ಹಣ ಹಂಚಿಕೆ: ಕಾಂಗ್ರೆಸ್ ಬಾಂಬ್, ಸಿಎಂ ತಿರುಗೇಟು!
* ಹಣ ಹಂಚಿಕೆ: ಕಾಂಗ್ರೆಸ್ ಬಾಂಬ್, ಸಿಎಂ ತಿರುಗೇಟು
* ಪ್ರತಿ ಮತಕ್ಕೆ ಬಿಜೆಪಿ 2-5 ಸಾವಿರ: ಕಾಂಗ್ರೆಸ್
* ಚೀಲದಲ್ಲಿ ಹಣ ತಂದಿರುವ ಐದಾರು ಮಂತ್ರಿಗಳು: ಡಿಕೆಶಿ
* ಡಿಕೆಶಿ ತಮ್ಮ ಅನುಭವದ ಮಾತು ಹೇಳಿದ್ದಾರೆ: ಬೊಮ್ಮಾಯಿ
ಬೆಂಗಳೂರು(ಅ.22): ಸಿಂದಗಿ(Sindagi), ಹಾನಗಲ್(Hangal) ಉಪ ಚುನಾವಣೆಯಲ್ಲಿ(By polls) ಆಡಳಿತಾರೂಢ ಬಿಜೆಪಿ(BJP) ಹಣದ ಹೊಳೆಯನ್ನೇ ಹರಿಸುತ್ತಿದೆ. ಐದಾರು ಸಚಿವರು ಚೀಲದಲ್ಲಿ ಹಣ ತುಂಬಿಕೊಂಡು ಬಂದಿದ್ದಾರೆ. ಪ್ರತಿ ಮತಕ್ಕೆ .2ರಿಂದ .5 ಸಾವಿರದಂತೆ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್(Congress) ಗಂಭೀರ ಆರೋಪ ಮಾಡಿದೆ.
ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಡಿ.ಕೆ.ಶಿವಕುಮಾರ್ ಅವರು ತಮ್ಮ ಅನುಭವದ ಮಾತು ಹೇಳಿದ್ದಾರೆ. ಗುಂಡ್ಲುಪೇಟೆ, ನಂಜನಗೂಡುNanjangud) ಉಪ ಚುನಾವಣೆಯಲ್ಲಿ ಏನೆಲ್ಲ ಮಾಡಿದ್ದಾರೆ ಎಂಬುದನ್ನು ನಾವೂ ನೋಡಿದ್ದೇವೆ. ಕಾಂಗ್ರೆಸ್ನ ಇಂಥ ಯಾವುದೇ ಆರೋಪ, ಷಡ್ಯಂತ್ರ ಯಶಸ್ವಿಯಾಗುವುದಿಲ್ಲ. ನಾವು ಜನರ ಪ್ರೀತಿ, ವಿಶ್ವಾಸದ ಮೇಲೆ ಚುನಾವಣೆ ನಡೆಸುತ್ತೇವೆ ಎಂದು ಕುಟುಕಿದ್ದಾರೆ.
ಗುರುವಾರ ಹಾನಗಲ್ ತಾಲೂಕಿನ ಹುಲ್ಲತ್ತಿಯ ಪ್ರಚಾರ ಸಭೆಯಲ್ಲಿ ಡಿ.ಕೆ.ಶಿವಕುಮಾರ್(DK Shivakumar) ಹಾಗೂ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ(Siddaramaiah) ಅವರು ಹಣ ಹಂಚಿಕೆಗೆ ಸಂಬಂಧಿಸಿ ಬಿಜೆಪಿ(BJP) ವಿರುದ್ಧ ತೀವ್ರ ಹರಿಹಾಯ್ದರು. ಇಷ್ಟುದಿನ ಅಧಿಕಾರದಲ್ಲಿದ್ದರೂ ಏನೂ ಮಾಡದ ಬಿಜೆಪಿಯವರು ಈಗ ಹಣ ಹಂಚುವ ಮೂಲಕ ಉಪ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ನೋಟು, ಕಾಂಗ್ರೆಸ್ಗೆ ವೋಟು:
ಕೋವಿಡ್ ಸಂದರ್ಭದಲ್ಲಿ ಜನರಿಗೆ ಏನೂ ಸಹಾಯ ಮಾಡದ ಬಿಜೆಪಿಯವರು ಈಗ ಬಂದು ಮತ ಕೇಳುತ್ತಿದ್ದಾರೆ. ಭ್ರಷ್ಟಾಚಾರದಿಂದ(Corruption) ಸಂಪಾದಿಸಿದ ಹಣವನ್ನು ಐದಾರು ಸಚಿವರು ಚೀಲದಲ್ಲಿ ತುಂಬಿಕೊಂಡು ಬಂದಿದ್ದಾರೆ. ಪ್ರತಿ ಮತಕ್ಕೆ ಎರಡರಿಂದ ಐದು ಸಾವಿರ ರುಪಾಯಿ ವರೆಗೆ ಹಂಚಲಿದ್ದಾರೆ. ಬಿಜೆಪಿಯವರು ಕೊಡುವ ನೋಟನ್ನು ಯಾರೂ ಬೇಡ ಎನ್ನಬೇಡಿ, ಅವರಿಂದ ನೋಟು ಪಡೆದು ಕಾಂಗ್ರೆಸ್ಗೆ ವೋಟು ಹಾಕಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಡಿ.ಕೆ.ಶಿವಕುಮಾರ್(DK Shhivakumar) ಈ ಹೇಳಿಕೆಗೆ ದನಿಗೂಡಿಸಿದ ಸಿದ್ದರಾಮಯ್ಯ, ಬಿಜೆಪಿಯವರು ಉಪ ಚುನಾವಣೆಯಲ್ಲಿ ಪ್ರತಿ ಮತಕ್ಕೆ .2 ಸಾವಿರದಂತೆ ಹಂಚುತ್ತಿದ್ದಾರೆಂದು ಜನ ಹೇಳುತ್ತಿದ್ದಾರೆ ಎಂದರು. ಹಣಬಲದ ಮೇಲೆಯೇ ಅಧಿಕಾರಕ್ಕೆ ಬಂದ ಬಿಜೆಪಿಗೆ ಜನರ ಕಷ್ಟ, ಸಮಸ್ಯೆಗಳನ್ನು ಬಗೆಹರಿಸುವುದು ಬೇಕಿಲ್ಲ. ಎರಡು ವರ್ಷದಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡದೆ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಗೆಲ್ಲಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.