'ಅತೀಕ್ ಅಹ್ಮದ್ ನನ್ನ ಸೋದರ..' ಎಂದಿದ್ದ ವ್ಯಕ್ತಿ ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ನ ಸ್ಟಾರ್ ಪ್ರಚಾರಕ!
ಇತ್ತೀಚೆಗೆ ದುಷ್ಕರ್ಮಿಗಳಿಂದ ನಡುರಸ್ತೆಯಲ್ಲಿ ಹತನಾದ ಮಾಫಿಯಾ ಡಾನ್, ಆತೀಕ್ ಅಹ್ಮದ್ ನನ್ನ ಸಹೋದರ ಎಂದು ಹೇಳಿದ್ದ ವ್ಯಕ್ತಿಯನ್ನು ಕರ್ನಾಟಕ ಕಾಂಗ್ರೆಸ್ ಮುಂಬರುವ ವಿಧಾನಸಭೆ ಚುನಾವಣೆಗೆ ತನ್ನ ಸ್ಟಾರ್ ಪ್ರಚಾರಕನನ್ನಾಗಿ ನೇಮಿಸಿದೆ. ಬುಧವಾರ ಪ್ರಕಟಿಸಿದ ಪಟ್ಟಿಯಲ್ಲಿ ಆ ವ್ಯಕ್ತಿ ಸ್ಥಾನ ಪಡೆದಿದ್ದಾನೆ.
ಬೆಂಗಳೂರು (ಏ.20): ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಾಫಿಯಾ ಡಾನ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ನನ್ನು ನಡು ರಸ್ತೆಯಲ್ಲಿ ಪೊಲೀಸ್ ಭದ್ರತೆಯಲ್ಲಿಯೇ ದುಷ್ಕರ್ಮಿಗಳು ಹೊಡೆದುಹಾಕಿದ್ದರು. ಆದರೆ, ಈ ವಿಚಾರದ ರಾಜಕೀಯ ಮಾತ್ರ ನಿಲ್ಲುತ್ತಿಲ್ಲ. ಬುಧವಾರವಷ್ಟೇ ಉತ್ತರ ಪ್ರದೇಶ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜ್ಕುಮಾರ್ ಸಿಂಗ್, ಅತೀಕ್ ಅಹ್ಮದ್ಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು. ಆತ ಹುತಾತ್ಮ ಎಂದು ಹೇಳಿದ್ದಲ್ಲದೆ, ಆತನ ಸಮಾಧಿಯ ಮೇಲೆ ರಾಷ್ಟ್ರಧ್ವಜವನ್ನು ಹೊದೆಸಿ ಬಂದು ಸುದ್ದಿಯಾಗಿದ್ದರು. ಈ ನಡುವೆ ಕಾಂಗ್ರೆಸ್ ಪಕ್ಷ ಕರ್ನಾಕಟ ವಿಧಾನಸಭೆ ಚುನಾವಣೆಗೆ ಬುಧವಾರ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪ್ರಕಟ ಮಾಡಿದೆ. ಇದರಲ್ಲಿ ಇರುವ ಒಬ್ಬ ವ್ಯಕ್ತಿ, ಹಿಂದೊಮ್ಮೆ ಅತೀಕ್ ಅಹ್ಮದ್ ನನ್ನ ಸಹೋದರನಿದ್ದಂತೆ ಹೇಳಿದ್ದರು. ಮಾಫಿಯಾ ಡಾನ್ ವಿರುದ್ಧ ಮೃದುಧೋರಣೆ ಹೊಂದಿದ್ದ ಹಾಗೂ ಅತನೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದ ವ್ಯಕ್ತಿಯನ್ನು ಕಾಂಗ್ರೆಸ್ ಚುನಾವಣೆಗೆ ಸ್ಟಾರ್ ಪ್ರಚಾರಕನನ್ನಾಗಿ ನೇಮಕ ಮಾಡಿದ್ದು ಬಿಜೆಪಿಗೆ ಅಸ್ತ್ರ ಸಿಕ್ಕಂತಾಗಿದೆ. ಇದೇ ವಿಚಾರದಲ್ಲಿ ಬಿಜೆಪಿಯ ಹಿರಿಯ ನಾಯಕಿ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ಗೆ ಮೊದಲಿನಿಂದಲೂ ಮಾಫಿಯಾ ಜೊತೆ ಲಿಂಕ್ ಇದೆ. ಈಗ ಗ್ಯಾಂಗ್ಸ್ಟರ್ಗಳಾದ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ನನ್ನ ಸ್ನೇಹಿತರು ಎಂದಿದ್ದ ಇಮ್ರಾನ್ ಪ್ರತಾಪ್ಗರ್ಹಿಯನ್ನು ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಟಾರ್ ಪ್ರಚಾರಕನನ್ನಾಗಿ ನೇಮಕ ಮಾಡಿದೆ. ಇಮ್ರಾನ್ ಪ್ರತಾಪ್ಗರ್ಹಿ, ಅತೀಕ್ ನನ್ನ ಸಹೋದರ ಎಂದೇ ಹೇಳುತ್ತಿದ್ದ. ಇಂಥ ವ್ಯಕ್ತಿಯನ್ನು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸ್ಟಾರ್ ಪ್ರಚಾರಕನನ್ನಾಗಿ ಪ್ರಕಟಿಸಿದೆ. ಕ್ರಿಮಿನಲ್ಗಳು ಹಾಗೂ ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎನ್ನುವುದು ಇದರಿಂದ ಗೊತ್ತಾಗುತ್ತಿದೆ' ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ಖಚಿತವಾಯ್ತು.. ಕಾರ್ಕಳದ ಕೃಷ್ಣಶಿಲೆಯಲ್ಲಿ ನಿರ್ಮಾಣವಾಗಲಿದೆ ಅಯೋಧ್ಯೆ ರಾಮನ ಮೂರ್ತಿ!
ಅತೀಕ್ ನನ್ನ ಗುರು ಎನ್ನುತ್ತಿದ್ದ ಇಮ್ರಾನ್: ರಾಜ್ಯಸಭಾ ಸಂಸದನಾಗಿರುವ ಇಮ್ರಾನ್ ಪ್ರತಾಪ್ಗರ್ಹಿ, ಅತೀಕ್ ಅಹ್ಮದ್ನನ್ನು ತನ್ನ ಗುರು ಹಾಗೂ ಮೆಂಟರ್ ಎಂದು ಹೇಳುತ್ತಿದ್ದ. ಅದಲ್ಲದೆ, ನನ್ನ ಸೋದರ ಎಂದೂ ಟ್ವೀಟ್ ಪೋಸ್ಟ್ ಮಾಡಿದ್ದ. ಕಾಂಗ್ರೆಸ್ ಇಂಥ ವ್ಯಕ್ತಿಯನ್ನು ಮಹಾರಾಷ್ಟ್ರದಿಂದ ರಾಜ್ಯಸಭಾ ಸಂಸದನನ್ನಾಗಿ ಮಾಡಿತು. ಈಗ ಇಮ್ರಾನ್ ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ. ಇಲ್ಲಿ ಆತ ಹಿಂದಿ ವಿರೋಧಿ ಭಾಷಣ ಮಾಡಲಿದ್ದಾನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ ಪುತ್ರಿ 11 ವರ್ಷದ ಆರಾಧ್ಯ ಬಚ್ಛನ್, ಏನ್ ವಿಷ್ಯ?
ಮುಸ್ಲಿಮರು ಯಾರಿಗೂ ತಲೆ ಬಾಗುವವರಲ್ಲ, ತಲೆ ಕತ್ತರಿಸುವವರು ಎಂದು ಇಮ್ರಾನ್ ಹಿಂದೊಮ್ಮೆ ಭಾಷಣದಲ್ಲಿ ಹೇಳಿದ್ದ. ಇಮ್ರಾನ್ ತನ್ನ ಭಾಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅತೀಕ್ ಅಹ್ಮದ್ನೊಂದಿಗೆ ಈತನ ಸಂಬಂಧವಿದೆ. ಪ್ರತಿದಿನ ಈತ ಕರೆ ಮಾಡುತ್ತಿದ್ದ. ಅತೀಕ್ ಕುರಿತಾಗಿ ಕವನವನ್ನೂ ಬರೆಯುತ್ತಾರೆ. ಇಂಥ ಇಮ್ರಾನ್ ಪ್ರತಾಪ್ಗರ್ಹಿಯನ್ನು ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇರಿಸಿದೆ. ಇಡೀ ಕಾಂಗ್ರೆಸ್ನ ಕೈ ಕ್ರಿಮಿನಲ್ಗಳ ಹಿಡಿತದಲ್ಲಿದೆ. ಕಾಂಗ್ರೆಸ್ನ ಕೈ ದೇಶದ್ರೋಹಿಗಳ ಜೊತೆಗಿದೆ.ಇಮ್ರಾನ್ ಪ್ರತಾಪ್ಗರ್ಹಿಯಂಥ ವ್ಯಕ್ತಿ ದೇಶಾದ್ಯಂತ ಸಂಚರಿಸಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದಿದ್ದಾರೆ.