* ನಾಳೆಯಿಂದ (ಏ.16) ಜನತಾ ಜಲಧಾರೆ ಆರಂಭ* ಕೃಷ್ಣರಾಜ ಸಾಗರದಲ್ಲಿ ದೇವೇಗೌಡರು, ಆಲಮಟ್ಟಿಯಲ್ಲಿ ಹೆಚ್'ಡಿಕೆ ಅವರಿಂದ ಜಲಸಂಗ್ರಹ*15 ಕಡೆಗಳಲ್ಲಿ ಏಕಕಾಲಕ್ಕೆ ಜಲಸಂಗ್ರಹ: ಒಟ್ಟು 94 ಕಡೆ ಜಲ ಸಂಗ್ರಹ
ವರದಿ: ಸುರೇಶ್, ಏಷ್ಯಾನೆಟ್ ಸುವರ್ಣನ್ಯೂಸ್ ಬೆಂಗಳೂರು
ಬೆಂಗಳೂರು, (ಏ.15): ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ ಮಾಡಿ ಜಾತ್ಯತೀತ ಜನತಾ ದಳ ಹಮ್ಮಿಕೊಂಡಿರುವ ಜನತಾ ಜಲಧಾರೆ- ಗಂಗಾ ರಥಯಾತ್ರೆಗೆ ನಾಳೆಯಿಂದ (ಏಪ್ರಿಲ್ 16) ಚಾಲನೆ ಸಿಗಲಿದೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ರಾಜ್ಯದ 15 ಜೀವ ನದಿಗಳ ಪುಣ್ಯಜಲವನ್ನು ಕಲಶಕ್ಕೆ ತುಂಬಿಕೊಳ್ಳುವ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಹದಿನೈದು ಗಂಗಾ ರಥಗಳು ನಿಗಧಿತ ಸ್ಥಳಗಳನ್ನು ತಲುಪಿದ್ದು, ಆಯಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಶಾಸಕರು, ಕಾರ್ಯಕರ್ತರು ಅವುಗಳನ್ನು ಬರ ಮಾಡಿಕೊಂಡಿದ್ದಾರೆ.
Karnataka Politics: ಪಕ್ಷ ಬಲವರ್ಧನೆಗೆ ಜೆಡಿಎಸ್ ಜನತಾ ಜಲಧಾರೆ ಯಾತ್ರೆ
ನಾಳೆ(ಶನಿವಾರ) ಬೆಳಗ್ಗೆ ವೇದ ಮಂತ್ರ ಘೋಷಣೆ, ಪೂಜೆ, ಮಂಗಳ ವಾದ್ಯಗಳ ಸದ್ದು, ಕಲಾ ತಂಡಗಳ ಮೆರವಣಿಗೆ, ಕಲಶ ಪೂಜೆ, ಪಕ್ಷದ ಕಾರ್ಯಕರ್ತೆಯರಿಂದ ಕಲಶ ಮೆರವಣಿಗೆ ಇತ್ಯಾದಿಗಳ ನಡುವೆ ಪುಣ್ಯಜಲವನ್ನು ಸಂಗ್ರಹ ಮಾಡಿಕೊಳ್ಳಲಾಗುವುದು.
ಮಾಜಿ ಪ್ರಧಾನಮಂತ್ರಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು, ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದಲ್ಲಿ ಕಾವೇರಿ ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗುವರು.
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಜಲಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಇದಲ್ಲದೆ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲೆಯ ಹೇಮವತಿಯಲ್ಲಿ, ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ತದ ಉತ್ತರ ಪಿನಾಕಿನಿ ನದಿಯಲ್ಲಿ ಜಲ ಸಂಗ್ರಹ ಮಾಡಲಿದ್ದಾರೆ.
ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಮೇಕೆದಾಟು ನಲ್ಲಿ ಕಾವೇರಿ ನದಿ ನೀರು ಸಂಗ್ರಹ ಮಾಡಿಕೊಳ್ಳಲಿದ್ದಾರೆ.
ಎಲ್ಲೆಲ್ಲಿ ಜಲ ಸಂಗ್ರಹ? ಯಾರಿರುತ್ತಾರೆ?
ಮಾಂಜ್ರಾ ನದಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ್; ಭೀಮಾ ನದಿಯಲ್ಲಿ ನಾಗನಗೌಡ ಕಂದಕೂರ; ತುಂಗಭದ್ರಾ ಜಲಾಶಯದಲ್ಲಿ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಎನ್.ಎಂ.ನಬಿ; ಕೊಟ್ಟಿಗೆಹಾರ ಬಳಿಯ ಹೇಮಾವತಿ ನದಿಯಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಶಾಸಕ ವೈ ಎಸ್ ವಿ ದತ್ತಾ; ಕಾಳಿ ನದಿಯಲ್ಲಿ ಗಣಪಯ್ಯ ಹೆಗಡೆ, ಶಶಿ ಭೂಷಣ ಹೆಗಡೆ, ಯೋಗೇಶ್ ಶೆಟ್ಟಿ, ಸುಧಾಕರ್ ಶೆಟ್ಟಿ; ಸೌಪರ್ಣಿಕಾ ನದಿಯಲ್ಲಿ ಯೋಗೇಶ್ ಶೆಟ್ಟಿ; ತಲಕಾವೇರಿಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್; ಕಬಿನಿ ನದಿಯಲ್ಲಿ ಶಾಸಕರಾದ ಅಶ್ವಿನ್ ಕುಮಾರ್, ಮಂಜೇಗೌಡ ಹಾಗೂ ಚಿಕ್ಕಣ್ಣ; ಎತ್ತಿನಹೊಳೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಶಾಸಕರಾದ ಶಿವಲಿಂಗೇಗೌಡ, ಲಿಂಗೇಶ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದಲ್ಲಿ ಯುವ ಜನತಾ ದಳದ ಸಾರಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಜತೆಯಲ್ಲಿ ಶಾಸಕರಾದ ಕೆ.ಎಂ.ಕೃಷ್ಣಾರೆಡ್ಡಿ, ಗೋವಿಂದ ರಾಜು ಅವರುಗಳು ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಒಟ್ಟು 94 ಕಡೆ ಜಲ ಸಂಗ್ರಹ:
ಮೆ 8ರವರೆಗೂ ನಡೆಯಲಿರುವ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 94 ಕಡೆ ಜಲ ಸಂಗ್ರಹ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳನ್ನು ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತದ ಸರಕಾರ ಸಿಕ್ಕಿದರೆ ಐದೇ ವರ್ಷಗಳಲ್ಲಿ ಅನುಷ್ಟಾನಕ್ಕೆ ತರಲಾಗುವುದು ಎಂದು ಇದೇ ವೇಳೆ ಅವರು ಘೋಷಣೆ ಮಾಡಿದ್ದಾರೆ. ರಾಜ್ಯದ 180ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಜಲಧಾರೆಯ ಗಂಗಾ ರಥಗಳು ಹಾದು ಹೋಗಲಿವೆ ಎಂದು ಅವರು ತಿಳಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಡಿಜಿಟಲ್ ಪರದೆ:
15 ಕಡೆಗಳಲ್ಲಿ ನಾಯಕರೆಲ್ಲರೂ ಜಲ ಸಂಗ್ರಹ ಮಾಡುವ ನೇರ ದೃಶ್ಯಾವಳಿ ನೋಡಲು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೃಹತ್ ಡಿಜಿಟಲ್ ಪರದೆ ಅಳವಡಿಸಲಾಗಿದೆ. ಎಲ್ಲ ಪುಣ್ಯ ನದಿಗಳ ನೀರು ಸಂಗ್ರಹ ಮಾಡುವ ಪವಿತ್ರ ಕಾರ್ಯವು ಏಕಕಾಲದಲ್ಲಿ ನಡೆಯಲಿದ್ದು, ಆ ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
