ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೋಲಾರ ಸುರಕ್ಷಿತ ಕ್ಷೇತ್ರ ಅಲ್ಲ. ಕೋಲಾರದಲ್ಲಿ ಪಕ್ಷದವರೇ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದ ಯಡ್ರಾಮಿಯಲ್ಲಿ ಅವರು ಮಾತನಾಡಿದರು. 

ಕಲಬುರಗಿ (ಜ.14): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೋಲಾರ ಸುರಕ್ಷಿತ ಕ್ಷೇತ್ರ ಅಲ್ಲ. ಕೋಲಾರದಲ್ಲಿ ಪಕ್ಷದವರೇ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದ ಯಡ್ರಾಮಿಯಲ್ಲಿ ಅವರು ಮಾತನಾಡಿದರು. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯಗೆ ಕೋಲಾರ ಸೇಫ್‌ ಅಲ್ಲ. ಅವರಿಗೆ ಅಲ್ಲಿ ನಿಲ್ಲುವಂತೆ ಯಾರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ. ಅವರನ್ನು ಆ ದೇವರೇ ಕಾಪಾಡಬೇಕು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಲಾರದಲ್ಲಿ ಪಕ್ಷದವರೇ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ. ನಾನು ಕೋಲಾರದಲ್ಲಿ ಸುತ್ತಾಡಿ ಜನರ ಭಾವನೆ ತಿಳಿದುಕೊಂಡಿದ್ದೇನೆ. ಕೋಲಾರದಲ್ಲಿರುವ ಆ ಪಕ್ಷದ ನಾಯಕರಿಗೆ ಮತ ಪಡೆಯುವ ಶಕ್ತಿ ಇಲ್ಲ. ಅದಕ್ಕಾಗಿ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ನಿಲ್ಲಿಸಲು ಹೊರಟಿದ್ದಾರೆ. ನನ್ನ ಅಭಿಪ್ರಾಯವನ್ನು ನಾನು ಹೇಳುತ್ತಿದ್ದೇನೆ. ಅದು ಅವರು ಹಾಗೂ ಅವರ ಪಕ್ಷದ ನಿರ್ಧಾರ ಎಂದರು. 

ಉತ್ತರ ಕರ್ನಾಟಕದಲ್ಲಿ 35 ಕ್ಷೇತ್ರ ಗೆಲ್ಲುವ ಸಂಕಲ್ಪ: ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ

ಮೀಸಲಾತಿ ವಿಚಾರದಲ್ಲಿ ಸರಕಾರ ದೋಖಾ ಮಾಡಿದೆ: ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ, ಅಲ್ಲಿನ ಸ್ವಾಮೀಜಿಗಳು ಸಾಕಷ್ಟುಹೋರಾಟಗಳನ್ನೆಲ್ಲ ಮಾಡಿ, ಪಾದಾತ್ರೆ ನಡೆಸಿದ್ದರು. ಮೀಸಲಾತಿ ವಿಚಾರದಲ್ಲಿ ಸರ್ಕಾರ ರಂಗ ಅನ್ನುವುದನ್ನು ಮಂಗ ಮಾಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ನಿಲುವನ್ನು ಲೇವಡಿ ಮಾಡಿದ್ದಾರೆ.

ಪಂಚರತ್ನ ರಥಯಾತ್ರೆಯೊಂದಿಗೆ ಕಲಬುರಗಿ ದಕ್ಷಿಣದಲ್ಲಿ ಸಂಚರಿಸುತ್ತಿರುವ ಅವರು ಕಡಮಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 3ಬಿ ಮೀಸಲಾತಿ, 2ಡಿ ಗೆ ಸೇರ್ಪಡೆ ಮಾಡುವ ವಿಚಾರವಾಗಿ ಹೈಕೋರ್ಚ್‌ ನೀಡಿರುವ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. 3ಬಿ ಯನ್ನು 2ಡಿ ಗೆ ಸೇರಿಸಿ ರಂಗ ಎನ್ನುವ ಹೆಸರನ್ನೇ ಬಿಜೆಪಿಯವರು ಮಂಗ ಮಾಡಿದ್ದಾರೆ. ಇವರು ಹೋರಾಟಗಾರರ ಮೂಗಿಗೆ ತುಪ್ಪ ಸವರಿಲ್ಲ. ಹಣೆ ಮೇಲೆ ಸುರಿದು ವಾಸನೆ ಸಹ ಬಾರದಂತೆ ಮಾಡಿದ್ದಾರೆಂದು ಬಿಜೆಪಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ಮೋದಿ ಹೆಸರಿಗೆ ಜನ ಮರಳಾಗ್ತಾರಾ?: ನರೇಂದ್ರ ಮೋದಿ ಬಂದಿದ್ದಕ್ಕೆ ಕಾಂಗ್ರೆಸ್‌, ಜೆಡಿಎಸ್‌ಗೆ ಭಯ ಶುರುವಾಗಿದೆ ಎನ್ನುವ ಸಿಪಿ ಯೋಗೇಶ್ವರ ಹೇಳಿಕೆ ವಿಚಾರವಾಗಿ ಸ್ಪಂದಿಸಿದ ಅವರು, ನರೇಂದ್ರ ಮೋದಿ ಬಂದ್ರು ಅಂತ ಎಲ್ಲರೂ ಭಯ ಪಡ್ತಾರಾ? ನೀವು 3 ವರ್ಷ ಆಡಳಿತ ನಡೆಸಿದ್ರೂ ಭಯ ಆಗ್ತಿಲ್ಲ. ಮೋದಿ ಹೆಸರೇಳಿಕೊಂಡು ಎಷ್ಟುದಿನ ಚುನಾವಣೆ ಮಾಡ್ತೀರಿ? ನೀವು 3 ವರ್ಷ ಆಡಳಿತ ನಡೆಸಿ ಮಾಡಿದ್ದೇನು? ಮೋದಿ ಹೆಸರು ಹೇಳಿದ್ರೆ ಜನ ಮರುಳಾಗುತ್ತಾರಾ? ಹುಬ್ಬಳ್ಳಿಗೆ ಬಂದ್ರಲ್ಲ.. ಏನು ಕೊಡುಗೆ ಕೊಟ್ಟಿದ್ದಾರೆ? ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೊಡುಗೆ ಏನು? ಬಿಜೆಪಿಯ ದೆಹಲಿ ನಾಯಕರು ಇಲ್ಲಿ ಬಂದು ಭಯ ಹುಟ್ಟಿಸಲು ಸಾಧ್ಯವಿಲ್ಲವೆಂದು ರಾಜ್ಯ ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಟಾಂಗ್‌ ನೀಡಿದರು.

ಜೆಡಿಎಸ್‌ ಗೆದ್ದರೆ ಸಕ್ಕರೆ ಕಾರ್ಖಾನೆ ಸ್ಥಾಪನೆ: ಎಚ್‌.ಡಿ.ಕುಮಾರಸ್ವಾಮಿ

ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರ ಆಗಲಿ ಏನಾದ್ರೂ ಯೋಜನೆಗಳು ಕೊಟ್ರಾ? ಹುಬ್ಬಳ್ಳಿಗೆ ಮೋದಿ ಬಂದು ಹೋದರು, ಅಲ್ಲೇನು ಕೊಟ್ಟಿದ್ದಾರೆ ಹೇಳಿ? ವಿವೇಕಾನಂದ ಹೆಸರಿನಲ್ಲಿ ಕಾರ್ಯಕ್ರಮ ಮಾಡಿ ಅವರ ಭಾವಚಿತ್ರವೂ ಬಳಸಿಲ್ಲ ಅಂತ ಮಾಧ್ಯಮಗಳಲ್ಲಿ ನೋಡಿದೆ. ಬಿಜೆಪಿ ಪಾಲಿಗೆ ಇದು ಕೊನೆಯ ಚುನಾವಣೆ ಆಗಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು. ಭಾರತ್‌ ಜೋಡೋ ಸಮಾರೋಪ ಸಮಾರಂಭಕ್ಕೆ ತಮಗೆ ಯಾವುದೇ ಆಹ್ವಾನ ಬಂದಿಲ್ಲ. ನಾನು ಜನರ ಕಷ್ಟ-ಸುಖ ನೋಡಬೇಕು. ನಮಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿವೆ. ಕರೆದ್ರೂ ಕೂಡ ನಾವು ಹೋಗುವ ಪರಿಸ್ಥಿತಿಯಲ್ಲಿಲ್ಲ ಎಂದರು.