ಬೊಮ್ಮಾಯಿ ಅವರೇ ಯಾವಾಗ ತೇಜಸ್ವಿ ಸೂರ್ಯನ ಮನೆಗೆ ಬುಲ್ಡೋಸರ್ ನುಗ್ಗಿಸುವಿರಿ? ಕೈ ಟ್ವೀಟ್ ಅಸ್ತ್ರ
ಬೊಮ್ಮಾಯಿ ಅವರೇ, ಯಾವಾಗ ತೇಜಸ್ವಿ ಸೂರ್ಯನ ಮನೆಗೆ ಬುಲ್ಡೋಸರ್ ನುಗ್ಗಿಸುವಿರಿ? ಎಂದು ಕರ್ನಾಟಕ ಕಾಂಗ್ರೆಸ್, ಸಂಸದ ತೇಜಸ್ವಿ ಸೂರ್ಯವಿರುದ್ಧ ಸರಣಿ ಟ್ವೀಟ್ ಮಾಡಿದೆ.
ಬೆಂಗಳೂರು, (ಜುಲೈ.28): ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎನ್ನುವ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಆಡಿಯೋ ವೈರಲ್ ಆಗಿದೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟಾಸ್ತ್ರ ಮಾಡಿದೆ.
ಸಂಸದರ ಮನೆ ಮೇಲೆ ಬುಲ್ಡೋಸರ್ ನುಗ್ಗಿಸುವುದು ಯಾವಾಗ? ಬೇಗ ತೇಜಸ್ವಿರವರ ಯುಪಿ ಮಾಡೆಲ್ ಆಸೆಯನ್ನು ನೆರವೇರಿಸಿ ಎಂದು ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಶ್ನಿಸಿದೆ..
ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದು" @Tejasvi_Surya ಬಿಜೆಪಿಯ 'ಹೆಣ ರಾಜಕೀಯ'ದ ಅಸಲಿಯತ್ತು ಅವರ ಬಾಯಲ್ಲೇ ಹೊರಬಂದಿದೆ ಎಂದು ತೇಜಸ್ವಿ ಸೂರ್ಯ ಅವರಿಗ ಟ್ಯಾಗ್ ಮಾಡಿದೆ.
SDPI, PFI ಬಿಜೆಪಿ B ಟೀಂ, ಎರಡೂ ಸಂಘಟನೆಗಳಿಗೂ ಹಣ ಸಂದಾಯ: ಗಂಭೀರ ಆರೋಪ
ಬಿಜೆಪಿಯ ಇಂತಹ ಪಾಪಗಳ ಕೊಡ ತುಂಬುತ್ತಿದೆ, ಅವರದ್ದೇ ಕಾರ್ಯಕರ್ತರು ಛೀಮಾರಿ ಹಾಕುತ್ತಿದ್ದಾರೆ, ಆದರೂ ಅಮಾಯಕರನ್ನು ಬಲಿ ಕೊಡುವ ಇವರ ಶವ ರಾಜಕೀಯದ ಹಪಹಪಿತನ ಕೊನೆಯಾಗಿಲ್ಲ ಎಂದು ಟ್ವೀಟ್ ಮಾಡಿದೆ.
ಸಂಸದ ತೇಜಸ್ವಿ ಸೂರ್ಯರಿಗಿಂತ ಹಿರಿತನದಲ್ಲಿ, ಅನುಭವದಲ್ಲಿ ಮುಂದಿದ್ದ ಹಲವು ಕಾರ್ಯಕರ್ತರಿದ್ದರು, ಆದರೆ ದಿಢೀರ್ ಉನ್ನತ ಹುದ್ದೆಗೇರಿದ ತೇಜಸ್ವಿ ಸೂರ್ಯ ವಂಶ ರಾಜಕೀಯದ ಫಲಾನುಭವಿಯಲ್ಲವೇ? ಹಿಂದೂಗಳ ರಕ್ಷಣೆ ಕೊಡುತ್ತೇವೆ ಎಂದಿದ್ದ ಕರ್ನಾಟಕ ಬಿಜೆಪಿ ಇಂದು ಎಲ್ಲರಿಗೂ ರಕ್ಷಣೆ ಸಾಧ್ಯವಿಲ್ಲ ಎಂದಿದ್ದು ಹಿಂದೂಗಳಿಗೆ ಮಾಡಿದ ಘೋರ ಅವಮಾನ ಎಂದು ಟೀಕಿಸಿದೆ.
ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ತೇಜಸ್ವಿ ಸೂರ್ಯ ದೇಶದಲ್ಲಿ ಕಲ್ಲು ಹೊಡೆಯುವವರ ಹಿಂದಿನ ಕುಮ್ಮಕ್ಕು ಅನಾವರಣವಾಗಿದೆ. ಗಲಭೆ, ದೊಂಬಿಗಳ ಕೈವಾಡ ಬಿಜೆಪಿಯದ್ದೇ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ. ಬಸವರಾಜ ಬೊಮ್ಮಾಯಿ ಅವರೇ, ಯಾವಾಗ ತೇಜಸ್ವಿ ಸೂರ್ಯನ ಮನೆಗೆ ಬುಲ್ಡೋಸರ್ ನುಗ್ಗಿಸುವಿರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರತಿಯೊಬ್ಬರಿಗೂ ರಕ್ಷಣೆ ಕೊಡಲು ಸಾಧ್ಯವಿದೆಯೇ? ಈ ಮಾತನ್ನು ಹಿಂದೆ ಗೃಹ ಸಚಿವರು, ಈಗ ಸಂಸದರು ಹೇಳಿದ್ದಾರೆ. 'ಹಿಂದೂಗಳ ರಕ್ಷಣೆ' ಎಂಬ ಟ್ಯಾಗ್ಲೈನ್ನಲ್ಲಿ ಚುನಾವಣೆ ನಡೆಸಿದ ಕರ್ನಾಟಕ ಬಿಜೆಪಿ ನಾಯಕರಿಗೆ ಗೂಟದ ಕಾರು ಸಿಕ್ಕ ನಂತರ, ತಮ್ಮ ಹಿಂದೆಮುಂದೆ ಬಾಡಿಗಾರ್ಡ್ಗಳನ್ನು ಇಟ್ಟುಕೊಂಡು ಯೂಟರ್ನ್ ಹೊಡೆದಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ತೇಜಸ್ವಿ ಸೂರ್ಯ ವಿರುದ್ಧ ಗುಂಡೂರಾವ್ ಕಿಡಿ
ಇನ್ನು ಸಂಸದ ತೇಜಸ್ವಿ ಸೂರ್ಯ ಆಕ್ಷೇಪಾರ್ಹ ಹೇಳಿಕೆ ವಿಚಾರದ ಪ್ರತಿಕ್ರಿಯಿಸಿದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅವರ ಮನೆ ಮೇಲೆ ಅವರೇ ಕಲ್ಲು ಹೊಡೆದುಕೊಳ್ಳಬೇಕು. ಈ ಹಿಂದೆ ಈ ರೀತಿಯ ಸಾವು ಆಗಲಿ ಎಂದು ಕಾದು ಕುಳಿತಿದ್ದರು. ಹಿಂದೆ ವೈಯಕ್ತಿಕ ಸಾವುಗಳನ್ನು ರಾಜಕೀಯ ದ್ವೇಷದ ಸಾವುಗಳನ್ನಾಗಿ ಮಾಡಿದ್ರು.. ಹತ್ಯೆಗಳು ಎಲ್ಲಾ ಸರ್ಕಾರದಲ್ಲೂ ಆಗಿವೆ. ಆದರೆ ಹತ್ಯೆಗಳಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣ ಮಾಡಿದ್ರಿಂದ ಅವರದ್ದೆ ಪಕ್ಷದ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ. ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ನಾಯಕರ ಪ್ರಚೋದನೆಕಾರಿ ಹೇಳಿಕೆಗಳಿಂದ ಈ ರೀತಿಯ ಹತ್ಯೆ ಅಗುತ್ತಿದೆ ಎಂದು ಕುಟುಕಿದರು.
ಬಿಜೆಪಿಯವರಿಗೆ ಸಾವಿನ ಮನೆ ರಾಜಕಾರಣ ಮಾಡೋದು ಇನ್ನೂ ತಪ್ಪಿಲ್ಲ. ಅವರ ಪಕ್ಷದ ಕಾರ್ಯಕರ್ತರು ಅವರ ಮೇಲೆ ತಿರುಗಿ ಬಿದ್ದಿದರಿಂದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡಬೇಕು.
ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದು ಅವರಿಗೆ ಬಿಟ್ಟಿದ್ದು. ಪ್ರಚೋದನಕಾರಿ ಹೇಳಿಕೆ ಕೊಟ್ಟು, ಕೊಟ್ಟು ಬಲಿ ತೆಗೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.