Asianet Suvarna News Asianet Suvarna News

ದೆಹಲಿಯಲ್ಲಿ ಮಂಡ್ಯ ಕಾಂಗ್ರೆಸ್‌ ಟಿಕೆಟ್‌ ಸರ್ಕಸ್‌: ಖರ್ಗೆ ಬೆಂಬಿಡದ ಮೂಲ ಕಾಂಗ್ರೆಸ್ಸಿಗರು

ಚುನಾವಣೆ ಸಮೀಪಿಸುತ್ತಿದ್ದಂತೆ ದೆಹಲಿಯಲ್ಲಿ ಮಂಡ್ಯ ಕಾಂಗ್ರೆಸ್‌ ಟಿಕೆಟ್‌ ಸರ್ಕಸ್‌ ಜೋರಾಗಿದೆ. ಜಿಲ್ಲಾ ನಾಯಕರೊಂದಿಗೆ ಮುನಿಸು ಪ್ರದರ್ಶಿಸುತ್ತಿರುವಂತೆ ಕಂಡು ಬರುತ್ತಿರುವ ಮೂಲ ಕಾಂಗ್ರೆಸ್ಸಿಗರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನು ಹತ್ತಿದ್ದಾರೆ. 

Karnataka Assembly Election 2023 Mandya Congress ticket circus in Delhi gvd
Author
First Published Mar 17, 2023, 10:02 PM IST

ಮಂಡ್ಯ (ಮಾ.17): ಚುನಾವಣೆ ಸಮೀಪಿಸುತ್ತಿದ್ದಂತೆ ದೆಹಲಿಯಲ್ಲಿ ಮಂಡ್ಯ ಕಾಂಗ್ರೆಸ್‌ ಟಿಕೆಟ್‌ ಸರ್ಕಸ್‌ ಜೋರಾಗಿದೆ. ಜಿಲ್ಲಾ ನಾಯಕರೊಂದಿಗೆ ಮುನಿಸು ಪ್ರದರ್ಶಿಸುತ್ತಿರುವಂತೆ ಕಂಡು ಬರುತ್ತಿರುವ ಮೂಲ ಕಾಂಗ್ರೆಸ್ಸಿಗರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನು ಹತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಎರಡು ಬಾರಿ ಖರ್ಗೆ ಅವರನ್ನು ಭೇಟಿಯಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಇದೀಗ ವಲಸಿಗರಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ನೀಡದಂತೆ ದೆಹಲಿಗೆ ತೆರಳಿ ಖರ್ಗೆ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.

ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ನೇತೃತ್ವದಲ್ಲಿ ಎಂ.ಎಸ್‌.ಆತ್ಮಾನಂದ, ಎಚ್‌.ಬಿ.ರಾಮು, ಎಂ.ಡಿ.ಜಯರಾಂ, ಬಿ.ಸಿ.ಶಿವಾನಂದ, ಶಿವಲಿಂಗೇಗೌಡ, ಹಾಲಹಳ್ಳಿ ರಾಮಲಿಂಗಯ್ಯ, ಸಿದ್ದಾರೂಢ ಸತೀಶ್‌, ಮಹಮ್ಮದ್‌ ಜಬೀವುಲ್ಲಾ, ಚಂದೂಪುರ ಪಾಪಣ್ಣ ಅವರು ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ಮಾತನಾಡಿ, ಅಂಬರೀಶ್‌ ಇದ್ದ ಸಮಯದಿಂದಲೂ ನಾವು ಸುಮಾರು ಎರಡು ದಶಕಗಳ ಕಾಲ ಕಾಂಗ್ರೆಸ್‌ ಬಲವರ್ಧನೆಗೆ ಶ್ರಮಿಸಿದ್ದೇವೆ. ಅಂಬರೀಶ್‌ ಚುನಾವಣೆಗಳಲ್ಲಿ ಗೆಲುವಿಗೆ ಸಾಕಷ್ಟುಶ್ರಮ ವಹಿಸಿದ್ದೇವೆ. 

ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ಬಿಜೆಪಿ ಸಮಾವೇಶ ಮಾಡುವುದಿಲ್ಲ: ನಳಿನ್‌ ಕುಮಾರ್ ಕಟೀಲ್

ಭಾರತ್‌ ಜೋಡೋ, ಮೇಕೆದಾಟು ಪಾದಯಾತ್ರೆ ಸೇರಿದಂತೆ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಟಿಕೆಟ್‌ ನೀಡುವ ಸಮಯದಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂದರು. ಕೆಲವರು ಪಕ್ಷಕ್ಕೆ ಇತ್ತೀಚೆಗಷ್ಟೇ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಟಿಕೆಟ್‌ಗಾಗಿ ತೀವ್ರ ಒತ್ತಡ ಹೇರುತ್ತಿದ್ದಾರೆ. ಅವರು ಮೊದಲ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷವನ್ನು ಬಲವರ್ಧನೆಗೊಳಿಸಲಿ. ಆನಂತರ ಪಕ್ಷದ ಟಿಕೆಟ್‌ ಕೊಡುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲವೆಂದು ಖರ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದ 16 ಮಂದಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಕೆಲವರನ್ನು ಹೊರತುಪಡಿಸಿ 10 ಮಂದಿ ಆಕಾಂಕ್ಷಿಗಳು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಯಾರಿಗೇ ಟಿಕೆಟ್‌ ಕೊಟ್ಟರೂ ನಮ್ಮ ಅಭ್ಯಂತರವೇನಿಲ್ಲ. ಅವರ ಪರವಾಗಿ ದುಡಿದು ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ. ರವಿಕುಮಾರ್‌ ಗಣಿಗ ಅವರು ಕಳೆದ ಚುನಾವಣೆಯಲ್ಲಿ ಸೋತಿದ್ದಾರೆ. ಅವರಿಗೆ ಮತ್ತೆ ಟಿಕೆಟ್‌ ಕೊಟ್ಟರೂ ನಮ್ಮ ಆಕ್ಷೇಪವಿಲ್ಲ. ಅವರ ಪರವಾಗಿಯೂ ನಿಲ್ಲುತ್ತೇವೆ. ಆತ್ಮಾನಂದ ಅವರು ಎರಡು ಬಾರಿ ಶಾಸಕರಾಗಿ, ಸಚಿವರಾಗಿದ್ದವರು. ಅಂಬರೀಶ್‌ ಆಪ್ತನಾಗಿ ನಾನು ಕಳೆದ 25 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಹೀಗೆ ಮೂಲ ಕಾಂಗ್ರೆಸ್ಸಿಗರಲ್ಲಿ ಯಾರಾದರೊಬ್ಬರಿಗೆ ಟಿಕೆಟ್‌ ಕೊಟ್ಟರೆ ಒಗ್ಗಟ್ಟಿನಿಂದ ದುಡಿದು ಪಕ್ಷವನ್ನು ಗೆಲ್ಲಿಸುವುದಾಗಿ ಖರ್ಗೆಗೆ ತಿಳಿಸಿದರು.

ಮೂಲ ಕಾಂಗ್ರೆಸ್ಸಿಗರ ಅಹವಾಲು ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ, ಮಂಡ್ಯ ಕ್ಷೇತ್ರದ ವಿಚಾರ ಸ್ಕ್ರೀನಿಂಗ್‌ ಕಮಿಟಿ ಮುಂದೆ ಬಂದಾಗ ವಾಸ್ತವ ವಿಚಾರವನ್ನು ಪ್ರಬಲವಾಗಿ ಮಂಡಿಸುತ್ತೇನೆ. ಮೂಲ ಕಾಂಗ್ರೆಸ್ಸಿಗರನ್ನು ಯಾವ ಕಾರಣಕ್ಕೂ ಕಡೆಗಣಿಸಲಾಗುವುದಿಲ್ಲ. ಈ ಚುನಾವಣೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ವೈಯಕ್ತಿಕ ಪ್ರತಿಷ್ಠೆಗಿಂತ ಅಭ್ಯರ್ಥಿಯ ಗೆಲುವು ಮುಖ್ಯವಾಗಿರುತ್ತದೆ. ಎಲ್ಲರೂ ಸೇರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಸೂಚಿಸಿದರು.

ಬಳ್ಳಾರಿಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುವುದರಿಂದ ನನಗೆ ಮತ್ತಷ್ಟು ಆನೆ ಬಲ: ಶಾಸಕ ಸೋಮಶೇಖರ್ ರೆಡ್ಡಿ

ಸಿದ್ದರಾಮಯ್ಯ, ಡಿಕೆಶಿ ಭೇಟಿಗೆ ಕಾದಿರುವ ಮುಖಂಡರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಮೂಲ ಕಾಂಗ್ರೆಸ್ಸಿಗರು ನಂತರ ನವ ದೆಹಲಿಗೆ ಗುರುವಾರ ಸಂಜೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನೂ ಭೇಟಿ ಮಾಡಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರೂ ದೆಹಲಿಗೆ ಬರುತ್ತಿರುವುದರಿಂದ ಅವರಿಗೂ ವಿಷಯ ತಿಳಿಸಿ ತೆರಳುವಂತೆ ಮಲ್ಲಿಕಾರ್ಜುನ ಖರ್ಗೆ ನೀಡಿದ ಸಲಹೆ ಮೇರೆಗೆ ಅವರ ಭೇಟಿ ಮಾಡಿಕೊಂಡು ಬರಲು ನಿರ್ಧರಿಸಿ ಅಲ್ಲೇ ಉಳಿದುಕೊಂಡಿದ್ದಾರೆ.

Follow Us:
Download App:
  • android
  • ios