ಸಚಿವ ಸ್ಥಾನ ಸಿಗದಿದ್ದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೇಲೆ ಕೋಪಗೊಂಡಿರುವ ವಿಶ್ವನಾಥ್ ವಿರುದ್ಧ ಮತ್ತೆ ಜೆಡಿಎಸ್ ಶಾಸಕ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರ, (ಜ.13): ಅವರಿಗೆ ಗ್ರಾಮ ದೇವತೆ ಶಾಪ ಇದೆ. ನ್ಯಾಯ ದೇವತೆಯ ತೀರ್ಪಿದೆ. ಯಡಿಯೂರಪ್ಪ ಅವರಿಗೆ ಏನು ಮಾಡುವುದಕ್ಕಾಗುತ್ತದೆ? ಕಾನೂನಿಗಿಂತ ಅವರು ದೊಡ್ಡವರಾ? ಅದಕ್ಕೆ ಮಂತ್ರಿ ಸ್ಥಾನದಿಂದ ಕೈಬಿಟ್ಟಿದ್ದಾರೆ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಅವರು ಎಚ್‌.ವಿಶ್ವನಾಥ್‌ ಅವರನ್ನು ಕುಟುಕಿದರು.

Add Asianetnews Kannada as a Preferred SourcegooglePreferred

ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಇಷ್ಟ ಬಂದ ಹಾಗೆ ತೀರ್ಮಾನ ತೆಗೆದುಕೊಂಡು, ಜನತಾದಳದ ಕಾರ್ಯಕರ್ತರು, ನಾಯಕರು ಹಾಗೂ ಹುಣಸೂರು ಮತದಾರರನ್ನು ಮುಂಬೈಗೆ ಹೋಗಿ ಮಾರಾಟ ಮಾಡಿ ಬಂದು ಇವತ್ತು ಯಾಕೆ ಯಡಿಯೂರಪ್ಪ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತೀರಿ? ಹುಣಸೂರು ಅಭ್ಯರ್ಥಿ ಆಗಬೇಡ ಎಂದು ಅವರು ಹೇಳಿರಲಿಲ್ಲವೇ? ಈಗ ಮಾಡಿದ್ದುಣ್ಣೋ ಮಹರಾ' ಎಂದು ವಿಶ್ವನಾಥ್‌ ಹೆಸರು ಹೇಳದೆಯೇ ವ್ಯಂಗ್ಯವಾಡಿದರು.

ಕೃತಜ್ಞತೆ ಇಲ್ಲದ ಕಾರಣಕ್ಕೆ ಯಡಿಯೂರಪ್ಪಇವರನ್ನು ಮಂತ್ರಿ ಮಾಡಿಲ್ಲ: ವಿಶ್ವನಾಥ್‌ಗೆ ಟಾಂಗ್

ಮಂತ್ರಿ ಮಾಡದ ಯಡಿಯೂರಪ್ಪ ಅವರನ್ನು ಅವರ ಮನೆ ದೇವರು ಸಿದ್ಧಲಿಂಗೇಶ್ವರನೂ ಕ್ಷಮಿಸುವುದಿಲ್ಲ ಎಂಬ ವಿಶ್ವನಾಥ್‌ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಇವರನ್ನು ತಾಯಿ ಚಾಮುಂಡೇಶ್ವರಿ ಕ್ಷಮಿಸದೇ ಇರುವುದಕ್ಕೆ ಈ ಗತಿ ಬಂದಿದೆ ಎಂದರು.

ಮೊದಲು ಕಾಂಗ್ರೆಸ್‌ನವರು ಅವರನ್ನು ಮದುವೆಯಾಗಿದ್ದರು. 40 ವರ್ಷಗಳ ಬಳಿಕ ವಿಚ್ಛೇದನ ಆಯಿತು. ಅವರು, 'ಇದು ನಿಮಗೆ ಬೇಡ' ಎಂದು ನಮಗೆ ಹೇಳಿದ್ದರು. ಹಾಗಿದ್ದರೂ, ಇರಲಿ ನೋಡೋಣ ಎಂದು ನಾವು ಕೂಡಾವಳಿ ಮಾಡಿಕೊಂಡೆವು. ಬಿಜೆಪಿಯವರು ದಿನ ಲೆಕ್ಕದಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಅವರ ಪರಿಸ್ಥಿತಿ ಏನಾಗುತ್ತದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದೆ. ಇವತ್ತು ಅದೇ ರೀತಿ ಆಗಿದೆ ಎಂದು ಲೇವಡಿ ಮಾಡಿದರು.