Asianet Suvarna News Asianet Suvarna News

Karnataka Politics: ತೆನೆ ಇಳಿಸಿ ಕಾಂಗ್ರೆಸ್‌ನತ್ತ ಜೆಡಿಎಸ್‌ ನಾಯಕನ ಚಿತ್ತ?

*  ಕಾಂಗ್ರೆಸ್‌ ಜತೆಗೆ ಮಾತುಕತೆ ನಡೆಸಿರುವ ಮಾಜಿ ಶಾಸಕ
*  ಉತ್ತರ ಕರ್ನಾಟಕದ ಮತ್ತೊಂದು ದಳ ಉದುರುತ್ತಿದೆ?
*  ಕಾಂಗ್ರೆಸ್‌ ಪರ ಪ್ರಚಾರ ಕೈಗೊಂಡಿದ್ದ ಕೋನರಡ್ಡಿ
 

JDS Leader NH Konareddy May Join Congress grg
Author
Bengaluru, First Published Dec 12, 2021, 8:35 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಡಿ.12):  ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ(NH Konareddy) ಚಿತ್ತ ಇದೀಗ ಕಾಂಗ್ರೆಸ್‌ನತ್ತ(Congress) ವಾಲಿದೆ. ಶೀಘ್ರದಲ್ಲೇ ತೆನೆಯ ಹೊರೆ ಇಳಿಸಿ ಕೈ ಹಿಡಿಯಲಿದ್ದಾರೆಯೇ? ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ಸಿಗರೊಂದಿಗೆ ಕೋನರಡ್ಡಿ ಒಡನಾಟ, ಅದರತ್ತ ತೋರುತ್ತಿರುವ ಒಲವು ಇಂತಹ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಉತ್ತರ ಕರ್ನಾಟಕದಲ್ಲಿ(North Karnataka) ಅಲ್ಪಸ್ವಲ್ಪ ಜೆಡಿಎಸ್‌(JDS) ಉಸಿರಾಡುತ್ತಿದೆ ಎಂದರೆ ಎನ್‌.ಎಚ್‌. ಕೋನರಡ್ಡಿ ಪಾತ್ರ ಅಲ್ಲಗೆಳೆಯುವಂತಿಲ್ಲ. ಆದರೆ ಇವರಿಗೆ ಸಾಥ್‌ ಕೊಡುವವರೇ ಯಾರೂ ಇಲ್ಲದಂತಾಗಿದೆ. ಅತ್ತ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಬರುತ್ತಿಲ್ಲ. ಇತ್ತ ಪಕ್ಷ ಸಂಘಟನೆಯೂ ಆಗುತ್ತಿಲ್ಲ. ಇಲ್ಲಿದ್ದ ನಾಯಕರೆಲ್ಲ ಬಿಜೆಪಿ(BJP), ಕಾಂಗ್ರೆಸ್‌ನತ್ತ ಹೋಗಿದ್ದಾರೆ. ಇಲ್ಲಿದ್ದರೆ ತಮಗೆ ಭವಿಷ್ಯವಿಲ್ಲ ಎಂದುಕೊಂಡು ಇದೀಗ ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದಾರೆ ಕೋನರಡ್ಡಿ.

Karnataka Politics: ದಳಪತಿಗಳಿಗೆ ಮತ್ತೊಂದು ಆಘಾತ: ಕಾಂಗ್ರೆಸ್‌ ಸೇರ್ತಾರಾ ಜೆಡಿಎಸ್‌ ನಾಯಕ?

ಕಳಸಾ-ಬಂಡೂರಿ(Kalasa Banduri) ಹೋರಾಟದ ಮೂಲಕ ರಾಜಕೀಯ(Politics) ಪ್ರವೇಶ ಮಾಡಿದವರು ಕೋನರಡ್ಡಿ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೊಂದಿಗೆ ನಿರಂತರವಾಗಿ ಮಹದಾಯಿಗಾಗಿ(Mahadayi) ಹೋರಾಟ ನಡೆಸಿದರೂ ಬೊಮ್ಮಾಯಿ ಅವರೊಂದಿಗೆ ಬಿಜೆಪಿಗೆ ಹೋದವರಲ್ಲ. ಅದೇ ರೀತಿ ಕಾಂಗ್ರೆಸ್‌ನೊಂದಿಗೆ ಅಂತರ ಕಾಯ್ದುಕೊಂಡವರು. ಜಾತ್ಯತೀತ ಜನತಾದಳದೊಂದಿಗೆ ಗುರುತಿಸಿಕೊಂಡು ಹಂತ-ಹಂತವಾಗಿ ಮೇಲೆ ಬಂದವರು. ಒಂದು ಬಾರಿ ಶಾಸಕರಾಗಿ(MLA), ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ(JDS-Congress Coalition Government) ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ(Political Secretary) ಕೆಲಸ ಮಾಡಿದವರು.

ಉತ್ತರ ಕರ್ನಾಟಕದಲ್ಲಿ ಎಷ್ಟೇ ಕಷ್ಟಪಟ್ಟರೂ ಪಕ್ಷ ಸಂಘಟನೆಯೇ ಆಗುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಪಕ್ಷ ಮಾಡಲಿಲ್ಲ. ಇಲ್ಲೇ ಇದ್ದರೆ ತಮಗೆ ಭವಿಷ್ಯವಿಲ್ಲ. ಚುನಾವಣೆ(Election) ಸಮೀಪವಿದ್ದಾಗ ಪಕ್ಷ ತೊರೆದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಅದರ ಬದಲಿಗೆ ಈಗಲೇ ಹೋಗುವ ಮೂಲಕ ಭವಿಷ್ಯ ಭದ್ರಪಡಿಸಿಕೊಳ್ಳಬಹುದು ಎಂಬ ಇರಾದೆ ಕೋನರಡ್ಡಿ ಅವರದು.
ಹಾಗಂತ ಈಗಲೇ ಕಾಂಗ್ರೆಸ್‌ಗೆ ಹೋಗಲು ತಯಾರಿ ನಡೆಸಿದ್ದಾರೆ ಅಂತೇನೂ ಅಲ್ಲ. ಕಳೆದ ಐದಾರು ತಿಂಗಳಿಂದಲೇ ಈ ಬಗ್ಗೆ ಗುಸು ಗುಸು ನಡೆದೇ ಇತ್ತು. ಇದಕ್ಕೆ ಪುಷ್ಠಿ ನೀಡಿದಂತೆ ಇದೀಗ ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಹೈಕಮಾಂಡ್‌ ನಿರ್ಧಾರಕ್ಕೂ ಕಾಯದೇ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ(Saleem Ahmed) ಪರವಾಗಿ ಪ್ರಚಾರ(Campaign) ಶುರು ಹಚ್ಚಿಕೊಂಡವರು ಕೋನರಡ್ಡಿ. ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಶಾಲು ಕೂಡ ಹೊದ್ದುಕೊಂಡರು.

ಮಾತುಕತೆ:

ಕಾಂಗ್ರೆಸ್‌ ಸೇರುವ ಕುರಿತಂತೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಜತೆ ಕೂಡ ಒಂದೆರಡು ಬಾರಿ ಮಾತುಕತೆಯಾಗಿದೆಯಂತೆ. ನವಲಗುಂದ(Navalgund) ಟಿಕೆಟ್‌ ಕೊಡುವ ಬಗ್ಗೆ ಚರ್ಚೆ ಕೂಡ ನಡೆದಿದೆಯಂತೆ. ಈ ವಿಷಯ ಕೇಳಿದರೆ ಕೋನರಡ್ಡಿ ಇದನ್ನು ತಳ್ಳಿ ಹಾಕುತ್ತಿಲ್ಲ. ಪರಿಷತ್‌ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್‌ ಸೇರ್ಪಡೆಯ ಮುಹೂರ್ತ ಫಿಕ್ಸ್‌ ಆಗಬಹುದು. ಒಂದು ವೇಳೆ ಇದು ಸತ್ಯವಾದರೆ ಜೆಡಿಎಸ್‌ಗೆ ಮತ್ತೊಂದು ಆಘಾತವಾಗಲಿದೆ.

ಉತ್ತರ ಕರ್ನಾಟಕದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆಯಾ ಜೆಡಿಎಸ್‌..?

ಸದ್ಯ ಜೆಡಿಎಸ್‌ನಲ್ಲಿದ್ದೇನೆ. ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿದ್ದೇನೆ. ಪಕ್ಷ ಬಿಡುವ ಕುರಿತು ನಿರ್ಧಾರ ಕೈಗೊಂಡಿಲ್ಲ. ಬೆಂಬಲಿಗರೊಂದಿಗೆ ಚರ್ಚಿಸಿ ಒಂದೆರಡು ತಿಂಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ ಅಂತ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ತಿಳಿಸಿದ್ದಾರೆ.  

ಬಿಜೆಪಿ-ಜೆಡಿಎಸ್‌ ಮೈತ್ರಿ ಚರ್ಚೆ ನಡುವೆಯೇ ಕಾಂಗ್ರೆಸ್‌ ಪರ ಕೋನರಡ್ಡಿ ಪ್ರಚಾರ

ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆ ಬಿಜೆಪಿ- ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಬಿರುಸಿನ ಚರ್ಚೆಗಳು ನಡೆದಿರುವ ಮಧ್ಯೆಯೇ ಎನ್‌.ಎಚ್‌.ಕೋನರಡ್ಡಿ ಕಾಂಗ್ರೆಸ್‌ ಪರ ಪ್ರಚಾರಕ್ಕಿಳಿದಿದ್ದರು. ಅವಿಭಜಿತ ಧಾರವಾಡ(Dharwad) ಜಿಲ್ಲೆಯಲ್ಲಿ ಪರಿಷತ್‌ ಚುನಾವಣೆಯಲ್ಲಿ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ ಪರವಾಗಿ ಪ್ರಚಾರ ಮಾಡಿದ್ದರು.
 

Follow Us:
Download App:
  • android
  • ios