ಹೊಸಕೋಟೆ ಉಸಾಬರಿಯೇ ಬೇಡ ಎಂದಿದ್ದ ಡಿಸಿಎಂ ಅಶ್ವತ್ಥ್!| ಎಂಟಿಬಿ ಸೋತರೆ ಇಮೇಜ್‌ ಧಕ್ಕೆಯಾಗುವ ಭೀತಿ| ಜವಾಬ್ದಾರಿಯಿಂದ ಬಿಡುಗೊಳಿಸಲು ಆರಂಭದಿಂದಲೇ ಮನವಿ| ಬೇಡಿಕೆ ಇಟ್ಟು ಕೆ.ಆರ್‌. ಪೇಟೆ ಹೊಣೆ ಪಡೆದ ಡಿಸಿಎಂ

ಬೆಂಗಳೂರು[ನ.22]: ಸೋಲಿನ ಭೀತಿಯಿಂದ ತಮ್ಮನ್ನು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಿಂದ ಬಿಡುಗಡೆಗೊಳಿಸಿ ಬೇರೊಂದು ಕ್ಷೇತ್ರದ ಜವಾಬ್ದಾರಿ ನೀಡುವಂತೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಪಕ್ಷದ ನಾಯಕರಿಗೆ ಮನವಿ ಮಾಡಿದ್ದರು ಎಂಬ ಸಂಗತಿ ಹೊರಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಶರತ್‌ ಬಚ್ಚೇಗೌಡ ಅವರು ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದಾರೆ. ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಅಶ್ವತ್ಥನಾರಾಯಣ ಅವರೂ ಅದೇ ಸಮುದಾಯದವರು. ಆ ಕ್ಷೇತ್ರದಲ್ಲಿ ಸಮುದಾಯದ ಮತಗಳೂ ನಿರ್ಣಾಯಕ. ಇಡೀ ಒಕ್ಕಲಿಗ ಸಮುದಾಯವನ್ನು ಶರತ್‌ ಬಚ್ಚೇಗೌಡರ ಬದಲು ಬಿಜೆಪಿಯ ಎಂ.ಟಿ.ಬಿ.ನಾಗರಾಜ್‌ ಅವರತ್ತ ಎಳೆದು ತಂದು ಗೆಲ್ಲಿಸುವುದು ಪ್ರಯಾಸದ ಕೆಲಸ ಎಂಬುದು ಅಶ್ವತ್ಥನಾರಾಯಣ ಅವರಿಗೆ ಗೊತ್ತಿತ್ತು.

'ಎಂಟಿಬಿ ಗೆದ್ರೆ ಬರೀ ಸಚಿವ: ನಾನು ಗೆದ್ದರೆ ಬಿಜೆಪಿ ಸರ್ಕಾರ ಪತನ, ಸಿದ್ದು ಸಿಎಂ!'

ಒಂದು ವೇಳೆ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಿದಲ್ಲಿ ಅದರ ಹೊಣೆಯನ್ನು ತಾವು ಹೊರಬೇಕಾಗುತ್ತದೆ. ಉಪಮುಖ್ಯಮಂತ್ರಿಯಾಗಿದ್ದುಕೊಂಡು ಒಂದು ಕ್ಷೇತ್ರವನ್ನು ಗೆಲ್ಲಿಸಲು ಆಗಲಿಲ್ಲ ಎಂಬ ಅಪಸ್ವರ ಮತ್ತು ಅಸಮಾಧಾನ ಪ್ರತಿಪಕ್ಷಗಳ ಮುಖಂಡರ ಜೊತೆಗೆ ಸ್ವಪಕ್ಷೀಯ ಮುಖಂಡರಿಂದಲೇ ಬಲವಾಗಿ ಕೇಳಿಬರಬಹುದು. ಆ ಮುಜುಗರ ಉಂಟಾಗುವುದು ಬೇಡ ಎಂಬ ಕಾರಣಕ್ಕಾಗಿ ಅಶ್ವತ್ಥನಾರಾಯಣ ಅವರು ಆರಂಭದಿಂದಲೇ ಹೊಸಕೋಟೆ ಕ್ಷೇತ್ರದ ಉಸ್ತುವಾರಿ ಬೇಡ ಎಂಬ ಅಭಿಪ್ರಾಯವನ್ನು ಪಕ್ಷದ ನಾಯಕರ ಬಳಿ ವ್ಯಕ್ತಪಡಿಸಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆÜ.

'ಬಂಡಾಯದ ಬಾವುಟ, ಬಿಜೆಪಿಯಿಂದ ಶರತ್‌ ಬಚ್ಚೇಗೌಡ ಉಚ್ಚಾಟನೆ'

ಇದೇ ವೇಳೆ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕುರುಬ ಸಮುದಾಯಕ್ಕೆ ಅಗೌರವ ತೋರಿದ್ದಾರೆ ಎಂಬ ವಿವಾದ ಉಂಟಾಯಿತು. ಮಾಧುಸ್ವಾಮಿ ಅವರನ್ನು ಬದಲಾಯಿಸುವ ಪ್ರಸ್ತಾಪ ಕೇಳಿಬಂತು. ಇದನ್ನೇ ಕಾಯುತ್ತಿದ್ದ ಅಶ್ವತ್ಥನಾರಾಯಣ ಅವರು ಮಾಧುಸ್ವಾಮಿ ಅವರ ಉಸ್ತುವಾರಿ ಕ್ಷೇತ್ರವನ್ನು ತಮಗೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಇತರ ಹಿರಿಯ ನಾಯಕರ ಬಳಿ ಪ್ರಬಲ ಬೇಡಿಕೆ ಮಂಡಿಸಿ ಒಪ್ಪಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದು ಬಂದಿದೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.