Asianet Suvarna News Asianet Suvarna News

ಯೋಗೇಶ್ವರ್‌ ಕಾರಣದಿಂದ ಕತ್ತಿ, ಲಿಂಬಾವಳಿಗೂ ತಪ್ಪಿತು ಮಂತ್ರಿಗಿರಿ!

ಯೋಗೇಶ್ವರ್‌ ಕಾರಣದಿಂದ ಕತ್ತಿ, ಲಿಂಬಾವಳಿಗೂ ತಪ್ಪಿತು ಮಂತ್ರಿಗಿರಿ| ಹಾಲಿ ಶಾಸಕರ ಸಂಪುಟ ಸೇರ್ಪಡೆಗೆ ವಿರೋಧ ಇರಲಿಲ್ಲ| ಯೋಗೇಶ್ವರ್‌ ಹೆಸರು ಪ್ರಸ್ತಾಪದಿಂದ ಸಂಪುಟ ಗೊಂದಲ

Karnataka Cabinet Expansion Because Of CP Yogeeshwara Umesh Katti And Arvind Limbavali lost Portfolio
Author
Bangalore, First Published Feb 6, 2020, 8:28 AM IST

ಬೆಂಗಳೂರು[ಫೆ.06]: ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರಿಂದಾಗಿ ಹಾಲಿ ಶಾಸಕರಾಗಿರುವ ಉಮೇಶ್‌ ಕತ್ತಿ ಮತ್ತು ಅರವಿಂದ ಲಿಂಬಾವಳಿ ಅವರಿಗೂ ಸದ್ಯ ಸಚಿವ ಸ್ಥಾನ ತಪ್ಪಿದಂತಾಗಿದೆ.

"

ಕತ್ತಿ ಮತ್ತು ಲಿಂಬಾವಳಿ ಅವರಿಗೆ ಸಚಿವ ಸ್ಥಾನ ನಿಶ್ಚಿತ ಎನ್ನಲಾಗಿತ್ತು. ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಪಕ್ಷದಲ್ಲಿ ಯಾವುದೇ ವಿರೋಧವೂ ಇರಲಿಲ್ಲ. ಹೆಚ್ಚೂ ಕಡಮೆ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಸ್ತಾಪಕ್ಕೆ ಬಹುತೇಕ ಎಲ್ಲ ಶಾಸಕರೂ ಪರೋಕ್ಷವಾಗಿ ಸಹಮತ ವ್ಯಕ್ತಪಡಿಸಿದಂತಿತ್ತು.

ಆದರೆ, ಯಾವಾಗ ಯೋಗೇಶ್ವರ್‌ ಅವರ ಹೆಸರು ಪ್ರಸ್ತಾಪವಾಯಿತೊ ಆಗ ಇಡೀ ಚಿತ್ರಣವೇ ಬದಲಾಗಿ ಹೋಯಿತು. ಹಿಂದೆ ಬಿಜೆಪಿ ಸರ್ಕಾರ ರಚನೆ ವೇಳೆ ಯೋಗೇಶ್ವರ್‌ ಅವರು ಅನ್ಯ ಪಕ್ಷಗಳ ಶಾಸಕರನ್ನು ಮನವೊಲಿಸಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಕಾರಣಕ್ಕಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒಲವು ಮುಖ್ಯಮಂತ್ರಿಗಳಿಂದಲೇ ವ್ಯಕ್ತವಾಯಿತು. ಅದಕ್ಕೆ ಕೆಲವು ಅರ್ಹ ಶಾಸಕರೂ ಒತ್ತಡ ಹೇರಿದ್ದರು.

ವಿಚಿತ್ರ ಸಂಗತಿ ಎಂದರೆ ಮುಖ್ಯಮಂತ್ರಿಗಳ ಆಪ್ತರೂ ಆಗಿರುವ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರೇ ಮೊದಲಿಗೆ ಯೋಗೇಶ್ವರ್‌ ಅವರ ವಿರುದ್ಧ ಗುಟುರು ಹಾಕಿದರು. ಅವರೇ ಮುಂದಾಗಿ ಕೆಲವು ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಹಲವು ಶಾಸಕರು ಸೋತ ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸತೊಡಗಿದರು. ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಿಗೆ ಪ್ರಾತಿನಿಧ್ಯ ನೀಡಬೇಕು. ಯಾರಿಗಾದರೂ ನೀಡಲಿ. ಸೋತವರಿಗೆ ಸಚಿವ ಸ್ಥಾನ ನೀಡುವುದು ಬೇಡ ಎಂದು ಬಲವಾಗಿ ಪ್ರತಿಪಾದಿಸಿದರು.

ಪರಿಣಾಮ, ಸಂಪುಟ ವಿಸ್ತರಣೆ ಪ್ರಕ್ರಿಯೆ ಗೊಂದಲದ ಗೂಡಾಗುವ ಸನ್ನಿವೇಶ ಎದುರಾಯಿತು. ಗುರುವಾರದ ಸಂಪುಟ ವಿಸ್ತರಣೆಯಲ್ಲಿ ಅನ್ಯ ಪಕ್ಷಗಳಿಂದ ಬಂದಿರುವ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಿ, ಪಕ್ಷದ ಮೂಲ ಶಾಸಕರಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಯಿತು. ಯೋಗೇಶ್ವರ್‌ ಅವರಿಂದಾಗಿ ಹತ್ತಿದ ಕಿಡಿ ಉಮೇಶ್‌ ಕತ್ತಿ ಮತ್ತು ಅರವಿಂದ ಲಿಂಬಾವಳಿ ಅವರ ಸಚಿವ ಸ್ಥಾನದ ಕನಸಿಗೂ ಕೊಳ್ಳಿ ಇಟ್ಟಂತಾಯಿತು.

Follow Us:
Download App:
  • android
  • ios