ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸ್ವಾಮೀಜಿ ಡೆಡ್‌ ಲೈನ್ ಕೊಟ್ಟಿದ್ದಾರೆ. ಇದರಿಂದ ಬಿಸ್‌ವೈಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.

ದಾವಣಗೆರೆ, (ಡಿ.08): ಯಡಿಯೂರಪ್ಪನವರು ಸಿಎಂ ಆದಾಗಿನಿಂದ ಅವರಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇವೆ. ಮಳೆ, ಪ್ರವಾಹ ಬಳಿಕ ಕೊರೋನಾ ಬಂತು. ಈಗ ಸಂಪುಟ ವಿಸ್ತರಣೆ ತಲೆ ಮೇಲೆ ಕೂತಿದೆ. ಇದರ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ.

Add Asianetnews Kannada as a Preferred SourcegooglePreferred

ಹೌದು...ಮರಾಠ ಪ್ರಾಧಿಕಾರ ರಚನೆ ಮಾಡಿ ಬಳಿಕ ವೀರಶೈವ ಲಿಂಗಾಯತ ನಿಗಮ ಸ್ಥಾಪಿಸಿ ಬೀಸೋ ದೊಣ್ಣೆಯಿಂದ ಪಾರಾಗಿದ್ದರು. ಆದ್ರೆ, ಇದೀಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ಇಟ್ಟಿರುವ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂ ಬಿಎಸ್‌ವೈಗೆ ಡೆಡ್‌ ಲೈನ್ ಕೊಟ್ಟಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಡಿಸೆಂಬರ್​ 23 ರವರೆಗೆ ಡೆಡ್ ಲೈನ್ ಕೊಟ್ಟಿದ್ದಾರೆ.

ಅಸಮಾಧಾನ ಸ್ಫೋಟ: ಇಬ್ಬರು ಶಾಸಕರ ರಾಜೀನಾಮೆ ಪ್ರಸ್ತಾಪದಿಂದ ಸಿಎಂ ಕಕ್ಕಾಬಿಕ್ಕಿ

ದಾವಣಗೆರೆಯ ಖಾಸಗಿ ಹೋಟೆಲ್​ನಲ್ಲಿ ಪಂಚಮಸಾಲಿ ಸಭೆ ನಡೆಸಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಯಮೃತ್ಯುಂಜಯ ಸ್ವಾಮೀಜಿ, ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲು ಪಂಚಮಸಾಲಿ ಸಮಾಜದ ಕೊಡುಗೆ ಹೆಚ್ಚಿದೆ. ನಾನು ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಉಪವಾಸ ಕೂತಿದ್ದೆ. ಅವಾಗ ನೀವೇ ಕರೆ ಮಾಡಿ ನಮ್ಮ ಬೇಡಿಕೆ ಈಡೇರಿಸುತ್ತೇವೆ ಉಪವಾಸ ಕೈಬಿಡಿ ಎಂದಿದ್ರಿ. ಆ ರೀತಿ ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಹೇಳಿದರು.

ಡಿಸೆಂಬರ್ 23ರ ಒಳಗೆ ನೀವು ನಮಗೆ 2ಎ ಮೀಸಲಾತಿ ನೀಡಬೇಕು. ಇಲ್ಲವಾದರೆ 23 ರಿಂದ ವಿಧಾನ ಸೌಧ ಮುತ್ತಿಗೆ ಹಾಕಲು ಪಾದಯಾತ್ರೆ ಮಾಡಲಾಗುತ್ತೆ ಎಂದು ಎಚ್ಚರಿಕೆ ಕೊಟ್ಟರು.

ಮೊದಲೇ ಸಂಪುಟ ವಿಸ್ತರಣೆ ಹೈಕಮಾಂಡ್ ಅನುಮತಿ ನೀಡದಿರುವುದರಿಂದ ಒತ್ತಡದಲ್ಲಿರುವ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪಗೆ ಇದೀಗ ಈ ಡೆಡ್‌ಲೈನ್‌ ಸಂಕಷ್ಟ ಶುರುವಾಗಿದೆ.