ಹುಣಸೂರು ಉಪಚುನಾವಣೆಗೆ 2 ದಿನ ಇರುವಾಗಲೇ ಮತದಾರರಿಗೆ GTD ಪತ್ರ
ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಹುಣಸೂರು ಉಪಚುನಾವಣೆಯಲ್ಲಿ ಯಾರಿಗೂ ಬೆಂಬಲ ನೀಡಲ್ಲ. ನಾನು ಈ ಉಪ ಚುನಾವಣೆಯಲ್ಲಿ ತಟಸ್ಥನಾಗಿದ್ದೇನೆ ಎಂದು ಈಗಾಗಲೇ ಹೇಳಿದ್ದಾರೆ. ಇದರ ಮಧ್ಯೆ ಮತದಾನಕ್ಕೆ ಇನ್ನೇನು 2 ದಿನಗಳು ಬಾಕಿ ಇರುವಾಗಲೇ ಮತದಾರರಿಗೆ ಪತ್ರವೊಂದನ್ನು ಬರೆದಿದ್ದಾರೆ. ಹಾಗಾದ್ರೆ ಜಿಟಿಡಿ ಬರೆದ ಪತ್ರದಲ್ಲೇನಿದೆ..?ಈ ಕೆಳಗಿನಂತಿದೆ ನೋಡಿ...
ಮೈಸೂರು, [ಡಿ.03]: ಜೆಡಿಎಸ್ ನಿಂದ ದೂರವಾಗಿರುವ ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಹುಣಸೂರು ಉಪಚುಣಾವಣೆಯಲ್ಲಿ ಯಾರಿಗೂ ಬೆಂಬಲಿಸದೇ ಸೈಲೆಂಟ್ ಆಗಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಾಯಕರುಗಳು ತಮಗೆ ಬೆಂಬಲಿಸುವಂತೆ ಭೇಟಿ ಮಾಡಿ ಮನವಿ ಮಾಡಿದರೂ ಸಹ ಜಿಟಿಡಿ ಯಾರಿಗೂ ಸಪೋರ್ಟ್ ಮಾಡದೇ ತಟಸ್ಥರಾಗಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ.
ಶ್ರೀರಾಮುಲು ಭೇಟಿ ಬಳಿಕ ಜಿಟಿಡಿ ರಿಯಾಕ್ಷನ್: ಸಂಚಲನ ಮೂಡಿಸಿದ ಗೌಡ್ರ ಮಗ ಹರೀಶ್ ಮಾತು
ಆದ್ರೆ, ಮತ್ತೊಂದೆಡೆ ಮಾಜಿ ಸಚಿವ ಜಿಟಿ ದೇವೇಗೌಡ ಬಿಜೆಪಿ ಸೇರಲಿದ್ದಾರೆ. ಮಗನ ಭವಿಷ್ಯಕ್ಕಾಗಿ ಅವರು ಜೆಡಿಎಸ್ ತೊರೆಯುವ ಸಾಧ್ಯತೆಗಳು ಅಧಿಕವಿದೆ. ಈ ಹಿನ್ನೆಲೆಯಲ್ಲಿಯೇ ಅವರು ಜೆಡಿಎಸ್ ಕಾರ್ಯಚಟುವಟಿಕೆಗಳಿಂದ ದೂರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರೊಟ್ಟಿಗಿನ ಅವರ ಒಡನಾಟ ಹೆಚ್ಚಿದೆ ಎಂಬ ಊಹಾಪೋಹಾಗಳು ಹರಿದಾಡಿತ್ತಿವೆ.
ಅಷ್ಟೇ ಅಲ್ಲದೇ ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ ಅಂತೆಲ್ಲಾ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಇವೆಲ್ಲವುಗಳಿಗೆ ಸ್ಪಷ್ಟನೆ ನೀಡಲು ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮತದಾರರಿಗೆ ಪತ್ರ ಬರೆದಿದ್ದಾರೆ. ಅದು ಈ ಕೆಳಗಿನಂತಿದೆ ಓದಿ...
ಸನ್ಮಾನ್ಯ ಹುಣಸೂರಿನ ಮತದಾರರೇ..
ನಾನು ಈ ಉಪ ಚುನಾವಣೆಯಲ್ಲಿ ರಾಜಕೀಯವಾಗಿ ತಟಸ್ಥನಾಗಿದ್ದಾನೆ. ಯಾವ ಪಕ್ಷದ ಅಭ್ಯರ್ಥಿ ಪರವೂ ಮತ ಕೇಳಿಲ್ಲ. ಯಾವ ಅಭ್ಯರ್ಥಿ ಪರವೂ ಒಲವು ತೋರಿಸಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ನಾನು ಬಿಜೆಪಿ ಅಭ್ಯರ್ಥಿ ಗೆ ಬೆಂಬಲ ಸೂಚಿಸಿದ್ದೇನೆ ಎಂಬ ಪೋಸ್ಟರ್ಗಳು ಹರಿದಾಡುತ್ತಿವೆ. ಇದು ಸತ್ಯಕ್ಕೆ ದೂರವಾದ ವಿಚಾರ.
ಇಂತಹ ಸುದ್ದಿ ಸೃಷ್ಟಿಸಿದವರ ವಿರುದ್ದ ಹಾಗೂ ಇಂತಹ ಸುದ್ದಿ ಹರಡುತ್ತಿರುವವರ ವಿರುದ್ದ ಕ್ರಮಕೈಗೊಳ್ಳಿ ಎಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ.
ಕಿಡಿಗೇಡಿಗಳು ಸೃಷ್ಟಿಸಿರುವ ಇಂತಹ ಸುಳ್ಳು ಸುದ್ದಿಗೆ ಮಾನ್ಯ ಮತದಾರರು ಕಿವಿಗೊಡಬಾರದೆಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ.
ಇಂತಿ ನಿಮ್ಮ ವಿಶ್ವಾಸಿ
ಜಿ.ಟಿ. ದೇವೇಗೌಡ