ಬೈ ಎಲೆಕ್ಷನ್; ಹೈಕಮಾಂಡ್ಗೆ ಕೈ ಅಭ್ಯರ್ಥಿಗಳ ಪಟ್ಟಿ, ಪರಿಷತ್ಗೆ ಅಚ್ಚರಿ ಹೆಸರು!
ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ/ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೈಕಮಾಂಡ್ ಗೆ ರವಾನೆ/ ಕುಸುಮಾ ಆರ್ ಆರ್ ನಗರದಿಂದ ಕಣಕ್ಕೆ ಇಳಿಯುವುದು ಫಿಕ್ಸ್
ಬೆಂಗಳೂರು(ಅ. 04) ಶಿರಾ ಮತ್ತು ಆರ್ ಆರ್ ನಗರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಲಿಸ್ಟ್ ಎಐಸಿಸಿಗೆ ರವಾನೆ ಮಾಡಲಾಗಿದೆ. ಹೈಕಮಾಂಡ್ ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ಎಐಸಿಸಿ ಗೆ ಅಭ್ಯರ್ಥಿಗಳ ಲಿಸ್ಟ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಳಿಸಿಕೊಟ್ಟಿದ್ದಾರೆ. ಆರ್.ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹೆಸರು ಅಂತಿಮವಾಗಿದೆ.
ಕೈ ಹಿಡಿದ ಡಿಕೆ ರವಿ ಪತ್ನಿ ಕುಸುಮಾ.. ಆರ್ ಆರ್ ನಗರ ಅಭ್ಯರ್ಥಿ
ಕಾಂಗ್ರೆಸ್ ಸದಸ್ಯತ್ವ ಪಡೆದ ಮೊದಲ ದಿನವೇ ಕುಸುಮಾ ಅವರ ಹೆಸರನ್ನ ಅಭ್ಯರ್ಥಿ ಲಿಸ್ಟ್ ನಲ್ಲಿ ಶಿಫಾರಸ್ಸು ಮಾಡಲಾಗಿದೆ. ಆರ್.ಆರ್ ನಗರದಲ್ಲಿ ಡಿ.ಕೆ ರವಿ ಪತ್ನಿ ಕುಸುಮಾಗೆ ಕಾಂಗ್ರೆಸ್ ಟೆಕೆಟ್ ಸಾಧ್ಯತೆ ಎಂದು ಮೊದಲು ಸುದ್ದಿಯನ್ನು ಸುವರ್ಣ ನ್ಯೂಸ್ ಬ್ರೇಕ್ ಮಾಡಿತ್ತು.
ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವ ಡಿ.ಕೆ ರವಿ ಪತ್ನಿ ಕುಸುಮಾಗೆ ಟಿಕೇಟ್ ಸಿಗಲಿದೆ. ಇನ್ನೊಂದು ಕಡೆ ಶಿರಾ ಕ್ಷೇತ್ರಕ್ಕೆ ಟಿ.ಬಿ ಜಯಚಂದ್ರ ಕಾಂಗ್ರೆಸ್ ಉಮೇದುವಾರರಾಗಲಿದ್ದಾರೆ. ಶಿರಾ ಕ್ಷೇತ್ರಕ್ಕೆ ಒಂದೆ ಹೆಸರನ್ನು ಕಳಿಸಿಕೊಡಲಾಗಿದೆ.
ಆಗ್ನೇಯ ಪದವಿಧರರ ಕ್ಷೇತ್ರದ ಪರಿಷತ್ ಚುನಾವಣೆಗೂ ಕೈ ಅಭ್ಯರ್ಥಿ ಅಂತಿಮವಾಗಿದ್ದು ಇತ್ತಿಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡ ರಮೇಶ್ ಬಾಬು ಹೆಸರು ಕಳಿಸಲಾಗಿದೆ. ಇನ್ನು ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಹೆಸರು ಅಂತಿಮವಾಗಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಂದ ಬಿ ಫಾರಂ ಪಡೆದಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪ್ರವೀಣ್ ಪೀಠರ್ ಕೈ ಅಭ್ಯರ್ಥಿಯಾಗಿದ್ದಾರೆ.