Karnataka Assembly Elections 2023: ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ನಡ್ಡಾ ರಣತಂತ್ರ
ರಾಜ್ಯ ಸಮಿತಿಯಲ್ಲಿ 14 ಮಂದಿ ಇದ್ದು, ಒಟ್ಟು ಚುನಾವಣೆ ನಿರ್ವಹಣೆಗೆ 32 ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳ ಸಭೆಯನ್ನು ನಡ್ಡಾ ಅವರು ನಡೆಸಿದ್ದಾರೆ. ಒಂದೊಂದು ಸಮಿತಿ ಮಾಡಬೇಕಾದ ಜವಾಬ್ದಾರಿ, ಕರ್ತವ್ಯಗಳ ಬಗ್ಗೆ ತಿಳಿಸಿದ್ದಾರೆ: ಶೋಭಾ ಕರಂದ್ಲಾಜೆ
ಬೆಂಗಳೂರು(ಮಾ.19): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಮೊದಲ ಸಭೆ ನಡೆಯಿತು. ಈ ವೇಳೆ ಪಕ್ಷವನ್ನು ಗೆಲ್ಲಿಸಲು ರಣನೀತಿ ರೂಪಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು. ಶುಕ್ರವಾರ ಸಂಜೆ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿಯೂ ಆಗಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲಾದವರು ಪಾಲ್ಗೊಂಡಿದ್ದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ರಾಜ್ಯ ಸಮಿತಿಯಲ್ಲಿ 14 ಮಂದಿ ಇದ್ದು, ಒಟ್ಟು ಚುನಾವಣೆ ನಿರ್ವಹಣೆಗೆ 32 ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳ ಸಭೆಯನ್ನು ನಡ್ಡಾ ಅವರು ನಡೆಸಿದ್ದಾರೆ. ಒಂದೊಂದು ಸಮಿತಿ ಮಾಡಬೇಕಾದ ಜವಾಬ್ದಾರಿ, ಕರ್ತವ್ಯಗಳ ಬಗ್ಗೆ ತಿಳಿಸಿದ್ದಾರೆ. ದೇಶದ ಬೇರೆ ಬೇರೆ ಕಡೆ ನಮ್ಮ ಕಾರ್ಯ, ಅದರ ಯಶಸ್ಸಿನ ಕುರಿತು ಮಾಹಿತಿ ನೀಡಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕದ ಚುನಾವಣೆ ನಿರ್ವಹಿಸುವಂತೆ ಹೇಳಿದ್ದಾರೆ. ಕಾನೂನು ಪಾಲನೆ ಜತೆಗೆ ಚುನಾವಣೆ ಎದುರಿಸಲು ಸಲಹೆ ನೀಡಿದ್ದಾರೆ ಎಂದರು.
ರಾಹುಲ್ ಕರ್ನಾಟಕ ಪ್ರವಾಸ ಬಳಿಕ ಕಾಂಗ್ರೆಸ್ ಪಟ್ಟಿ ಬಿಡುಗಡೆ: ಡಿಕೆಶಿ
‘ನಡ್ಡಾ ಅವರ ಮಾರ್ಗದರ್ಶನದಂತೆ ಈ ಸಮಿತಿ ಕಾರ್ಯ ನಿರ್ವಹಿಸಲಿದೆ. ಬೂತ್ ಬಲಪಡಿಸುವುದು, ಪ್ರಚಾರ ಕಾರ್ಯ ಹೆಚ್ಚಳ, ಕರಪತ್ರ ಹಂಚಿ ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮನೆ ಮನೆಗೆ ತಿಳಿಸುವುದು, ಒಂದೆರಡು ಬಾರಿ ಜನರನ್ನು ಖುದ್ದಾಗಿ ಭೇಟಿ ಮಾಡಲು ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ನಡೆದು ಜನರನ್ನು ತಲುಪುತ್ತೇವೆ. ಅಲ್ಲದೇ, ಕಾನೂನಿನಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಲಾಗಿದೆ’ ಎಂದು ತಿಳಿಸಿದರು.