ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನನಗೆ ಕರೆ ಮಾಡಿ, ಪಕ್ಷದ ವಿರುದ್ಧ ಮಾತನಾಡದಂತೆ ಹೇಳಿದ್ದು ನಿಜ. ಆದರೆ, ಯಾವುದೇ ನೋಟಿಸನ್ನು ನನಗೆ ಕೊಟ್ಟಿಲ್ಲ. ಉಚ್ಚಾಟನೆ ಮಾಡುತ್ತೇನೆ ಎಂದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. 

ದಾವಣಗೆರೆ (ಜ.24): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನನಗೆ ಕರೆ ಮಾಡಿ, ಪಕ್ಷದ ವಿರುದ್ಧ ಮಾತನಾಡದಂತೆ ಹೇಳಿದ್ದು ನಿಜ. ಆದರೆ, ಯಾವುದೇ ನೋಟಿಸನ್ನು ನನಗೆ ಕೊಟ್ಟಿಲ್ಲ. ಉಚ್ಚಾಟನೆ ಮಾಡುತ್ತೇನೆ ಎಂದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಸ್‌ವೈ ಬುದ್ಧಿವಾದ ಹೇಳಿದ್ದು ನಿಜ. ನಮ್ಮ ನಾಯಕರಾದ ಯಡಿಯೂರಪ್ಪನವರು ನನಗೆ ಹೇಳಿದ ಮಾತುಗಳ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಹೊಡೆದು ಹೇಳುವ ಅಧಿಕಾರ ಯಡಿಯೂರಪ್ಪ ಹಾಗೂ ಸಂಘಟನೆಗೆ ಇದೆ. ನಾವೂ ಸಹ ಹಿರಿಯರ ನಾಯಕತ್ವದಲ್ಲಿ ನಿಯೋಗ ಹೋಗಿ, ಬಿಎಸ್‌ವೈರನ್ನು ಭೇಟಿ ಮಾಡಿ, ಜಿಲ್ಲೆಯ ರಾಜಕೀಯ ಸತ್ಯದ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಾವಣಗೆರೆ ಲೋಕಸಭಾ ಸದಸ್ಯರ ಹಠಾವೋ ಅಂದಿದ್ದು ನಾನಲ್ಲ. ಕಾಂಗ್ರೆಸ್‌ನವರು ಅಂತಹ ಮಾತುಗಳನ್ನಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ದಾವಣಗೆರೆ ಕ್ಷೇತ್ರದ ಬಗ್ಗೆ ಸಮೀಕ್ಷೆ ಮಾಡಿ, ಲೋಕಸಭೆಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದೆ. ನನ್ನ ಮಾತಿಗೆ ನಾನು ಈಗಲೂ ಬದ್ಧ. ಆದರೆ, ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಯಡಿಯೂರಪ್ಪನವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂತವರ ಗೂಂಡಾಗಿರಿಗೆ ನಾನು ಹೆದರುವವನಲ್ಲ. ಕೀಳು ಮಟ್ಟದ ರಾಜಕಾರಣವನ್ನು ನಾನು ಮಾಡುವುದೂ ಇಲ್ಲ ಎಂದರು.

ಬಾಲರಾಮನ ಪ್ರಾಣ ಪ್ರತಿಷ್ಠೆ ಅಮೃತ ಕಾಲ: ಲೋಕ ಕಲ್ಯಾಣಕ್ಕಾಗಿ ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಿಸಿ ಬಾಲರಾಮನ ಪ್ರತಿಷ್ಠಾಪನಾ ಕಾರ್ಯ ಯಶಸ್ವಿಯಾಗಿ ಜರುಗಿದೆ ಇದೊಂದು ಅಮೃತ ಕಾಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದ ಕೋಟೆಯಲ್ಲಿನ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀರಾಮಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಇಲ್ಲದ್ದು ಬಹುಕೋಟಿ ಹಿಂದೂಗಳಿಗೆ ಬಹು ದೊಡ್ಡ ಕೊರಗಾಗಿತ್ತು. ಇಂದು ಬಹುದಿನಗಳ ಕನಸು ನನಸಾಗಿ ವಿಶ್ವವೇ ಅಯೋಧ್ಯೆಯತ್ತ ನೋಡುವ ಕಾಲ ಬಂದಿದ್ದು ಅತ್ಯಂತ ಸಂತಸದ ವಿಷಯ ಎಂದರು.

ಶ್ರೀರಾಮನ ಬಗ್ಗೆ ಸಚಿವ ರಾಜಣ್ಣ ಹಗುರ ಹೇಳಿಕೆ ಸಲ್ಲದು: ಎಂ.ಪಿ.ರೇಣುಕಾಚಾರ್ಯ

ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ ಎನ್ನುವ ನಾಣ್ಣುಡಿಯಂತೆ, ಅಯೋಧ್ಯೆ ನಗರದಲ್ಲಿ ಶ್ರೀರಾಮ ಜನಿಸಿದ್ದು ಹಾಗೂ ಶ್ರೀರಾಮಮಂದಿರ ಇದ್ದದ್ದು ಎಲ್ಲವೂ ನಿಜವಾದ ಇತಿಹಾಸವಾಗಿತ್ತು. ಇದನ್ನರಿತು ದೇಶದ ಬಹುಕೋಟಿ ಹಿಂದೂಗಳು ಹೋರಾಟ ಮಾಡಿದರು. ಮಂದಿರ ನಿರ್ಮಾಣವಾಗಿ ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ ಇದಕ್ಕಿಂತ ಹೆಮ್ಮೆ ಬೇರೆ ಏನಿದೆ ಎಂದರು. ಮನುಕುಲದ ರಕ್ಷಕ ಎಂದೇ ನಾಮಾಂಕಿತ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಇಂತಹ ಕಾರ್ಯಗಳು ಸಾಧ್ಯ ಇದರಿಂದ ಮೋದಿ ವಿಶ್ವ ನಾಯಕರಾಗಿದ್ದಾರೆ ಎಂದರು.