ಕಾಂಗ್ರೆಸ್‌ ಸರ್ಕಾರ ಬೀಳಿಸುವುದು ಅಸಾಧ್ಯವಾದ ಮಾತು. ಸರ್ಕಾರ ಬೀಳಿಸಲು ಬಿಜೆಪಿ-ಜೆಡಿಎಸ್‌ನವರಿಗೆ 60 ಮಂದಿ ಶಾಸಕರು ಬೇಕು. ಅವರು ಇಬ್ಬರಿಂದ ನಾಲ್ಕು ಶಾಸಕರನ್ನು ಕರೆದುಕೊಂಡು ಬರಲಿ ಸಾಕು ಎಂದು ಸಚಿವ ಎಂ.ಬಿ.ಪಾಟೀಲ್‌ ಅವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ. 

ಬೆಂಗಳೂರು (ಮೇ.12): ಕಾಂಗ್ರೆಸ್‌ ಸರ್ಕಾರ ಬೀಳಿಸುವುದು ಅಸಾಧ್ಯವಾದ ಮಾತು. ಸರ್ಕಾರ ಬೀಳಿಸಲು ಬಿಜೆಪಿ-ಜೆಡಿಎಸ್‌ನವರಿಗೆ 60 ಮಂದಿ ಶಾಸಕರು ಬೇಕು. ಅವರು ಇಬ್ಬರಿಂದ ನಾಲ್ಕು ಶಾಸಕರನ್ನು ಕರೆದುಕೊಂಡು ಬರಲಿ ಸಾಕು ಎಂದು ಸಚಿವ ಎಂ.ಬಿ.ಪಾಟೀಲ್‌ ಅವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ. ಅಲ್ಲದೇ, ಬಿಜೆಪಿಯ ಶಾಸಕರೇ ನಮ್ಮ‌ ಜೊತೆ ಇದ್ದಾರೆ. ಜೆಡಿಎಸ್‌ನಲ್ಲಿರುವವರು ಅತಂತ್ರರಾಗಿದ್ದಾರೆ. ಅವರ ನಾಯಕರೇ ನಮ್ಮನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರದ್ದು ರಾಜಕೀಯ ಹೇಳಿಕೆಯಷ್ಟೇ ಎಂದು ಹೇಳಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ತಿಂಗಳುಗಳಲ್ಲಿ ಸರ್ಕಾರ ಬೀಳುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆ ಶುದ್ಧ ಸುಳ್ಳು. ಅವರು ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಕನಿಷ್ಠ 20 ಸ್ಥಾನ ಗೆಲ್ಲಲಿದೆ. ತಳಮಟ್ಟದಲ್ಲಿ ಊಹೆ ಮಾಡಲಾರದಷ್ಟು ಪ್ರಮಾಣದಲ್ಲಿ ಮಹಿಳೆಯರು, ಬಡ ಕುಟುಂಬದವರು ಕಾಂಗ್ರೆಸ್‌ಗೆ ಒಲವು ತೋರಿದ್ದಾರೆ. ವಿಜಯಪುರದಲ್ಲಿ ಒಂದು ಲಕ್ಷ ಲೀಡ್‌ನಲ್ಲಿ ನಾವು ಜಯ ಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಬಿಜೆಪಿ ಗೆದ್ದರೆ ವಿಪಕ್ಷ ನಾಯಕರು ಜೈಲಿಗೆ: ಅರವಿಂದ ಕೇಜ್ರಿವಾಲ್‌ ಭವಿಷ್ಯ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೊಡ್ಡವರೇ ನಮ್ಮ ಹಿಂದೆ ಇದ್ದಾರೆ ಎಂಬ ದೇವರಾಜೇಗೌಡ ಹೇಳಿಕೆ‌ಗೆ, ‘ಈಗ ಎಸ್ಐಟಿ‌ ರಚನೆ ಆಗಿದೆ. ಸಚಿವನಾಗಿ ನಾನು ಏನನ್ನೂ ಮಾತನಾಡಲು ಬಯಸಲ್ಲ. ಆದರೆ ಪ್ರಜ್ವಲ್‌ ಪ್ರಕರಣವನ್ನು ಕುಮಾರಸ್ವಾಮಿ ಸಿಬಿಐಗೆ ಕೊಡಬೇಕು ಎಂದಿದ್ದಾರೆ. ಯಾಕೆ ಕ್ಲೀನ್ ಚಿಟ್ ಕೊಡೋಕಾ? ಅಥವಾ ಪ್ರಜ್ವಲ್‌ನ ವಾಷಿಂಗ್ ಮೆಷಿನ್‌ಗೆ ಹಾಕೋಕಾ? ಎಂದು ಲೇವಡಿ ಮಾಡಿದರು. ಲೋಕಸಭೆ ಫಲಿತಾಂಶ ಬಳಿಕ ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಯಾವಾಗ ಏನು ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದಷ್ಟೇ ಹೇಳಿದರು.