ಸಚಿವ ಸಂಪುಟದ ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಯಾವ ಸಚಿವರೂ ನಿರ್ದಿಷ್ಟ ಖಾತೆಗಾಗಿ ತಮ್ಮ ಬಳಿ ಚರ್ಚಿಸಿಲ್ಲ ಎಂದ ಅವರು, ಪಕ್ಷವೇ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಮತ್ತು ಶೀಘ್ರದಲ್ಲೇ ಹಂಚಿಕೆಯಾಗಲಿದೆ ಎಂದು ತಿಳಿಸಿದರು.

ಬೆಂಗಳೂರು (ಜೂ.5): ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಇಂತಹದ್ದೇ ಖಾತೆ ಬೇಕು ಎಂದು ನನ್ನ ಬಳಿ ಬಂದು ಯಾವ ಸಚಿವರೂ ಚರ್ಚೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನಸೌಧದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿ ವೇಳೆ ಖಾತೆ ಹಂಚಿಕೆ ಯಾವಾಗ ಎಂದು ಸುದ್ದಿಗಾರರ ಪ್ರಶ್ನೆಗೆ, ಹೊತ್ತು ಮುಳುಗುವುದರರೊಳಗೆ ಖಾತೆ ಹಂಚಿಕೆಯಾಗಲಿದೆ ಎಂದರು. ಇದೇ ವೇಳೆ ಖಾತೆ ಹಂಚಿಕೆಯಲ್ಲಿ ಗೊಂದಲ ಏರ್ಪಟ್ಟಿದೆಯಂತಲ್ವಾ, ಕೆಲವರು ಇಂತಹದ್ದೇ ಖಾತೆ ಬೇಕೆಂದು ಪಟ್ಟು ಹಿಡಿದಿದ್ದಾರಂತಲ್ವಾ ಎಂದು ಪ್ರಶ್ನಿಸಿದಾಗ, ನಮ್ಮಲ್ಲಿ ಯಾವ ಗೊಂದಲವೂ ಇಲ್ಲ, ನಿಮ್ಮಲ್ಲಿ ಗೊಂದಲವಿರಬೇಕು. ನನ್ನ ಬಳಿ ಬಂದು ಯಾರು ಇಂತಹದ್ದೇ ಖಾತೆ ಬೇಕೆಂದು ಚರ್ಚೆ ಮಾಡಿಲ್ಲ. ಗಾಳಿ ಸುದ್ದಿ, ಊಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು.

ಪಕ್ಷದಿಂದಲೇ ತೀರ್ಮಾನ:

ಖಾತೆ ಹಂಚಿಕೆ ವಿಚಾರವಾಗಿ ಪಕ್ಷ ತೀರ್ಮಾನ ಮಾಡಲಿದೆ. ಪಕ್ಷ ನನ್ನನ್ನು ಮುಖ್ಯಮಂತ್ರಿ ಮಾಡಿದೆ. ನಾನು ಯಾವ ಕೆಲಸ ಮಾಡಬೇಕು ಎಂದು ಹೇಳಿದೆ. ನಾನು ಆ ಕೆಲಸ ಮಾಡುತ್ತೇನೆ. ಪಕ್ಷ ಯಾರಿಗೆ ಯಾವ ಕೆಲಸ ಹೇಳಿದೆಯೋ ಆ ಕೆಲಸ ಮಾಡುತ್ತಾರೆ ಎಂದರು.

ಬಿಜೆಪಿ ನಾಯಕರು ನಿಮ್ಮ ಹೊಸ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದಾರಲ್ವಾ ಎಂದು ಕೇಳಿದಾಗ, ಖಂಡಿತವಾಗಿ, ಈ ಬಗ್ಗೆ ಮಾಹಿತಿ ನೀಡದೆ ನಾವು ಏನನ್ನೂ ಮಾಡುವುದಿಲ್ಲ. ಅವರಿಗೂ ಮಾಹಿತಿ ನೀಡುತ್ತೇವೆ, ಮಾಧ್ಯಮಗಳಿಗೂ ಮಾಹಿತಿ ನೀಡುತ್ತೇವೆ ಎಂದರು.

ಯುವಕ ಸಂಘ ಮಾಡುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರಲ್ವಾ ಎಂದಾಗ, ಯಾವುದೇ ಕೆಲಸ ಮಾಡಿದರೂ ಆರ್ಥಿಕ ಹೊರೆ ಇದ್ದೇ ಇರುತ್ತದೆ ಎಂದರು.