ಮೋದಿ ಹೇಳಿದ್ದೆಲ್ಲ ಸುಳ್ಳು, ನನ್ನ ಜೀವನದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನೇ ನೋಡಿರಲಿಲ್ಲ, ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕಾಂಗ್ರೆಸ್‌ ವತಿಯಿಂದ ಸಿದ್ದುಗೆ ಸನ್ಮಾನ, ಕರ್ನಾಟಕದ ಬಡವರಿಗೆ ಅಕ್ಕಿ ಕೊಡೋದು ಬಿಜೆಪಿಗೆ ಇಷ್ಟವಿಲ್ಲ, ಕರ್ನಾಟಕದಂತೆ ಮಹಾ ಭ್ರಷ್ಟಸರ್ಕಾರ ಕೂಡ ಸೋಲುತ್ತೆ, ಕರ್ನಾಟಕ ಸೋಲು ಮೋದಿ ಜನಪ್ರಿಯತೆ ಕುಸಿತದ ಸಂಕೇತ: ಸಿಎಂ ಸಿದ್ದರಾಮಯ್ಯ

ಸಾಂಗ್ಲಿ (ಮಹಾರಾಷ್ಟ್ರ)(ಜೂ26):  ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನೇ ನೋಡಿರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಮಹಾರಾಷ್ಟ್ರದ ಕರ್ನಾಟಕ ಗಡಿಭಾವಾದ ಕನ್ನಡಿಗರೇ ಹೆಚ್ಚಿರುವ ಸಾಂಗ್ಲಿಯಲ್ಲಿ ಭಾನುವಾರ ಮಹಾರಾಷ್ಟ್ರ ಕಾಂಗ್ರೆಸ್‌ ಘಟಕವು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿದ್ದಕ್ಕೆ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿತು. ಈ ವೇಳೆ ರಾರ‍ಯಲಿಯಲ್ಲಿ ಕನ್ನಡದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿರಲೇ ಇಲ್ಲ. 2014ರಲ್ಲಿ ಜನರ ಬ್ಯಾಂಕ್‌ ಖಾತೆಗಳಿಗೆ 15 ಲಕ್ಷ ರು. ಹಾಕುವುದಾಗಿ ಮೋದಿ ಹೇಳಿದ್ದರು. 2 ಕೋಟಿ ಉದ್ಯೋಗ ಸೃಷ್ಟಿಮಾಡುವುದಾಗಿ ಹೇಳಿದ್ದರು ಮತ್ತು ಅಚ್ಛೇ ದಿನ್‌ (ಒಳ್ಳೆಯ ದಿನಗಳು) ತರಲಿದ್ದೇನೆ ಎಂದು ಹೇಳಿದ್ದರು. ಇದರಲ್ಲಿ ಯಾವುದಾದರೂ ಸಾಕಾರಗೊಂಡಿದೆಯೆ?’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ, ಡಿಕೆಶಿ ಮೆಟ್ಟು-ಮೆಟ್ಟಿನಿಂದ ಹೊಡೆದಾಡಿಕೊಳ್ತಾರೆ: ಶಾಸಕ ಯತ್ನಾಳ

ಮೋದಿ ನಮ್ಮ ವಿರುದ್ಧ ಕರ್ನಾಟಕದಾದ್ಯಂತ ಪ್ರಚಾರ ಮಾಡಿದರು. ಆದರೆ ಅವರು ಪ್ರಚಾರ ಮಾಡಿದ ಕಡೆ ಬಿಜೆಪಿ ಸೋತಿತು. ಇದು ಮೋದಿ ಜನಪ್ರಿಯತೆ ಕುಸಿಯುತ್ತಿರುವ ಸಂಕೇತ’ ಎಂದು ಹೇಳಿದರು.
‘ಬಿಜೆಪಿ ಎಂದರೇ ಭ್ರಷ್ಟಾಚಾರ. ಹಾಗಾಗಿ ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯದ ಎಲ್ಲಾ ಮೂಲೆಗಳಿಗೂ ಸಂಚರಿಸಿ ಹಿಂದಿನ ಸರ್ಕಾರ ನಡೆಸಿದ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಹೇಳಿದೆವು. 40% ಕಮಿಶನ್‌ ಬಗ್ಗೆ ಜನರಿಗೆ ತಿಳಿಹೇಳಿದೆವು. ಬಿಜೆಪಿ ಅಂದರೆ ಭ್ರಷ್ಟಾಚಾರ ಹಾಗೂ ಭ್ರಷ್ಟಾಚಾರ ಎಂದರೆ ಬಿಜೆಪಿ’ ಎಂದು ವಾಗ್ದಾಳಿ ನಡೆಸಿದರು.

‘ಈ ಮೊದಲು ಆಪರೇಶನ್‌ ಕಮಲ ನಡೆಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಮಹಾರಾಷ್ಟ್ರದಲ್ಲಿರುವ ಏಕನಾಥ ಶಿಂಧೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರವೂ ಭ್ರಷ್ಟಾಚಾರಿಯಾಗಿದ್ದು, ಇವರನ್ನು ಸೋಲಿಸುವ ಕೆಲಸವನ್ನು ಕಾಂಗ್ರೆಸ್‌ ಕಾರ್ಯಕರ್ತರು ಮಾಡಲಿದ್ದಾರೆ’ ಎಂದರು. ಮುಂದಿನ ವರ್ಷವೇ ಮಹಾರಾಷ್ಟ್ರ ಚುನಾವಣೆ ಇದೆ.

‘ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಲು ನಾವು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧರಾಗಿದ್ದೇವೆ. ಅಂಬೇಡ್ಕರ್‌ ಅವರ ಕಾರಣದಿಂದಲೇ ನಾನು ಮುಖ್ಯಮಂತ್ರಿಯಾಗಿದ್ದೇನೆ. ಧರ್ಮ, ಜಾತಿ ಆಧಾರದಲ್ಲಿ ಜನರನ್ನು ಬಿಜೆಪಿ ಒಡೆಯುತ್ತಿದೆ’ ಎಂದು ಆರೋಪಿಸಿದರು.

ಇದೇ ವೇಳೆ, ತಮ್ಮ 10 ಕೇಜಿ ಉಚಿತ ಅಕ್ಕಿ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡದ್ದಕ್ಕೆ ಕಿಡಿಕಾರಿದ ಸಿದ್ದರಾಮಯ್ಯ, ‘ಯೋಜನೆಗೆ ಬೇಕೆಂದೇ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಬಡವರಿಗೆ ಉಚಿತ ಅಕ್ಕಿ ನೀಡುವುದು ಬಿಜೆಪಿಗೆ ಇಷ್ಟವಿಲ್ಲ’ ಆಕೋಶ ವ್ಯಕ್ತಪಡಿಸಿದರು. ‘ಸಾವರ್ಕರ್‌ ಹಾಗೂ ಹೆಡಗೇವಾರ್‌ ಸಂವಿಧಾನ ವಿರೋಧಿಸಿದ್ದರು./ ಆದರೆ ಕಾಂಗ್ರೆಸ್‌ ಸಂವಿಧಾನ ಬದಲಿಸಲು ಬಿಡಲ್ಲ’ ಎಂದರು.

ಅಭಿಪ್ರಾಯ ವ್ಯಕ್ತಪಡಿಸಲು ಯಾರೂ ಹೆದರಬೇಕಿಲ್ಲ: ಸಾಹಿತಿಗಳ ಆತಂಕಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ

ನೀರು, ಮೀಸಲು ಕೊಡಿ: ಮಹಾರಾಷ್ಟ್ರದ ಕನ್ನಡಿಗರ ಮನವಿ

ಸಾಂಗ್ಲಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನಾ ಸಮಾರಂಭದಲ್ಲಿ ಮಹಾರಾಷ್ಟ್ರದ ಗಡಿಭಾಗದ ಕನ್ನಡಿಗರು ‘ತುಬಚಿ ಬಬಲೇಶ್ವರ ನೀರಾವರಿ ಯೋಜನೆಯಿಂದ ನಮಗೆ ನೀರು ಕೊಡಿ’ ಹಾಗೂ ‘ಮಹಾರಾಷ್ಟ್ರದ ಗಡಿಬಾಗದ ಕನ್ನಡಿಗರಿಗೆ ಕರ್ನಾಟಕದಲ್ಲಿ ಶೇ.10 ಮೀಸಲು ಕೊಡಿ’ ಎಂಬ ಪೋಸ್ಟರ್‌ ಪ್ರದರ್ಶಿಸಿದರು.

ಮಹಾರಾಷ್ಟ್ರ ಕಾಂಗ್ರೆಸ್‌ ಶಾಸ ವಿಶ್ವಜಿತ್‌ ಕದಂ ಮಾತನಾಡಿ, ‘ಸಾಂಗ್ಲಿಯ ಜತ್‌ ತಾಲೂಕಿನ ನೀರಿನ ಬವಣೆಯನ್ನು ಬಗೆಹರಿಸಲು ಗಡಿ ರಾಜ್ಯವಾದ ಕರ್ನಾಟಕ ಸಹಕರಿಸಬೇಕು. ಬೆಳಗಾವಿಯಲ್ಲಿ ಮರಾಠಿಗರಿಗೆ ತಾರತಮ್ಯ ಆಗದಂತೆ ನೀಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.