ಹೈಕಮಾಂಡ್‌ ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದ ಸಿಎಂ  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಬಿಜೆಪಿ ಮುಖಂಡರಿಂದ ಭಾರೀ ಬೆಂಬಲ ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತ ಬಿಜೆಪಿ ಮುಖಂಡರು

ಬೆಂಗಳೂರು (ಜೂ.07): ಹೈಕಮಾಂಡ್‌ ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಇರುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ ಕೆಲಹೊತ್ತಿನಲ್ಲೇ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಕೇಂದ್ರ ಸಚಿವರು, ರಾಜ್ಯದ ಉಪಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರು ಅವರ ಬೆನ್ನಿಗೆ ಬಲವಾಗಿ ನಿಂತಿದ್ದಾರೆ.

Add Asianetnews Kannada as a Preferred SourcegooglePreferred

ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರು ರಾಜೀನಾಮೆ ನೀಡುವುದಿಲ್ಲ. ಅವರ ನಾಯಕತ್ವ ಮುಂದುವರೆಯಲಿದೆ. ಸರ್ಕಾರದ ಇನ್ನುಳಿದ ಅವಧಿಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಯಾವುದೇ ಕಾರಣಕ್ಕೂ ಬದಲಾವಣೆಯಿಲ್ಲ ಎಂಬ ಹೇಳಿಕೆಗಳನ್ನು ಅನೇಕರು ನೀಡಿದ್ದಾರೆ. ಈ ಮೂಲಕ ಯಡಿಯೂರಪ್ಪ ನಾಯಕತ್ವ ಗಟ್ಟಿಗೊಳಿಸುವ ಪ್ರಯತ್ನವೂ ನಡೆದಿದೆ.

ಬಿಎಸ್‌ವೈ ಸಿಎಂ ಆಗಿ ಮುಂದುವರೆಯೋದು ಸೂರ್ಯ, ಚಂದ್ರರಿರುವಷ್ಟು ಸತ್ಯ: ರೇಣುಕಾಚಾರ್ಯ ..

ಯಡಿಯೂರಪ್ಪ ಅವರಿಗೆ ಅನೇಕ ಬಿಜೆಪಿ ನಾಯಕರ ಬೆಂಬಲ ಬಹಿರಂಗವಾಗಿ ಸಿಕ್ಕಿರುವುದರಿಂದ ಅವರ ನಾಯಕತ್ವದ ಬಗ್ಗೆ ಪದೇ ಪದೇ ಪ್ರಶ್ನೆ ಮಾಡುತ್ತಿದ್ದ ಕೆಲವು ಮುಖಂಡರಿಗೆ ಸ್ಪಷ್ಟಸಂದೇಶ ರವಾನೆಯಾದಂತೆಯೂ ಆಗಿದೆ.

 ಬಿಎಸ್‌ವೈ ಅವರೇ ಸಿಎಂ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯನ್ನು ಅವರು ರಾಜೀನಾಮೆ ನೀಡುತ್ತಾರೆ ಅರ್ಥೈಸುವುದು ಬೇಡ. ನಮ್ಮದು ಶಿಸ್ತಿನ ಪಕ್ಷ ಎಂಬ ಸಂದೇಶವನ್ನಷ್ಟೇ ಅವರು ಪ್ರತಿಪಕ್ಷಗಳಿಗೆ ರವಾನಿಸಿದ್ದಾರೆ. ಅವರು ಮುಖ್ಯಮಂತ್ರಿಗಳಾಗಿಯೇ ಮುಂದುವರಿಯುತ್ತಾರೆ. ಈ ಬಗ್ಗೆ ಯಾವ ಗೊಂದಲ ಅಥವಾ ಅನುಮಾನ ಬೇಡ. ಬಿಜೆಪಿ ಕೇಡರ್‌ ಆಧಾರಿತ ಪಕ್ಷ. ಹೀಗಾಗಿ ಇಂಥ ವಿಷಯಗಳಿಗೆ ಹೆಚ್ಚು ಮಹತ್ವ ಕೊಡುವ ಪದ್ಧತಿ ನಮ್ಮಲ್ಲಿಲ್ಲ.

- ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

ಗಂಭೀರವಾಗಿ ಪರಿಗಣಿಸಬೇಕಿಲ್ಲ

ಮಾಧ್ಯಮದವರ ಪ್ರಶ್ನೆಗೆ ಯಡಿಯೂರಪ್ಪ ಹಾಗೆ ಹೇಳಿದ್ದಾರೆ. ಇದು ಸಾಂದರ್ಭಿಕವಾಗಿ ನೀಡಿದ ಹೇಳಿಕೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಹೈಕಮಾಂಡ್‌ಗೆ ಯಡಿಯೂರಪ್ಪನವರ ಮೇಲೆ ವಿಶ್ವಾಸವಿದೆ. ಕೊರೋನಾ ನಿರ್ವಹಣೆಯಲ್ಲಿ ಸಾಕಷ್ಟುಶ್ರಮಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ.

- ಗೋವಿಂದ ಎಂ. ಕಾರಜೋಳ, ಉಪಮುಖ್ಯಮಂತ್ರಿ