ಪ್ರಧಾನಿ ನರೇಂದ್ರ ಮೋದಿ ನಿರಂಕುಶ ಪ್ರಭುತ್ವದಲ್ಲಿ ಪ್ರಾಮಾಣಿಕತೆಗೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಆಮ್‌ ಆದ್ಮಿ ಪಕ್ಷದ (ಆಪ್‌) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ. 

ಬೆಂಗಳೂರು (ಅ.13): ಪ್ರಧಾನಿ ನರೇಂದ್ರ ಮೋದಿ ನಿರಂಕುಶ ಪ್ರಭುತ್ವದಲ್ಲಿ ಪ್ರಾಮಾಣಿಕತೆಗೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಆಮ್‌ ಆದ್ಮಿ ಪಕ್ಷದ (ಆಪ್‌) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇಂಡಿಯಾ' ಒಕ್ಕೂಟದ ಪ್ರಹಾರದಿಂದ ಕಂಗಾಲಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಡಿ, ಸಿಬಿಐ, ಐಟಿ ದಾಳಿಯ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಸಾಕ್ಷ್ಯಾಧಾರಗಳಿಲ್ಲದೆ ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರನ್ನು ಬಂಧಿಸಿರುವುದು ಅಕ್ಷಮ್ಯ. ಇದು ಪ್ರಜಾಪ್ರಭುತ್ವ ದ ಕಗ್ಗೋಲೆ. ಸಂವಿಧಾನ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬರುವ ಐದು ವಿಧಾನಸಭೆ ಚುನಾವಣೆಗಳು ಸೇರಿದಂತೆ 2024ರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಶುರುವಾಗಿದೆ. ಅದಕ್ಕಾಗಿಯೇ ಸರ್ವಾಧಿಕಾರದ ಅಮಲಿನಲ್ಲಿ ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವರು ಎಷ್ಟೇ ದಾಳಿ ನಡೆಸಿದರೂ ನಾವು ಹೆದರುವುದಿಲ್ಲ. ಭೀತಿ ಎಂಬುದು ಕೇವಲ ತಪ್ಪಿತಸ್ಥರ ಎದೆಯಲ್ಲಿರುತ್ತದೆ. ನಮ್ಮ ಎದೆಯಲ್ಲಿ ಹೋರಾಟದ ಕಿಚ್ಚಿದೆ ಎಂದರು.

ಕುರುಕ್ಷೇತ್ರವನ್ನೇ ಬರೆದ ವ್ಯಕ್ತಿ ಇವರು: ಮುನಿರತ್ನಗೆ ತಿರುಗೇಟು ಕೊಟ್ಟ ಸಂಸದ ಸುರೇಶ್

ನಡೆದಿದೆ ಎನ್ನಲಾಗುತ್ತಿರುವ ಅಬಕಾರಿ ಹಗರಣದ ತನಿಖೆಯನ್ನು ಸುಮಾರು 15 ತಿಂಗಳಿಂದ ನಡೆಸಲಾಗುತ್ತಿದೆ. ನೂರಾರು ಅಧಿಕಾರಿಗಳು ಹಗಲು ರಾತ್ರಿ ಶೋಧ ನಡೆಸುತ್ತಿದ್ದಾರೆ. ಸುಮಾರು ಒಂದು ಸಾವಿರ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಮುಖಂಡರಾದ ಸತ್ಯೇಂದ್ರ ಜೈನ್‌, ಮನೀಶ್‌ ಸಿಸೋಡಿಯಾ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಕಸ್ಟಡಿಯಲ್ಲಿಟ್ಟು ಕಿರುಕುಳ ನೀಡಿದ್ದಾರೆ. ಸಲ್ಲದ ಆರೋಪಗಳನ್ನು ಮಾಡಿ ಹಿಂಸಿಸಿದ್ದಾರೆ. ಆದರೆ ಇದುವರೆಗೆ ಒಂದೇ ಒಂದು ಪೈಸೆ ಭ್ರಷ್ಟಾಚಾರದ ಹಣವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಚಂದ್ರು ತಿಳಿಸಿದರು.

ಪ್ರಧಾನಿ ಸೋಲಿಸಬೇಕೆಂಬ ಇಂಡಿಯಾ ಒಕ್ಕೂಟ ಹಮಾಸ್ ಉಗ್ರರಿಗೆ ಬೆಂಬಲ ನೀಡ್ತಿದೆ: ಚಕ್ರವರ್ತಿ ಸೂಲಿಬೆಲಿ

ಸಂಜಯ್‌ ಸಿಂಗ್‌ ಅವರ ನಿವಾಸದಲ್ಲೂ ಒಂದು ರುಪಾಯಿ ಸಿಕ್ಕಿಲ್ಲ. ನಡೆದಿರದ ಭ್ರಷ್ಟಾಚಾರವನ್ನು ನಡೆದಿದೆ ಎಂದು ಆರೋಪ ಹೊರಿಸಿ ಎಷ್ಟು ಹುಡುಕಿದರೆ ಏನು ಪ್ರಯೋಜನ? ಇದೀಗ ಮೋದಿ ಹೀನಾಯ ಸೋಲು ಅನುಭವಿಸುವುದು ಗ್ಯಾರಂಟಿ ಎಂಬಂತಾಗಿದೆ. ಹಾಗಾಗಿ ವಿರೋಧ ಪಕ್ಷಗಳ ನಾಯಕರಿಗೆ ಇಲ್ಲಸಲ್ಲದ ಕಿರುಕುಳ ಕೊಟ್ಟಾದರೂ ಮುಂಬರುವ ಚುನಾವಣೆಯಲ್ಲಿ ಅಧಿಕಾರ ಹಿಡಿಯಬಹುದೇನೋ ಎಂಬ ಪ್ರಯತ್ನದಲ್ಲಿದ್ದಾರೆ. ಇದು ಮೋದಿ ಅವರ ಅಸಹಾಯಕತೆ, ಭೀತಿಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.