ಚುನಾವಣೆ ಕಾವು ಏರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಕೆಸರೆರೆಚಾಟವೂ ಜೋರಾಗಿ ನಡೆಯುತ್ತಿದೆ. ಆದರೆ ಈ ಚುನಾವಣಾ ಸಮಯದಲ್ಲಿ ಕೂಲಿ ಕಾರ್ಮಿಕರ ಅಭಾವ ಹಳ್ಳಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ಕಾರಣ ಚುನಾವಣಾ ಪ್ರಚಾರಕ್ಕಾಗಿ ಹಳ್ಳಿಗಳಲ್ಲಿ ಕೂಲಿ ಕೆಲಸಗಾರರನ್ನು ಪಕ್ಷಗಳು ಟಾರ್ಗೆಟ್‌ ಮಾಡಿದ್ದು, ಅವರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಂ ಅಜೆಕಾರು

Add Asianetnews Kannada as a Preferred SourcegooglePreferred

ಕಾರ್ಕಳ (ಮೇ.5) : ಚುನಾವಣೆ ಕಾವು ಏರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಕೆಸರೆರೆಚಾಟವೂ ಜೋರಾಗಿ ನಡೆಯುತ್ತಿದೆ. ಆದರೆ ಈ ಚುನಾವಣಾ ಸಮಯದಲ್ಲಿ ಕೂಲಿ ಕಾರ್ಮಿಕರ ಅಭಾವ ಹಳ್ಳಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ಕಾರಣ ಚುನಾವಣಾ ಪ್ರಚಾರಕ್ಕಾಗಿ ಹಳ್ಳಿಗಳಲ್ಲಿ ಕೂಲಿ ಕೆಲಸಗಾರರನ್ನು ಪಕ್ಷಗಳು ಟಾರ್ಗೆಟ್‌ ಮಾಡಿದ್ದು, ಅವರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೂತ್‌ ಮಟ್ಟದಲ್ಲಿ ಪ್ರಚಾರಕ್ಕಾಗಿ ದಿನವೊಂದಕ್ಕೆ ರಾಜಕೀಯ ಪಕ್ಷಗಳು ಉಚಿತ ಊಟ, ತಿಂಡಿಯೊಂದಿಗೆ ತಲಾ 700ರಿಂದ 1 ಸಾವಿರ ರುಪಾಯಿ ವರೆಗೆ ನೀಡುತ್ತಿರುವುದರಿಂದ ಕೂಲಿ ಕಾರ್ಮಿಕರು ಕೂಲಿಗೆ ಬಾಯ್‌ ಹೇಳಿ ಚುನಾವಣೆ ಪ್ರಚಾರಕ್ಕೆ ಜೈ ಎನ್ನುತ್ತಿದ್ದಾರೆ.

ಇನ್ನೂ ಈಡೇರದ ಭರವಸೆ, ಬಿಸರಳ್ಳಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ!

ಪ್ರಚಾರದ ಭರಾಟೆ ಜೋರು: ಮತದಾನಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇರುವುದರಿಂದ ಎಲ್ಲ ಪಕ್ಷಗಳಲ್ಲೂ ಚುನಾವಣೆ ಪ್ರಚಾರ ಕಾರ್ಯ ಜೋರಾಗಿದೆ. ಕೆಲವು ಕೂಲಿ ಕಾರ್ಮಿಕರು ಹೆಚ್ಚು ಹಣ ನೀಡುವಂತೆ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ದುಂಬಾು ಬಿದ್ದಿದ್ದಾರೆ. ಕೆಲವರಂತು ಇಂದು ಒಂದು ಪಕ್ಷದ ಪರ ಪ್ರಚಾರ ಮಾಡಿದರೆ, ನಾಳೆ ಇನ್ನೊಂದು ಪಕ್ಷದ ಪರ ಪ್ರಚಾರ ಮಾಡುತ್ತಿರುತ್ತಾರೆ. ಇದಕ್ಕೆ ಕಾರಣ ಯಾರು ಹೆಚ್ಚು ದುಡ್ಡು ಕೊಡುತ್ತಾರೋ ಅವರ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಭೆಗಳಲ್ಲಿ ಜೈಕಾರ ಹಾಕಲು ಹಳ್ಳಿಯ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಪ್ರಚಾರ ಕಾರ್ಯದಲ್ಲಿ ಕೂಡ ಅವರೇ ಭಾಗಿಯಾಗುತ್ತಿದ್ದಾರೆ. ಶ್ರಮದ ಅಗತ್ಯವಿಲ್ಲ. ಹಣದ ಜೊತೆ ಚಾ ತಿಂಡಿ ಬಾಡೂಟ ಎಣ್ಣೆ ಎಲ್ಲವೂ ಫ್ರೀ ಸಿಗುವುದರಿಂದ ಶ್ರಮವಹಿಸಿ ದುಡಿಯುವುದಕ್ಕಿಂತ ಯಾವ ಪಕ್ಷ ಹೆಚ್ಚು ದುಡ್ಡು ಕೊಡುವುದೋ ಅದಕ್ಕೆ ಸೈ ಎನ್ನೋಣ ಎನ್ನುತ್ತಿದ್ದಾರೆ ಕಾರ್ಮಿಕರು.

ರಸ್ತೆಗಾಗಿ ಚುನಾವಣೆ ಬಹಿಷ್ಕರಿಸಲು ನಿರ್ಧಾರ, ಅಭ್ಯರ್ಥಿಗಳಿಗೆ ಹೊಡೆತ!

ಕೆಲಸಕ್ಕಾಗಿ ಬರುವ ಕೂಲಿ ಕಾರ್ಮಿಕರು ಲಭ್ಯವಿಲ್ಲದೆ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರನ್ನು ನೇಮಿಸಬೆಕಾದ ಅನಿವಾರ್ಯತೆ ಎದುರಾಗಿದೆ. ಈ ಚುನಾವಣಾ ಪ್ರಚಾರಕ್ಕಾಗಿ ಪಕ್ಷಗಳು ಮುಗ್ಧ ಹಳ್ಳಿಗರನ್ನು ಬಲಿಪಶು ಮಾಡುತ್ತಿದ್ದಾರೆ

- ರಾಜೇಶ್‌ ಶಿರ್ಲಾಲು

ಕೂಲಿ ಕಾರ್ಮಿಕರನ್ನು ಹಣದ ಆಮಿಷ ತೋರಿಸುತ್ತಿರುವುದು ನಮ್ಮ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ನಡೆಯುತ್ತಿರುವುದು ದುರಂತ. ಬೇರೆ ಜಿಲ್ಲೆಗಳಲ್ಲಿ ಇಂತಹ ಆಮಿಷಗಳು ನಡೆಯುತ್ತಿರುವುದನ್ನು ಕೇಳುತ್ತಿದ್ದೆವು. ಈಗ ನಮ್ಮ ಜಿಲ್ಲೆಯಲ್ಲೇ ನಡೆಯುತ್ತಿರುವುದು ನಿಜಕ್ಕೂ ಪ್ರಜ್ಞಾವಂತರು ತಲೆತಗ್ಗಿಸಬೇಕಾದ ವಿಚಾರ

- ಶಿವಾನಂದ ಪೂಜಾರಿ ಕಾರ್ಕಳ ನಾಗರಿಕರು