ಸಿಎಂ ಕುರ್ಚಿಯಿಂದ ಇಳಿಸಿ ಮಳೆಯಲ್ಲಿ ಪ್ರತಿಭಟನೆಗೆ ಕೂರಿಸಿದ್ದಾರೆ, ಅಧಿಕಾರ ನಡೆಸಲು ವಯಸ್ಸಾಗಿದೆ, ಕಷ್ಟ ನೀಡಲು ವಯಸ್ಸಾಗಿಲ್ಲವೆ?: ಕಾಂಗ್ರೆಸ್‌ 

ಬೆಂಗಳೂರು(ಜು.05): ‘ಬಿ.ಎಸ್‌.ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣ ನೀಡಿ ಪದಚ್ಯುತಿಗೊಳಿಸಿ ಈಗ ರಾಜಕೀಯಕ್ಕಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಸಿಲು, ಮಳೆಯಲ್ಲಿ ಕೂರಿಸುತ್ತಿರುವುದು ನಾಚಿಕೆಗೇಡು. ಬಿಜೆಪಿ ಅವರನ್ನು ಬಳಸಿ ಬಿಸಾಡುವ ಟಿಶ್ಯು ಪೇಪರ್‌ ಎಂದುಕೊಂಡಿದೆಯೇ?’ ಎಂದು ರಾಜ್ಯ ಕಾಂಗ್ರೆಸ್‌ ಕಿಡಿ ಕಾರಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸಿತು. ಈಗ ಅಂತಹ ಹಿರಿಯ ವ್ಯಕ್ತಿಯನ್ನು ರಾಜಕೀಯ ಕಾರಣಕ್ಕಾಗಿ ಮಳೆ, ಬಿಸಿಲಿನಲ್ಲಿ ಕೂರಿಸಿದೆ. ಹೋರಾಟ ಮಾಡಲು, ಮಳೆ, ಬಿಸಿಲಿನಲ್ಲಿ ಕಷ್ಟಅನುಭವಿಸಲು ಅವರಿಗೆ ವಯಸ್ಸಾಗಿಲ್ಲ. ಅಧಿಕಾರ ನಡೆಸಲು ಮಾತ್ರ ಅವರಿಗೆ ವಯಸ್ಸಾಗಿತ್ತೇ? ಎಂದು ಪ್ರಶ್ನೆ ಮಾಡಿದೆ. ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ ಯಡಿಯೂರಪ್ಪ ಅವರನ್ನು ಟಿಶ್ಯು ಪೇಪರ್‌ ಎಂದುಕೊಂಡಿದ್ದಾರೆಯೇ? ಒಬ್ಬ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದ ರಾಜ್ಯ ಬಿಜೆಪಿ ರಾಜಕೀಯದಿಂದ ದೂರ ತಳ್ಳಿದ್ದ ಯಡಿಯೂರಪ್ಪ ಅವರನ್ನೇ ಮತ್ತೆ ಆಶ್ರಯಿಸಿರುವುದು ಬಿಜೆಪಿಯ ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿದೆ.

ಕುಮಾರಸ್ವಾಮಿ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ: ಬಿಎಸ್‌ವೈ

ಅಗತ್ಯವಿದ್ದಾಗ ಕಾಲು ಹಿಡಿಯುವುದು, ಅಗತ್ಯವಿಲ್ಲದಾಗ ಕಾಲು ಎಳೆಯುವುದು ಬಿಜೆಪಿಯ ಸಂಸ್ಕೃತಿ ಎಂದು ಟೀಕಿಸಿದೆ.