕೆ ಆಗಿರುವ ಮೋಸದ ಬಗ್ಗೆ ಪ್ರಧಾನಿಗಳು ಸಾರ್ವಜನಿಕವಾಗಿ ಕ್ಷಮೆ ಕೇಳುವರೆ? ಇಷ್ಟೆಲ್ಲಾ ದ್ರೋಹ ಬಗೆದಿರುವ ಬಿಜೆಪಿಗೆ ರಾಜ್ಯದ ಮತದಾರರು 40ಕ್ಕಿಂತ ಹೆಚ್ಚಿನ ಸೀಟು ನೀಡುವುದಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಮಾಧ್ಯಮ ಸಂಚಾಲಕ ದಿನೇಶ್‌ ಗೂಳಿಗೌಡ, ವಕ್ತಾರ ಎಂ. ಎಂ. ಲಕ್ಷ್ಮಣ್‌, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ ಇದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.