Asianet Suvarna News Asianet Suvarna News

ಬೀದ​ರ್‌ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿರುವ ಓಲ್ಡ್‌ ಸಿಟಿ ಮತದಾರರು

ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ ಮಳೆ, ಗಾಳಿ, ಬಿಸಿ​ಲೆ​ನ್ನ​ದೆ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ಬ್ಯುಸಿಯಾಗಿದ್ದರೆ ಕ್ಷೇತ್ರದ ಮೂಲೆ ಮೂಲೆಗಳಲ್ಲಿ ಗೆಲ್ಲುವ, ಸೋಲುವ ಕುದರೆಗಿಂತ ಸೋಲಿಸುವವರ, ಜಾತಿ, ಮತ ಪಂಥಗಳ ಮತದಾರರ ಸವಾರಿಯದ್ದೇ ಜೋರ್ದಾರ್‌ ಚರ್ಚೆ.

Karnataka Election 2023 Bidar candidates will be decided by the voters of Old City gvd
Author
First Published May 5, 2023, 9:22 AM IST

ಅಪ್ಪಾರಾವ್‌ ಸೌದಿ

ಬೀದರ್‌ (ಮೇ.05): ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ ಮಳೆ, ಗಾಳಿ, ಬಿಸಿ​ಲೆ​ನ್ನ​ದೆ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ಬ್ಯುಸಿಯಾಗಿದ್ದರೆ ಕ್ಷೇತ್ರದ ಮೂಲೆ ಮೂಲೆಗಳಲ್ಲಿ ಗೆಲ್ಲುವ, ಸೋಲುವ ಕುದರೆಗಿಂತ ಸೋಲಿಸುವವರ, ಜಾತಿ, ಮತ ಪಂಥಗಳ ಮತದಾರರ ಸವಾರಿಯದ್ದೇ ಜೋರ್ದಾರ್‌ ಚರ್ಚೆ. ಅಷ್ಟಕ್ಕೂ ಮುಸ್ಲಿಂ ಬಾಹು​ಳ್ಯದ ಓಲ್ಡ್‌​ಸಿ​ಟಿ ಮತ​ದಾನದ ಪ್ರಮಾಣವು ಬೀದರ್‌ ಕ್ಷೇತ್ರ​ದ ಫಲಿ​ತಾಂಶ ನಿರ್ಣ​ಯಿ​ಸ​ಬ​ಲ್ಲದು ಎಂಬುದು ಈ ಚುನಾ​ವ​ಣೆಯ ಪ್ರಮುಖ ಚರ್ಚಾ ವಸ್ತು.

ಬೀದರ್‌ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡಾದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಲಿ ಶಾಸಕ ರಹೀಮ್‌ ಖಾನ್‌, ಕೊನೇ ಕ್ಷಣ​ದಲ್ಲಿ ಬಿಜೆಪಿ ಟಿಕೆಟ್‌ ವಂಚಿ​ತ​ರಾಗಿ ಜಾತ್ಯತೀತ ಜನತಾದಳದಿಂದ ಅಭ್ಯರ್ಥಿಯಾಗಿರುವ ಮಾಜಿ ಸಚಿವ ದಿ.ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಹಾಗೂ ಬಿಜೆಪಿಯಿಂದ ಹಿಂದೂ ಸಂಘ​ಟನಾ ಚತು​ರ ಈಶ್ವರಸಿಂಗ್‌ ಠಾಕೂರ್‌ ವಿಧಾನಸೌಧ ಪ್ರವೇಶಿಸಲು ಹವಣಿಸುತ್ತಿದ್ದಾರೆ. ಆಮ್‌ ಆದ್ಮಿ ಪಾರ್ಟಿಯಿಂದ ಸೈಯದ್‌ ಗುಲಾಂ ಅಲಿ, ರಿಪಬ್ಲಿಕನ್‌ ಪಾರ್ಟಿಯಿಂದ ಮಹೇಶ್‌ ಗೋರ್ನಾಳಕರ್‌, ಬಿಎಸ್ಪಿಯಿಂದ ಅನಿಲ್‌ ಕುಮಾರ್‌, 

ಎಚ್‌ಕೆಪಾ, ಸಿಸಿಪಾ, ಕಳಕಪ್ಪರಿಂದ ರಂಗೇರಿರುವ ಗದಗ ಎಲೆಕ್ಷನ್ ಅಖಾಡ

ಸಾರ್ವಜನಿಕ ಆದರ್ಶ ಸೇನಾ ಪಾರ್ಟಿ​ಯಿಂದ ಅಶೋಕ್‌ ಕುಮಾರ್‌ ಕರಂಜಿ, ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ​ಯಿಂದ ಹಣಮಂತ ಹಾ​ಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಗುಂಡೋಜಿ, ಶಶಿಕುಮಾರ್‌ ಪಾಟೀಲ್‌, ಜ್ಞಾನೇಶ್ವರ ಹೊಸಮನಿ ತಾವೇನು ಕಮ್ಮಿಯಿಲ್ಲ ಎಂದು ಕಣಕ್ಕೆ ಧುಮುಕಲು ನಾಮಪತ್ರ ಸಲ್ಲಿಸಿದ್ದಾರೆ. ಸುಮಾರು 2.27ಲಕ್ಷ ಮತದಾರರನ್ನು ಹೊಂದಿರುವ ಬೀದರ್‌ನ ಈ ಹಿಂದಿನ ನಾಲ್ಕೈದು ಚುನಾವಣೆಗಳನ್ನು ಅವಲೋಕಿಸಿದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇದ್ದರೂ ಆಗೊಮ್ಮೆ, ಈಗೊಮ್ಮೆ ಜೆಡಿಎಸ್‌ ತನ್ನ ಪ್ರಾಬಲ್ಯ ತೋರಿಸಿದ್ದೂ ಇದೆ. ಆದರೆ ಅಂತಿಮವಾಗಿ ಫಲಿತಾಂಶ ಜಾತಿಯಾಧಾರಿತ, ವ್ಯಕ್ತಿ​ಯಾ​ಧಾ​ರಿ​ತ ಮತ ವಿಭಜನೆ ಲೆಕ್ಕಾಚಾರಕ್ಕೆ ಮುಗಿಬಿದ್ದಿದೆ.

ಮತ ವಿಭಜನೆ ಚರ್ಚೆ: ಬೀದರ್‌ ವಿಧಾನಸಭಾ ಕ್ಷೇತ್ರ ಮುಸ್ಲಿಂ ಮತ​ದಾ​ರ​ರ ಬಾಹು​ಳ್ಯದ ಕ್ಷೇತ್ರ. ಹಾಗೆಯೇ ಇಲ್ಲಿ ಲಿಂಗಾ​ಯತ ಮತ​ದಾ​ರರು ನಿರ್ಣಾ​ಯ​ಕ. ಎಸ್ಸಿ, ಎಸ್ಟಿ, ಕ್ರಿಶ್ಚಿ​ಯನ್‌ ಸೇರಿ ಮತ್ತಿ​ತರ ಸಣ್ಣ ಪುಟ್ಟಜಾತಿ ಸಮು​ದಾ​ಯ​ಗಳ ಮತ​ಗಳನ್ನೂ ನಿರ್ಲ​ಕ್ಷಿ​ಸು​ವಂತಿ​ಲ್ಲ.

ಹಿಂದು​ತ್ವದ ಬೆನ್ನೇ​ರಿ​ರುವ ಠಾಕೂ​ರ್‌: ಇದೀಗ ಬಿಜೆಪಿ ಟಿಕೆಟ್‌ ವಂಚಿತರಾಗಿ ಜೆಡಿಎಸ್‌ ಸೇರಿರುವ ಸೂರ್ಯಕಾಂತ ನಾಗಮಾರಪಳ್ಳಿ ದಳದ ಅಭ್ಯರ್ಥಿ. ಬಿಜೆಪಿ ಟಿಕೆಟ್‌ ನೀಡದ ಕಾರಣ ಕ್ಷೇತ್ರ​ದಲ್ಲಿ ಕೊಂಚ ಅನು​ಕಂಪ ಅವರ ಪರ ಹರಿ​ದಾಡುತ್ತಿ​ದೆ. ಮೂಲ ಬಿಜೆ​ಪಿ​ಗರ ಪೈಕಿ ಹಲವು ನಾಯ​ಕರು ಬಿಜೆಪಿ ಅಭ್ಯರ್ಥಿ ಪರ ಪ್ರಚಾ​ರ​ದಿಂದ ದೂರ​ವು​ಳಿದು ದಳಕ್ಕೆ ಪರೋಕ್ಷ ಸಹ​ಕಾರ ನೀಡು​ತ್ತಿ​ರುವುದು ಕ್ಷೇತ್ರ​ದಲ್ಲಿ ಬಹು​ಚ​ರ್ಚಿತ ವಿಚಾರ. ಒಂದು ದಶ​ಕ​ದಿಂದ ಚುನಾ​ವ​ಣಾ ಅಖಾ​ಡಾ​ದ​ಲ್ಲಿ ಆಟ​ವಾ​ಡಿ​ರುವ ಸೂರ್ಯ​ಕಾಂತ್‌ಗೆ ಪ್ರಬಲ ಲಿಂಗಾಯತ ಅಷ್ಟೇ ಅಲ್ಲ ಮುಸ್ಲಿಂ, ಪರಿ​ಶಿಷ್ಟ ಪಂಗ​ಡ​ಗ​ಳ ಜೊತೆ ವಿವಿಧ ಸಮಾ​ಜ​ಗಳ ಸಂಘ​ಟ​ನೆ​ಗಳೂ ಕೈಜೋ​ಡಿ​ಸಿದ್ದು, ಹಿರಿಯ ಸಹೋ​ದರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾ​ಕಾಂತ ನಾಗ​ಮಾ​ರ​ಪಳ್ಳಿ ಅವರ ಭುಜ ಬಲ ಪ್ಲಸ್‌ ಪಾಯಿಂಟ್‌. ಚುನಾ​ವಣಾ ಅಖಾಡ ಹೊಸ​ದಾ​ದರೂ ಬಿಜೆ​ಪಿ ಅಭ್ಯರ್ಥಿ ಈಶ್ವ​ರ​ ಸಿಂಗ್‌ ಠಾಕೂರ್‌ ತಮ್ಮ ಕಟ್ಟಾ ಬಿಜೆ​ಪಿ ಮತ​ದಾ​ರ​ರನ್ನು ಹಿಡಿ​ದಿ​ಟ್ಟು​ಕೊಂಡಿ​ದ್ದಾರೆ ಎಂಬು​ದು ಸುಳ್ಳ​ಲ್ಲ. ಪ್ರಮುಖ ನಾಯ​ಕರ ಅಘೋ​ಷಿತ ಅಸ​ಹ​ಕಾ​ರದ ಮಧ್ಯೆಯೇ ಹಿಂದು​ತ್ವದ ಜಾಡು ಹಿಡಿದು ಅವರು ಮತ​ದಾ​ರನ ಮನೆ, ಮನೆ​ಗ​ಳಿಗೆ ಲಗ್ಗೆ​ಯಿ​ಡು​ತ್ತಿ​ದ್ದು, ತ್ರಿಕೋನ ಸ್ಪರ್ಧೆ​ಯಲ್ಲಿ ತಾವೇನೂ ಕಮ್ಮಿ ಇಲ್ಲ ಎಂಬ ಸುಳಿವು ನೀಡ​ಲಾ​ರಂಭಿ​ಸಿ​ದ್ದಾ​ರೆ.

ರಹೀಮ್‌ ಖಾನ್‌ ಲೆಕ್ಕಾಚಾರ ಏನು?: ಇನ್ನು ಈಗಾ​ಗಲೇ ಮೂರು ಬಾರಿ ಗೆದ್ದು ನಾಲ್ಕನೇ ಗೆಲು​ವಿ​ಗಾ​ಗಿ ಕಾಂಗ್ರೆಸ್‌ ಅಭ್ಯರ್ಥಿ ರಹೀಮ್‌ ಖಾನ್‌ ಪರಂಪರಾಗತ ಮುಸ್ಲಿಂ ಮತಗಳು, ಎಸ್ಸಿ, ಎಸ್ಟಿಅಲ್ಲದೆ ತಮ್ಮ ಮಾತಿನ ಕೌಶಲ್ಯ, ಸ್ವಭಾ​ವ​ ಮುಂದಿ​ಟ್ಟು​ಕೊಂಡು ಲಿಂಗಾ​ಯತ, ಗೊಂಡ ಕುರು​ಬ ಸೇರಿ ಇತರ ಹಿಂದೂ ಮತ​ಗ​ಳಿ​ಕೆ​ಯ ಲೆಕ್ಕಾಚಾರದಲ್ಲಿದ್ದಾರೆ. ಆದ​ರೆ ಮುಸ್ಲಿಂ ಮತ​ಗಳ ಕೇಂದ್ರ​ವಾ​ಗಿ​ರುವ ಓಲ್ಡ್‌ ಸಿಟಿಯ ಮತ​ದಾ​ನ ಪ್ರಮಾ​ಣ​ದ ಮೇಲೆ ಈ ಬಾರಿಯ ಚುನಾ​ವ​ಣಾ ಫಲಿ​ತಾಂಶ ನಿರ್ಧಾರವಾಗುತ್ತದೆ ಎಂಬುದು ರಾಜ​ಕೀ​ಯ ತಜ್ಞರ ಅಂಬೋ​ಣ. 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಹೀಮ್‌ ಖಾನ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 73,270 ಮತ ಪಡೆದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಸೂರ್ಯಕಾಂತ ನಾಗಮಾರಪಳ್ಳಿ 63,025 ಮತ ಪಡೆದು 10,245 ಮತಗಳ ಅಂತರದಿಂದ ಸೋಲುಂಡಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಕಾಂಗ್ರೆಸ್‌ ಭದ್ರಕೋಟೆ ಚಾಮರಾಜನಗರದಲ್ಲಿ ಸೋಮಣ್ಣರಿಂದ ಬಿಜೆಪಿ ರಣಕಹಳೆ

ಜಾತಿ ಮತ​ಗ​ಳು
ಮುಸ್ಲಿಂ-58,000
ಲಿಂಗಾ​ಯತ-68,000
ಎಸ್ಸಿ,ಎಸ್ಟಿ- 46,000
ಮರಾಠಾ- 10,000
ಕ್ರಿಶ್ಚಿ​ಯನ್‌-8,000
ಬ್ರಾಹ್ಮಣ- 7,000
ಇತ​ರರು- 29,000

Follow Us:
Download App:
  • android
  • ios